ತಾಲೂಕಿಗೊಂಡು ಮರಳು ಸಂಗ್ರಹ ಕೇಂದ್ರ: ಡಿಸಿ
ಮಂಗಳೂರು, ನ.30: ಜಿಲ್ಲೆಯಲ್ಲಿ ಕೃತಕ ಮರಳು ಅಭಾವ ತಡೆಯಲು ಮತ್ತು ಎಲ್ಲರಿಗೂ ಸಕಾಲದಲ್ಲಿ ಮರಳು ಲಭಿಸುವಂತಾಗಲು ಪ್ರತೀ ತಾಲೂಕಿನಲ್ಲೊಂದು ಮರಳು ಸಂಗ್ರಹ ಕೇಂದ್ರವನ್ನು ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅಧ್ಯಕ್ಷತೆಯಲ್ಲಿ ಗುರುವಾರ ದ.ಕ.ಜಿ.ಪಂ. ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಮರಳಿನ ಅಭಾವ ತೀವ್ರವಾಗಿದೆ. ಇದರಿಂದ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿದೆ ಎಂಬ ದೂರಿನ ಹಿನ್ನಲೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ಸರಕಾರಿ ಅಭಿವೃದ್ಧಿ ಕಾಮಗಾರಿಯ ಬಳಕೆಗಾಗಿ ನಾನ್ ಸಿಆರ್ಝೆಡ್ ವ್ಯಾಪ್ತಿಯಲ್ಲಿ ಮರಳು ಬ್ಲಾಕ್ಗಳನ್ನು ಸ್ಥಾಪಿಸಲಾಗುವುದು ಎಂದರು.
ಅದಕ್ಕೂ ಮೊದಲು ಮಾತನಾಡಿದ ರಾ.ಹೆ. ಪ್ರಾಧಿಕಾರದ ಯೋಜನಾ ನಿರ್ದೇಶಕರು ರಾ.ಹೆ. ಅಭಿವೃದ್ಧಿ ಕಾಮಗಾರಿಗೂ ಮರಳಿನ ಅಭಾವವು ತೊಡಕಾಗಿ ಪರಿಣಮಿಸಿದೆ. ಸಕಾಲದಲ್ಲಿ ಮರಳು ಸಿಕ್ಕರೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ವೇಗ ಸಿಗಲಿದೆ ಎಂದರು. ಇದರಿಂದ ಅಸಮಾಧಾನಗೊಂಡ ಸಚಿವ ರಮಾನಾಥ ರೈ ಎಲ್ಲದಕ್ಕೂ ಮರಳಿನ ಅಭಾವವಿದೆ ಎನ್ನುವುದು ಸರಿಯಲ್ಲ. ಹೆದ್ದಾರಿ ಮತ್ತು ಸರ್ವಿಸ್ ರಸ್ತೆ ಹಾಗೂ ಸೇತುವೆಗಳ ಕಾಮಗಾರಿಗೆ ವೇಗ ನೀಡಿ ಎಂದು ಸೂಚಿಸಿದರು.
ಮುಂದಿನ ತಿಂಗಳಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ತಾಲೂಕಿಗೂ ಭೇಟಿ ನೀಡಲಿದ್ದಾರೆ. ಹಾಗಾಗಿ ಎಲ್ಲ ಅಧಿಕಾರಿಗಳು ತಮ್ಮ ಇಲಾಖಾ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗೆ ಆದ್ಯತೆ ನೀಡಬೇಕು ಎಂದ ಸಚಿವ ರಮಾನಾಥ ರೈ, ಶಿರಾಡಿ ಘಾಟಿಯ ಎರಡನೆ ಹಂತದ ಕಾಮಗಾರಿಯು ಶೀಘ್ರ ಆರಂಭಗೊಳ್ಳಲಿದೆ. ಪರ್ಯಾಯವಾಗಿ ಚಾರ್ಮಾಡಿ ಘಾಟಿಯನ್ನು ಸುಸ್ಥಿತಿಯಲ್ಲಿಡಲು ಅಧಿಕಾರಿಗಳು ಮುಂದಾಗಬೇಕು ಎಂದರು.
ಉಳ್ಳಾಲ ನಗರ ಸಭೆ ಮತ್ತು ಬಂಟ್ವಾಳ ಪುರಸಭೆಯ ಒಳಚರಂಡಿ ಕಾಮಗಾರಿಯನ್ನೂ ಕೂಡ ಅತೀ ಶೀಘ್ರ ಮುಗಿಸಬೇಕು ಎಂದು ಸಚಿವ ರಮಾನಾಥ ರೈ, ಗ್ರಾಮ ಮಟ್ಟದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಅಂಬೇಡ್ಕರ್ ಭವನದ ಕಾಮಗಾರಿಗೆ ಆಡಳಿತಾತ್ಮಕ ಮಂಜೂರಾತಿ ಪಡೆದು ಕಾಮಗಾರಿ ಆರಂಭಿಸಲು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿಗೆ ಸೂಚಿಸಿದರು.
