ತಮಿಳುನಾಡು: ಚಂಡಮಾರುತದ ಹಾವಳಿಗೆ ನಾಲ್ವರು ಬಲಿ

Update: 2017-11-30 14:23 GMT

 ಚೆನ್ನೈ, ನ.30: ತಮಿಳುನಾಡಿನಲ್ಲಿ ‘ಒಕ್ಹಿ’ ಚಂಡಮಾರುತದ ಪ್ರತಾಪಕ್ಕೆ ನಾಲ್ವರು ಬಲಿಯಾಗಿದ್ದು, ರೈಲು ಸಂಚಾರವನ್ನು ಭಾಗಶಃ ರದ್ದುಪಡಿಸಲಾಗಿದೆ . ಬಿರುಗಾಳಿಯೊಂದಿಗೆ ಸುರಿದ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.

 ಗುರುವಾರ ಬೆಳಿಗ್ಗೆ ಕನ್ಯಾಕುಮಾರಿಯನ್ನು ಪ್ರವೇಶಿಸಿದ ಒಕ್ಹಿ ಚಂಡಮಾರುತದಿಂದಾಗಿ ತಮಿಳುನಾಡು ಮತ್ತು ಕೇರಳದಲ್ಲಿ ಭಾರೀ ಗಾಳಿ ಸಹಿತ ಮಳೆಯಾಗಿದ್ದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಮರ ಉರುಳಿ ಓರ್ವ ಮಹಿಳೆಯೂ ಸೇರಿ ನಾಲ್ವರು ಮೃತಪಟ್ಟಿದ್ದಾರೆ.

 ರಾಜೇಂದ್ರನ್, ಕುಮಾರಸನ್ ಸಿ.ಸರಸ್ವತಿ ಮತ್ತು ಅಲೆಕ್ಸಾಂಡರ್ ಮೃತಪಟ್ಟವರು . ರಾಜ್ಯದ ಕರಾವಳಿ ಪ್ರದೇಶದಲ್ಲಿ ಭಾರೀ ಮಳೆಯಾಗಿದೆ. ಗಂಟೆಗೆ ಸುಮಾರು 150 ಕಿ.ಮೀ. ವೇಗದಲ್ಲಿ ಚಂಡಮಾರುತ ಲಕ್ಷದ್ವೀಪದತ್ತ ಸಾಗಲಿದೆ ಎಂದು ಹವಾಮಾನ ಇಲಾಖಾಧಿಕಾರಿಗಳು ತಿಳಿಸಿದ್ದು, ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಕೇರಳ ರಾಜ್ಯದ ತಿರುವನಂತಪುರದ ವಿಜಿಂಜಮ್ ಎಂಬಲ್ಲಿ ಸಮುದ್ರಕ್ಕೆ ಇಳಿದ ಎಂಟು ಮಂದಿ ನಾಪತ್ತೆಯಾಗಿರುವುದಾಗಿ ಸ್ಥಳೀಯ ಮೀನುಗಾರರು ತಿಳಿಸಿದ್ದಾರೆ. ಹಲವೆಡೆ ಭೂಕುಸಿತ ಕೂಡಾ ಉಂಟಾಗಿದೆ . ತೀವ್ರ ಎಚ್ಚರಿಕೆ ಸ್ಥಿತಿ ಕಾಯ್ದುಕೊಳ್ಳುವಂತೆ ರಾಜ್ಯ ಸರಕಾರ ವಿಪತ್ತು ನಿರ್ವಹಣಾ ಸಮಿತಿ ಹಾಗೂ ನಗರಾಡಳಿತಕ್ಕೆ ಸೂಚಿಸಿದೆ.

