ಮಹಿಳೆಯ ಸರ ಅಪಹರಣ
Update: 2017-12-01 16:04 GMT
ಕಾಪು, ಡಿ.1: ಬೈಕ್ನಲ್ಲಿ ಆಗಮಿಸಿದ ಇಬ್ಬರು ಅಪರಿಚಿತ ಯುವಕರು, ವಿಳಾಸ ಕೇಳುವ ನೆಪದಲ್ಲಿ ಮುಂಜಾನೆ ವಾಕಿಂಗ್ ಹೋಗುತಿದ್ದ ಮಹಿಳೆಯೊ ಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಅಪಹರಿಸಿದ ಘಟನೆ ಇಂದು ಮುಂಜಾನೆ ಕಾಪು ಪಡುಗ್ರಾಮದ ತೆಂಕುಪೇಟೆಯಲ್ಲಿ ನಡೆದಿದೆ.
ತೆಂಕುಪೇಟೆ ಪಡುಗ್ರಾಮದ ಕುಮುದ ಜಿ.ಪ್ರಭು (75) ಎಂಬವರು ಎಂದಿನಂತೆ ಇಂದು ಸಹ ಬೆಳಗ್ಗೆ 5:25ಕ್ಕೆ ವಾಕಿಂಗ್ ಹೋಗುತಿದ್ದಾಗ ಹಿಂದಿನಿಂದ ಬೈಕ್ ನಲ್ಲಿ ಬಂದ ಹೆಲ್ಮೆಟ್ ಧರಿಸಿದ್ದ ಇಬ್ಬರು ಯುವಕರು, ಕೃಷ್ಣಕುಮಾರ್ ಎಂಬವರ ವಿಳಾಸ ಕೇಳಿದ್ದು, ಆಗ ಬೈಕಿನ ಹಿಂಬದಿ ಕುಳಿತಿದ್ದ ವ್ಯಕ್ತಿ ಇಳಿದು ಬಂದು ಕುಮುದ ಅವರನ್ನು ದೂಡಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದುಕೊಂಡು ಬೈಕಿನಲ್ಲಿ ಮಂಗಳೂರಿನತ್ತ ಪರಾರಿಯಾಗಿರುತ್ತಾರೆ ಎಂದು ಕುಮುದ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. 3.5 ಪವನ್ ತೂಕದ ಚಿನ್ನದ ಸರದ ಮೌಲ್ಯ 75,000 ರೂ. ಗಳೆಂದು ಅಂದಾಜಿಸಲಾಗಿದೆ.
ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.