ಮಂಗಳೂರಿನ ಎಮ್ಮೆಕೆರೆಯಲ್ಲಿ ನಿರ್ಮಿಸಲು ಉದ್ದೇಶಿಸಲಾದ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ನಿರ್ಮಾಣ ಕಾಮಗಾರಿಗೆ ಹಸಿರು ನಿಶಾನೆ ತೋರಿಸಿ ಕಳೆದ ಮೂರು ವರ್ಷದಿಂದ ಇದು ಚರ್ಚೆಗೆ ಬರುತ್ತಲೇ ಇದ್ದು, ಯಾವುದೇ ಪ್ರಗತಿ ಕಾಣುತ್ತಿಲ್ಲ. ಈ ಬಗ್ಗೆ ಶೀಘ್ರ ಒಂದು ಸಭೆ ಕರೆದು ಕೆಲಸ ಆರಂಭಿಸಲು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡುವಂತೆ ಸಚಿವ ರೈ ಜಿಲ್ಲಾಧಿಕಾರಿಗೆ ನಿರ್ದೇಶಿಸಿದರು.
ಪುತ್ತೂರಿನ ಪಡುಮಲೆಯಲ್ಲಿ ಕೋಟಿಚೆನ್ನಯ್ಯರ ಜನ್ಮಸ್ಥಳ ಅಭಿವೃದ್ಧಿ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವ ರೈ ಅನುಷ್ಠಾನಾಧಿಕಾರಿ ಕಾಮಗಾರಿ ಆರಂಭಕ್ಕೆ ಮುತುವರ್ಜಿ ವಹಿಸಲು ಸೂಚಿಸಿದರು.
ಪಶ್ಚಿಮ ವಾಹಿನಿ ಯೋಜನೆಯಡಿ ಮಂಜೂರಾದ 121 ಕೋ.ರೂ.ವಿನಲ್ಲಿ ಕನಿಷ್ಠ 10-12 ಸಣ್ಣ ಸಣ್ಣ ಅಣೆಕಟ್ಟುಗಳನ್ನು ನಿರ್ಮಿಸಬಹುದು. ರೈತರಿಗೆ ಮತ್ತು ಬೇಸಿಗೆ ಕಾಲದಲ್ಲಿ ನೀರಿನ ಕೊರತೆ ನೀಗಿಸುವುದೇ ಇದರ ಉದ್ದೇಶವಾಗಿದೆ. ದೊಡ್ಡ ಮೊತ್ತದಿಂದ ಒಂದೆರಡು ಕಿಂಡಿ ಅಣೆಕಟ್ಟು ನಿರ್ಮಿಸುವ ಬದಲು ಸಣ್ಣ ಸಣ್ಣ ಅಣೆಕಟ್ಟುಗಳನ್ನು ಕಟ್ಟಿದರೆ ಪ್ರಯೋಜನವಿದೆ. ಹಾಗಾಗಿ ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ನಡೆಸಿ ಎಂದು ಸೂಚಿಸಿದ ಸಚಿವ ರಮಾನಾಥ ರೈ ಈ ಯೋಜನೆಗೆ 300 ಕೋ.ರೂ. ಮಂಜೂರು ಮಾಡಿಸುವ ಗುರಿ ಹೊಂದಲಾಗಿದೆ ಎಂದರು.
ಪ್ರತೀ ಗ್ರಾಮದಲ್ಲೊಂದು ಸಹಕಾರಿ ಸಂಘ ಸ್ಥಾಪಿಸಲು ಸರಕಾರದ ಸುತ್ತೋಲೆ ಇದ್ದರೂ ಕೂಡ ಈ ಬಗ್ಗೆ ಕ್ರಮ ಕೈಗೊಳ್ಳದ ಬಗ್ಗೆ ಸಹಕಾರ ಸಂಘಗಳ ಉಪನಿಬಂಧಕರನ್ನು ತರಾಟೆಗೆ ತೆಗೆದುಕೊಂಡ ಸಚಿವ ರೈ ಈ ನಿಟ್ಟಿನಲ್ಲಿ ಸೂಕ್ತ ಕ್ರಮಕ್ಕೆ ಸೂಚಿಸಿದರು.
ವಿಧಾನ ಪರಿಷತ್ ಸದಸ್ಯ ಕೊಟ ಶ್ರೀನಿವಾಸ ಪೂಜಾರಿ, ಶಾಸಕ ಅಭಯಚಂದ್ರ ಜೈನ್ ಚರ್ಚೆಯಲ್ಲಿ ಪಾಲ್ಗೊಂಡರು. ಸಭೆಯಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಾಹುಲ್ ಹಮೀದ್, ಸರ್ವೋತ್ತಮ ಗೌಡ, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಜಿಪಂ ಸಿಇಒ ಡಾ.ಎಂ.ಆರ್.ರವಿ, ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಉಪಸ್ಥಿತರಿದ್ದರು.