×
Ad

ಜಿಎಸ್‌ಟಿಯಿಂದ ಪುಸ್ತಕಗಳ ಮಾರಾಟದಲ್ಲಿ ಇಳಿಮುಖ: ಡಾ. ವಸುಂಧರಾ ಭೂಪತಿ

Update: 2017-11-21 20:31 IST

ಮಂಗಳೂರು, ನ.21: ಕೇಂದ್ರ ಸರಕಾರ ಪುಸ್ತಕಗಳ ಮೇಲೆ ಶೇ.18ರಷ್ಟು ಜಿಎಸ್‌ಟಿ ವಿಧಿಸುತ್ತಿದ್ದುದರಿಂದ ಪುಸ್ತಕ ಕೊಂಡುಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಹೇಳಿದರು.

ನಗರದಲ್ಲಿ ಮಂಗಳವಾರ ನಡೆದ ಪುಸ್ತಕ ಸಂಸ್ಕೃತಿ ಮತ್ತು ಪುಸ್ತಕೋದ್ಯಮ ಚರಿತ್ರೆ ಸಮಾಲೋಚನಾ ಸಭೆಯ ಬಳಿಕ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಜಿಎಸ್‌ಟಿ ಹೇರಿಕೆಯ ಬಗ್ಗೆ ಪುಸ್ತಕ ಪ್ರಾಧಿಕಾರವು ಈಗಾಗಲೇ ಚರ್ಚೆ ನಡೆಸಿದ್ದು, ಜಿಎಸ್‌ಟಿ ಕಡಿಮೆ ಮಾಡಬೇಕು ಎಂದು ಕೇಂದ್ರವನ್ನು ಒತ್ತಾಯಿಸಲಾಗಿದೆ. ಅಲ್ಲದೆ ಲೇಖಕರಿಗೆ ನೀಡುವ ಗೌರವಧನದ ಮೇಲೂ ಜಿಎಸ್‌ಟಿ ವಿಧಿಸಲಾಗುತ್ತಿದೆ. ಲೇಖಕರಿಗೆ ಸಿಗುವ ಗೌರವಧನ ಅತಿ ಕಡಿಮೆ. ಅದರ ಮೇಲೂ ಜಿಎಸ್‌ಟಿ ಹಾಕಿದರೆ ಏನೂ ಉಳಿಯುವುದಿಲ್ಲ. ಆದ್ದರಿಂದ ಜಿಎಸ್‌ಟಿ ಇಳಿಸುವಂತೆ ಈಗಾಗಲೇ ಕೇಂದ್ರ ತೆರಿಗೆ ಇಲಾಖೆಯ ಆಯುಕ್ತರಿಗೆ ಪ್ರಾಧಿಕಾರದ ವತಿಯಿಂದ ಮನವಿ ಸಲ್ಲಿಸಲಾಗಿದೆ ಎಂದು ಡಾ.ವಸುಂಧರಾ ಭೂಪತಿ ತಿಳಿಸಿದರು.

ರಾಜ್ಯಾದ್ಯಂತ ಪುಸ್ತಕ ಪ್ರಿಯರಿದ್ದಾರೆ. ಅವರಿಗೆ ಅವರಿರುವ ಸ್ಥಳದಲ್ಲಿಯೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಿತ ಎಲ್ಲ ಅಕಾಡಮಿಗಳ ಹಾಗೂ ಪ್ರಾಧಿಕಾರಗಳ ಪ್ರಕಟಿತ ಪುಸ್ತಕಗಳು ಲಭ್ಯವಾಗುವಂತೆ ಸದ್ಯದಲ್ಲೇ ಪುಸ್ತಕ ಜಾಥವನ್ನು ನಡೆಸಲು ತೀರ್ಮಾನಿಸಲಾಗಿದೆ. ರಿಯಾಯಿತಿ ದರದಲ್ಲಿ ಎಲ್ಲ ಪುಸ್ತಕಗಳು ಲಭ್ಯವಾಗುತ್ತದೆ. ಡಿಸೆಂಬರ್‌ನಲ್ಲಿ ರಾಜ್ಯದ ಎಲ್ಲ ಪ್ರಕಾಶಕರ ಸಮ್ಮೇಳನವನ್ನು ಬೆಂಗಳೂರಿನಲ್ಲಿ ನಡೆಸಲಾಗುವುದು ಎಂದರು.

