'ದೇಶದ ಸಂವಿಧಾನವೇ ಸುಪ್ರೀಂ ಹೊರತು ಧರ್ಮ ಸಂಸತ್ ನಿರ್ಣಯಗಳು ಅಲ್ಲ'
ಪಡುಬಿದ್ರೆ, ನ. 27: ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಧರ್ಮಸಂಸತ್ ಬದಲಾವಣೆ ಮಾಡಲು ಅಸಾಧ್ಯ ಎಂದು ದಸಂಸ ರಾಜ್ಯ ಸಂಚಾಲಕ ಶೇಖರ್ ಹೆಜ್ಮಾಡಿ ಹೇಳಿದರು.
ರಾಜ್ಯ ಮಾನವ ಬಂಧುತ್ವ ವೇದಿಕೆ ವತಿಯಿಂದ ಡಿಸೆಂಬರ್ 8 ರಂದು ಬೆಳಗಾವಿಯಲ್ಲಿ ನಡೆಯುವ ಮೌಢ್ಯ ವಿರೋಧೀ ಸಂಕಲ್ಪ ದಿನದ ಅಂಗವಾಗಿ ಹಮ್ಮಿಕೊಂಡ ಮೌಢ್ಯ ವಿರೋಧೀ ಸಂಕಲ್ಪ ಜಾಥಾ ಸೋಮವಾರ ಪಡುಬಿದ್ರೆ ಗೆ ಆಗಮಿಸಿದ ಸಂದರ್ಭದಲ್ಲಿ ದಸಂಸ ರಾಜ್ಯ ಸಂಚಾಲಕ ಶೇಖರ್ ಹೆಜ್ಮಾಡಿ ಮಾತನಾಡಿದ ಅವರು, ಸಂವಿಧಾನವೇ ದೇಶಕ್ಕೆ ಸುಪ್ರೀಂ ಹೊರತು ಉಡುಪಿಯಲ್ಲಿ ನಡೆದ ಧರ್ಮ ಸಂಸದ್ ಅಂಗೀಕರಿಸಿದ ನಿರ್ಣಯಗಳು ಅಲ್ಲ ಎಂದರು.
ಅಂಬೇಡ್ಕರ್ ಅಸ್ಪೃಶ್ಯತೆ, ಅಸಮಾನತೆಯ ವಿರುದ್ಧ ಹೋರಾಟ ಮಾಡಿ ದೇಶಕ್ಕೆ ಪ್ರಪಂಚದಲ್ಲಿ ಅತೀ ಉತ್ಕೃಷ್ಟ ಸಂವಿಧಾನವನ್ನು ಅಂಬೇಡ್ಕರ್ ನೀಡಿದ್ದಾರೆ ಎಂದ ಅವರು, ಮೌಢ್ಯ ವಿರೋಧಿ ಶಾಸನ ಕಾಯ್ದೆಯನ್ನು ಜಾರಿಗೊಳಿಸಲು ಪ್ರಗತಿಪರ ಚಳುವಳಿಗಳು ಹೋರಾಟಗಳಿಂದಾಗಿ ಮೌಢ್ಯ ಶಾಸನ ವಿರೋಧಿ ಶಾಸನ ಜಾರಿಯಾಗಿದೆ. ಕಾಯ್ದೆ ಇನ್ನಷ್ಟು ಕಠಿಣವಾಗಬೇಕಾಗಿದೆ. ಈ ಮೂಲಕ ಎಲ್ಲರಿಗೂ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಸಿಗಬೇಕಾಗಿದೆ ಎಂದರು.
