ಆಳ್ವಾಸ್ ನುಡಿಸಿರಿಯ ಸಮ್ಮೇಳನದಲ್ಲಿ ಕಂಡು ಬಂದ ಜನಸಾಮಾನ್ಯರ ಬಹುಮುಖಿ ಬದುಕು

Update: 2017-12-02 15:04 GMT

ಮಂಗಳೂರು.ಡಿ. 2:ಆಳ್ವಾಸ್ ನುಡಿಸಿರಿಯ ಸಮ್ಮೇಳನದಲ್ಲಿ ನಾಡಿನ ವಿವಿಧ ಕಡೆಗಳಿಂದ ಕಂಡು ಬಂದ ಜನಸಾಮಾನ್ಯರು ಬದುಕು ಹಾಗೂ ತುಳುನಾಡಿನ ಬಹುಮುಖಿ ಬದುಕು ಬೇರೆ ಬೇರೆ ಕಡೆಗಳಲ್ಲಿ ಅನಾವರಣಗೊಂಡಿತು.

ಕೃಷಿ ಸಿರಿಯ ವಸ್ತು ಪ್ರದರ್ಶನದ ಪಕ್ಕದಲ್ಲಿ ಸಾವಯವ ಗೊಬ್ಬರಗಳನ್ನು ಬಳಸಿ ಬೆಳೆಸಲಾದ ತರಕಾರಿಗಳ ತೋಟ ನುಡಿಸಿರಿಗೆ ಬಂದ ಜನರನ್ನು ಆಕರ್ಷಿಸುತ್ತಿತ್ತು. ತೋಟದಲ್ಲಿ ಹೀರೆಕಾಯಿ, ಪಡುವಲ ಕಾಯಿ , ಹಾಗಲಕಾಯಿ ವಿವಿಧ ತಳಿಯ ಕುಂಬಳ ಕಾಯಿ, ಚೀನಿ ಕಾಯಿ ಮೀಟರ್ ಅಲಸಂಡೆ ಬದನೆ, ಸೌತೆ, ಬಾಳೆಕಾಯಿ ಜೊತೆಗೆ ತುಳುನಾಡಿನಲ್ಲಿ ಹಿತ್ತಲಲ್ಲಿ ಬೆಳೆಯುವ ಬಸಳೆ, ಮೆಣಸು,ಹರಿವೆ ಮೊದಲಾದ ತರಕಾರಿಗಳನ್ನು ಮೂರು ತಿಂಗಳ ಹಿಂದೆ ವಿದ್ಯಾಗಿರಿಯ ಗುಡ್ಡದಲ್ಲಿ ಸಮತಟ್ಟು ಮಾಡಿ ಸ್ಥಳೀಯ ಕೃಷಿಕೂಲಿಕಾರರ ಸಹಾಯದಿಂದ ಬೆಳೆಸಲಾಗಿತ್ತು. ಗುಡ್ಡದ ಪರಿಸರವಾದ ಕಾರಣ ಸ್ವಲ್ಪ ಬಿಸಿಲು ಹೆಚ್ಚಾಗಿದ್ದ ಕಾರಣ ಹಾಗೂ ಮಣ್ಣು ಇನ್ನೂ ಫಲವತ್ತಾಗಿದ್ದರೆ ಇನ್ನೂ ಚೆನ್ನಾಗಿ ತೋಟ ನಿರ್ಮಾಣವಾಗುತ್ತಿತ್ತು ಎಂದು ಬೆಳೆಗಾರರು ತಿಳಿಸಿದ್ದಾರೆ.