ಲಲಿತ ಕಲೆ, ಗುಡಿಕೈಗಾರಿಕೆ, ಗೃಹ ಉಪಯೋಗಿ ವಸ್ತು ವಿನ್ಯಾಸಗಳಿಂದ, ಆರೋಗ್ಯ ಅರಿವು ಇತ್ಯಾದಿಗಳನ್ನು ಒಳಗೊಂಡಂತೆ ನೂರಾರು ಮಂದಿ ಮತ್ತು ಹತ್ತು ಹಲವು ಮಾರ್ಗಗಳಿಂದ ಸಮಾಜಕ್ಕೆ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ವಿಭಿನ್ನ ಸಂವೇದನೆ ದನಿಗಳನ್ನು ಒಗ್ಗೂಡಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸುವ ಯೋಜನೆ ಇದೆ ಎಂದ ವಸುಂಧರಾ ಭೂಪತಿ ಪ್ರೌಢಶಾಲೆ ಮಟ್ಟದ ವಿದ್ಯಾರ್ಥಿಗಳಲ್ಲಿ ಪುಸ್ತಕ ಸಂಸ್ಕೃತಿಯನ್ನು ಹೆಚ್ಚಿಸುವ ಉದ್ದೇಶದಿಂದ ‘ಅಚ್ಚುಮೆಚ್ಚಿನ ಪುಸ್ತಕ’ ಎಂಬ ಯೋಜನೆ ಹಮ್ಮಿಕೊಳ್ಳಲಾಗುವುದು. ಇದರಲ್ಲಿ ವಿದ್ಯಾರ್ಥಿಗಳ ನೆಚ್ಚಿನ ಪುಸ್ತಕಗಳ ಕುರಿತು ಚರ್ಚೆ ಏರ್ಪಡಿಸಲಾಗುವುದು. ಪಿಯು ವಿದ್ಯಾರ್ಥಿಗಳನ್ನು ಸೇರಿಸಿ ಜಾಣ ಜಾಣೆಯರ ಬಳಗ ಮಾಡಲಾಗುವುದು. ಕಾಲೇಜುಗಳಲ್ಲಿ ವಿದ್ಯಾರ್ಥಿಗಳೇ ಬಳಗ ರಚನೆ ಮಾಡಿ ಸ್ಪರ್ಧಾ ಕಾರ್ಯಕ್ರಮಗಳನ್ನು ಏರ್ಪಡಿಸಿ ಅದರ ವರದಿಯನ್ನು ಪ್ರಾಧಿಕಾರಕ್ಕೆ ನೀಡಬಹುದು. ಪ್ರಾಧಿಕಾರ ಬಹುಮಾನ ವಿತರಿಸುತ್ತದೆ ಎಂದರು.

ಪುಸ್ತಕೋದ್ಯಮವು 18,19 ಮತ್ತು 20ನೆ ಶತಮಾನದವರೆಗೆ ನಡೆದು ಬಂದ ಹಾದಿಯನ್ನು ತಿಳಿಸಲು 3 ಸಂಪುಟವನ್ನು ಹೊರತರಲಾಗುವುದು. ಇದಕ್ಕಾಗಿ ವಿದ್ವಾಂಸರಾದ ಎಂ.ಎಚ್.ಕೃಷ್ಣಯ್ಯ, ಪ್ರೊ.ಎ.ವಿ. ನಾವಡ, ಸುಜ್ಞಾನಮೂರ್ತಿ, ರಮಾಕಾಂತ ಜೋಶಿ, ಅಪಾರ ಅವರನ್ನೊಳಗೊಂಡ ಸಮಿತಿ ರಚನೆ ಮಾಡಲಾಗುವುದು. ಇದರೊಂದಿಗೆ ಧಾರವಾಡ, ಗುಲ್ಬರ್ಗ, ಮಂಗಳೂರು, ಬೆಂಗಳೂರಿನಲ್ಲಿ ಲೇಖಕರು ಮತ್ತು ಪ್ರಕಾಶಕರ ಸಭೆ ನಡೆಸಿ ಚರ್ಚಿಸಲಾಗುವುದು. ಮುಂದಿನ ವರ್ಷ ಪ್ರಾಧಿಕಾರದ 25ನೇ ವರ್ಷಾಚರಣೆ ನಡೆಯಲಿದ್ದು, ಅಷ್ಟರೊಳಗೆ ಸಂಪುಟ ಪ್ರಕಟಿಸಲಾಗುವುದು ಎಂದು ವಸುಂಧರಾ ಭೂಪತಿ ನುಡಿದರು.
ಈ ಸಂದರ್ಭ ಸಂಶೋಧಕ ಪ್ರೊ. ಎ.ವಿ. ನಾವಡ ಉಪಸ್ಥಿತರಿದ್ದರು.

ವಿಶೇಷ ಕೋರ್ಸ್: ವಿಶ್ವ ವಿದ್ಯಾನಿಲಯ ಮಟ್ಟದಲ್ಲಿ ಪ್ರಕಾಶನದ ವಿವಿಧ ಹಂತಗಳಾದ ಹಸ್ತಪ್ರತಿಯಿಂದ ಆರಂಭಿಸಿ ಡಿಟಿಪಿ, ಕರಡಚ್ಚು ತಿದ್ದುವುದು, ಪುಸ್ತಕ ಪ್ರಕಟಣೆ, ಪ್ರಕಾಶನ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಡಿಪ್ಲೊಮಾ ಅಥವಾ ಸರ್ಟಿಫಿಕೆಟ್ ಕೋರ್ಸ್ ಆರಂಭಿಸಲು ವಿವಿಧ ವಿವಿಗಳನ್ನು ಸಂಪರ್ಕಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News