ರಾಜ್ಯ ಮಾನವ ಬಂಧುತ್ವ ವೇದಿಕೆ ವತಿಯಿಂದ ಡಿಸೆಂಬರ್ 6 ರಂದು ಬೆಳಗಾವಿಯಲ್ಲಿ ನಡೆಯುವ ಮೌಢ್ಯ ವಿರೋಧೀ ಸಂಕಲ್ಪ ದಿನದ ಅಂಗವಾಗಿ ಹಮ್ಮಿಕೊಂಡ ಮೌಢ್ಯ ವಿರೋಧೀ ಸಂಕಲ್ಪ ಜಾಥಾ ಸೋಮವಾರ ಪಡುಬಿದ್ರಿಗೆ ಆಗಮಿಸಿದ ಸಂದರ್ಭ ನಡೆದ ಸಭೆಯಲ್ಲಿ ಅವರು ಮಾತನಾಡಿದ ಅವರು, ನೈತಿಕತೆ ಇದ್ದರೆ ಮಠ ಮಂದಿರಗಳಲ್ಲಿ ಮುಜರಾಯಿ ದೇವಳಗಳಲ್ಲಿ ಪಂಕ್ತಿಬೇದ ನಿಲ್ಲಿಸಲಿ ಎಂದು ಆಗ್ರಹಿಸಿದರು.
ಈ ಸಂದರ್ಭ ಅವರು "ಮನುಜ ಜಾತಿ ತಾನೊಂದೆವಲಂ" ಗೀತೆ ಹಾಡಿದರು. ಜಾಥಾದಲ್ಲಿ ರಾಜೇಶ್ ಶೇರಿಗಾರ್ ಪಡುಬಿದ್ರಿ, ಐರಣಿ ಚಂದ್ರ ದಾವಣಗೆರೆ, ಕೃಷ್ಣಯ್ಯ ಲಾಲ, ಪ್ರಶಾಂತ್ ಬೆಳ್ತಂಗಡಿ, ಪರಶುರಾಮ ಜಗಳೂರು, ದಕ ಜಿಲ್ಲಾ ಸಹಸಂಚಾಲಕ ಚೆನ್ನಕೇಶವ ಮತ್ತಿತರರು ಉಪಸ್ಥಿತರಿದ್ದರು.
ಕಾಪುವಿನಲ್ಲೂ ಸ್ವಾಗತ: ಕಾಪು ಪೇಟೆಯಲಿ ಜಾಥಾವನ್ನು ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ದಸಂಸ ಮುಖಂಡ ಉಮಾನಾಥ್ ಪಡುಬಿದ್ರೆ , ಅಂಬೇಡ್ಕರ್ ಅವರ ಕನಸುಗಳು ಮತ್ತು ಆಶಯಗಳನ್ನು ನಾಶ ಮಾಡುವ ಪ್ರಯತ್ನವನ್ನು ಮನುವಾದಿಗಳು ಮತ್ತು ಲಾಭಕೋರ ಕಾರ್ಪೋರೇಟ್ ಶಕ್ತಿಗಳು ಜೊತೆಯಾಗಿ ಮಾಡುತ್ತಿವೆ. ಧರ್ಮ, ದೇವರು , ಜಾತಿಗಳು , ಜೀವ ವಿರೋಧಿ ಮೌಢ್ಯಗಳು ಮತ್ತು ಕಂದಾಚಾರಗಳ ಬಲೆಯನ್ನು ಬೀಸಿ ಮುಗ್ದ ಜನರ ಶೋಷಣೆಯನ್ನು ಮಾಡುವಲ್ಲಿ ಈ ಶಕ್ತಿಗಳು ಕಾರ್ಯ ಪ್ರವೃತ್ತವಾಗಿವೆ. ಆಮೂಲಕ ಶೋಷಿತ ಸಮುದಾಯಗಳನ್ನು ಸಾಮಾಜಿಕವಾಗಿ , ರಾಜಕೀಯವಾಗಿ , ಶೈಕ್ಷಣೆಕವಾಗಿ , ಆರ್ಥಿಕವಾಗಿ ಮೂಲೆಗುಂಪು ಮಾಡಲಾಗುತ್ತಿದೆ. ಈ ಮೋಸದಿಂದ ಜನರನ್ನು ಹೊರತರಬೇಕಾದರೆ ಅವರಲ್ಲಿ ಸ್ವಾಭಿಮಾನ ಮತ್ತು ವೈಚಾರಿಕ ಪ್ರಜ್ಞೆಯನ್ನು ಮೂಡಿಸುವುದು ಅನಿವಾರ್ಯವಾಗಿದೆ ಎಂದರು.