ಕೌಶಲ್ಯಾಭಿವೃದ್ಧಿಗೆ 15 ಕೋಟಿ ರೂ. ಅನುದಾನ: ಸಚಿವ ಪ್ರಮೋದ್
ಉಡುಪಿ, ನ.30: ಯುವಕರ ಅಭಿರುಚಿಗೆ ತಕ್ಕಂತೆ ಸ್ಪಂದಿಸುವುದು ಸರಕಾರ ಹಾಗೂ ಇಲಾಖೆ ಜವಾಬ್ದಾರಿಯಾಗಿದೆ. ಹೀಗಾಗಿ ಈ ವರ್ಷದ ಬಜೆಟ್ನಲ್ಲಿ ರಾಜ್ಯ ಸರಕಾರ ಕೌಶಲ್ಯ ಅಭಿವೃದ್ಧಿಗಾಗಿ ಹೆಚ್ಚು ಒತ್ತು ನೀಡಿ ಯುವಸಬಲೀಕರಣ ಇಲಾಖೆಗೆ 15 ಕೋಟಿ ರೂ. ಅನುದಾನವನ್ನು ನೀಡಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಪಂ, ಉಡುಪಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಹಾಗೂ ಜಿಲ್ಲಾ ಯುವ ಸಂಘಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಉಡುಪಿ ಅಜ್ಜರ ಕಾಡು ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ ಹಮ್ಮಿಕೊಳ್ಳಲಾದ 2017- 18ನೆ ಸಾಲಿನ ಮೂರು ದಿನಗಳ ರಾಜ್ಯಮಟ್ಟದ ಯುವಜನೋತ್ಸವವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಇಂದು ಯುವಕರ ಮಿತೃತ್ವ ಹಾಗೂ ಭಾತೃತ್ವಕ್ಕೆ ಅಡಚಣೆಯಾಗುವ ಕೆಲಸ ನಡೆಯುತ್ತಿದೆ. ಕೆಲವೇ ಕೆಲವು ಜಾತಿ, ಧರ್ಮದವರು ಸೇರಿಸಿ ನಡೆಸುವ ಕಾರ್ಯಕ್ರಮಕ್ಕೆ ಭಾತೃತ್ವ ಅಂತಹ ಹೇಳುವುದಿಲ್ಲ. ಅದು ಯುವಕರನ್ನು ಪ್ರತ್ಯೇಕಿ ಸುವ ಕೆಲಸ ಮಾಡುತ್ತದೆ. ಆದರೆ ನಾವು ಯುವಕರನ್ನು ಜೋಡಿಸುವ ಕೆಲಸ ಹೆಚ್ಚು ಹೆಚ್ಚು ನಡೆಸಬೇಕು ಎಂದರು.
ಯುವಜನೋತ್ಸವದ ಬಗ್ಗೆ ಯುವಕರಲ್ಲಿ ಆಸಕ್ತಿ ಕಡಿಮೆ ಆಗುತ್ತಿರುವುದು ದುರಾದೃಷ್ಟಕರ. ಈಗಿನ ಯುವಕರ ಅಭಿರುಚಿಗಳು ಇಂದು ವಾಟ್ಸಾಪ್ ಫೇಸ್ ಬುಕ್ನಂತಹ ಸಾಮಾಜಿಕ ಜಾಲತಾಣಗಳ ಕಡೆ ವಾಲುತ್ತಿದೆ. ಯುವಕರು ತಮ್ಮ ಪ್ರತಿಭೆಗಳನ್ನು ವೇದಿಕೆಗಳಲ್ಲಿ ತೋರಿಸುವ ಪ್ರವೃತಿ ಕಡಿಮೆಯಾಗಿದೆ. ಈ ಮನೋಭಾವವು ಹತೋಟಿಗೆ ತರದಿದ್ದರೆ ಮುಂದಿನ 30ವರ್ಷಗಳಲ್ಲಿ ಇಂತಹ ಯುವಜನೋತ್ಸವಗಳು ಕಣ್ಮರೆಯಾಗುವ ಸಾಧ್ಯತೆಗಳಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ಜಿಪಂ ಅಧ್ಯಕ್ಷ ದಿನಕರ ಬಾಬು ವಹಿಸಿದ್ದರು. ಮುಖ್ಯ ಅತಿಥಿ ಗಳಾಗಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹಮೂರ್ತಿ, ರಾಜ್ಯ ಒಕ್ಕೂಟದ ಅಧ್ಯಕ್ಷ ಡಾ.ಬಾಲಾಜಿ, ಜಿಲ್ಲಾ ಮಾಜಿ ಅಧ್ಯಕ್ಷ ಮನೋಹರ್ ಕುಂದರ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ ಎಂ.ಪಾಟೀಲ್, ಅಪರ ಜಿಲ್ಲಾಧಿಕಾರಿ ಅನುರಾಧ, ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್, ಇಲಾಖೆಯ ಜಂಟಿ ನಿರ್ದೇಶಕ ಅಭಿಜಿನ್, ಉಪನಿರ್ದೇಶಕ ರಂಗಯ್ಯ, ಅಜ್ಜರ ಕಾಡು ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ಪೆ್ರೂ.ಜಗದೀಶ್ ರಾವ್ ಉಪಸ್ಥಿತರಿದ್ದರು.
ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶ್ ಕ್ರಮಧಾರಿ ವಂದಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮನಿರೂಪಿಸಿದರು.
ಇದಕ್ಕೂ ಮುನ್ನಾ ಬೆಂಗಳೂರಿನ ಆನಂದ ವಿಕ್ರಮ ನೇತೃತ್ವದ ಶೈಲೂಶಂ ತಂಡದಿಂದ ನೃತ್ಯ ದರ್ಪಣ ಕಾರ್ಯಕ್ರಮ ಮತ್ತು ಸಮಾರಂಭದ ಬಳಿಕ ಸಾಯಿದೀಪ ಕಲಾತಂಡ ಶಿವಮೊಗ್ಗ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ಜರಗಿತು.
ಮೂರು ದಿನಗಳ ಈ ಉತ್ಸವದಲ್ಲಿ ಯುವಕ/ಯುವತಿಯರಿಗೆ ಜನಪದ ನೃತ್ಯ, ಜನಪದ ಹಾಡು, ಏಕಾಂಕ ನಾಟಕ, ಆಶು ಭಾಷಣ, ಶಾಸ್ತ್ರೀಯ ನೃತ್ಯ, ಶಾಸ್ತ್ರೀಯ ಗಾಯನ, ಶಾಸ್ತ್ರೀಯ ವಾದನ, ಹಾರ್ಮೋನಿಯಂ, ಗಿಟಾರ್ ವಾದನ ಸ್ಪರ್ಧೆಗಳು ನಡೆಯಲಿವೆ. ರಾಜ್ಯದ 30 ಜಿಲ್ಲೆಯ 1500ಕ್ಕೂ ಸ್ಪರ್ಧಾಳು ಗಳು ಹಾಗೂ ತಂಡದ ವ್ಯವಸ್ಥಾಪಕರು ಭಾಗವಹಿಸಿದ್ದಾರೆ.