 ತಮಿಳುನಾಡಿನ ತೂತುಕುಡಿ, ತಿರುನೆಲ್ವೇಲಿ, ರಾಮನಾಥಪುರಂ, ಕನ್ಯಾಕುಮಾರಿಯಲ್ಲಿ ಹಾಗೂ ನಾಗಪಟ್ಟಿಣಂ, ತಿರುವರೂರು ಮತ್ತು ತಂಜಾವೂರಿನ ಕೆಲವು ಭಾಗಗಳಲ್ಲಿ ಮಳೆಯಾಗಿದೆ ಎಂದು ಇಲಾಖೆ ತಿಳಿಸಿದೆ. ಕನ್ಯಾಕುಮಾರಿಯಲ್ಲಿ ಮುಸಲಧಾರೆ ಮಳೆಯೊಂದಿಗೆ ಬೀಸಿದ ಬಿರುಗಾಳಿಗೆ ಹಲವಾರು ಮರಗಳು ಬುಡಮೇಲಾಗಿದ್ದು ನಾಲ್ವರು ಮೃತಪಟ್ಟಿದ್ದಾರೆ.

ಜನಜೀವನ ಅಸ್ತವ್ಯಸ್ತವಾಗಿದ್ದು ಮನೆಯಿಂದ ಹೊರಗೆ ಬಾರದಂತೆ ಜನತೆಗೆ ಸೂಚನೆ ನೀಡಲಾಗಿದೆ. ಕನ್ಯಾಕುಮಾರಿ ಜಿಲ್ಲೆಯಲ್ಲಿ ಗಾಳಿಯಿಂದಾಗಿ ವಿದ್ಯುತ್ ಸಂಚಾರ ಮೊಟಕುಗೊಂಡಿದ್ದು ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಕನ್ಯಾಕುಮಾರಿಯ ಮೂಲಕ ಸಾಗುವ ಕೆಲವು ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದ್ದರೆ ಕೆಲವು ರೈಲುಗಳ ಸಂಚಾರವನ್ನು ವಿಳಂಬಿಸಲಾಗಿದೆ.

ಅಲ್ಲದೆ ಭಾರೀ ಮರಗಳು ಉರುಳಿ ಬಿದ್ದಿರುವ ಕಾರಣ ವಾಹನ ಸಂಚಾರಕ್ಕೂ ತೊಂದರೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ತಮಿಳುನಾಡಿನ ತಿರುನೆಲ್ವೇಲಿ ಮತ್ತು ಟ್ಯುಟಿಕೋರಿನ್‌ನಲ್ಲೂ ಭಾರೀ ಗಾಳಿಯ ಜೊತೆಗೆ ಮಳೆ ಸುರಿದಿದ್ದು ಕಡಲ ತೀರದಲ್ಲಿ ನಿಲ್ಲಿಸಲಾಗಿದ್ದ ದೋಣಿಗಳಿಗೆ ಹಾನಿಯಾಗಿದೆ.ದಕ್ಷಿಣ ತಮಿಳುನಾಡಿನ ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

 ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ತಮಿಳುನಾಡು, ದಕ್ಷಿಣ ಕೇರಳದಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಚಂಡಮಾರುತ ಲಕ್ಷದ್ವೀಪದತ್ತ ಸಾಗಲಿದ್ದು ಶುಕ್ರವಾರ ಅರಬ್ಬಿ ಸಮುದ್ರದ ದಕ್ಷಿಣ ಭಾಗದಲ್ಲಿ ಭಾರೀ ಗಾಳಿ ಸಹಿತ ಮಳೆಯಾಗಲಿದೆ. ಡಿಸೆಂಬರ್ 2ರಂದು ಚಂಡಮಾರುತ ಲಕ್ಷದ್ವೀಪವನ್ನು ಪ್ರವೇಶಿಸುವ ನಿರೀಕ್ಷೆಯಿದೆ ಎಂದು ಭೂವಿಜ್ಞಾನ ಇಲಾಖೆಯ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಈ ಚಂಡಮಾರುತಕ್ಕೆ ಒಕ್ಹಿ ಎಂಬ ಹೆಸರನ್ನು ಬಾಂಗ್ಲಾದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News