ಈ ನಡುವೆ ಕೃಷಿ ಕೆಲಸಕ್ಕೆ ಬೇಕಾದ ಸಲಕರಣೆಗಳಾದ ಕಬ್ಬಿಣದ ಸಲಕರಣೆ ತಯಾರಿಸುವ ಕುಶಲ ಕರ್ಮಿಗಳು ಕುಡುಗೋಲು,ಕಬ್ಬಿಣದ ಸಲಾಕೆ,ತಯಾರಿಸಿ ಮಾರಾಟ ಮಾಡುತ್ತಿದ್ದರು.ಕೃಷಿ ಮೇಳದಲ್ಲಿ ಹಲವಾರು ಕೃಷಿಕರು ತಮಗೆ ಬೇಕಾದ ಗಿಡಗಳನ್ನು, ತರಕಾರಿ ಬೀಜಗಳನ್ನು ಖರೀದಿಸುತ್ತಿರುವುದು ಕಂಡು ಬಂತು. ಇದೇ ಪರಿಸರದಲ್ಲಿ ಬುರುಡೆ ಜಂಗಮರು ಕಣಿ ಹೇಳುವುದರಲ್ಲಿ ಉತ್ತರ ಕರ್ನಾಟಕದ ಬೀದಿ ಬದಿಯ ಯಕ್ಷಿಣಿಗಾರರು ಹಾಗೂ ಉತ್ತರ ಕರ್ನಾಟಕದ ವಿವಿಧ ಜಾನಪದ ತಂಡದವರು ಸಮಾರಂಭದ ವೇದಿಕೆಯ ಹೊರಗು ತಮ್ಮ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನಸಾಮಾನ್ಯರೊಂದಿಗೆ ತಮ್ಮದೇ ಆದ ರೀತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ತುಳುನಾಡಿನಲ್ಲಿ ದೀಪಾವಳಿಯ ಸಂದರ್ಭದಲ್ಲಿ ಕಾಣುವ ಗೂಡು ದೀಪಗಳು ಆಳ್ವಾಸ್ ನುಡಿ ಸಿರಿಯ ಸಭಾಂಗಣದಲ್ಲಿ ರಾರಾಜಿಸುತ್ತಿತ್ತು. 12 ವೇದಿಕೆಗಳಲ್ಲಿ ವಿವಿಧ ಕಾರ್ಯಕ್ರಮಗಳ ಜೊತೆ ಕುಸ್ತಿ ಪ್ರದರ್ಶನ ಕೋಣದ ಮೂಲಕ ತಿರುಗುವ ಕಬ್ಬಿಣ ಗಾಣದ ಯಂತ್ರ,ತೆಂಗಿನ ಕಾಯಿ ತುರಿಯುವ ಯಂತ್ರಗಳು ತುಳುನಾಡಿನ ದಿನ ಬಳಕೆಯ ಸಾಮಗ್ರಿಗಳ ಪ್ರರ್ಶನ ವಿಶೇಷ ಆಕರ್ಷಣೆಯಾಗಿತ್ತು.

ಕೆ.ವಿ.ಸುಬ್ಬಣ್ಣ ಬಯಲು ರಂಗ ಮಂದಿರದಲ್ಲಿ ಬಾರ್ಕೂರು ಹುಬಾಶಿಕ ಕೊರಗರ ವೇದಿಕೆಯ ಡೋಲುವಾದನ,ಕುಣಿತ ಬುರ್ರಕಥಾ ಈರಮ್ಮನ ತಂಡದಿಂದ ಕಾರ್ಯಕ್ರಮ, ತುಳುನಾಡಿನ ಬೆದ್ರ ಫ್ರೆಂಡ್ಸ್ ತಂಡದ ಹುಲಿ ಕುಣಿತದ ಪ್ರದರ್ಶನ ಒಂದು ಕಡೆ ನಡೆಯುತ್ತಿದ್ದರೆ ಇನ್ನೊಂದೆಡೆ ಜನಪದ ಹಾಡುಗಾರರು ವೇದಿಕೆಯಲ್ಲಿ ತಮ್ಮ ಹಾಡಿನ ಮೂಲಕ ಜನರನ್ನು ರಂಜಿಸುತ್ತಿದ್ದರು.

ನುಡಿಸಿರಿಯಲ್ಲೂ ಸ್ವಚ್ಛತೆ ಜಾಗೃತಿ:- ನುಡಿ ಸಿರಿಯ ಆವರಣದಲ್ಲಿ ಮೂಡಬಿದ್ರೆ ಪುರಸಭೆಯ ವತಿಯಿಂದ ನಿರ್ಮಿಸಲಾದ ಸ್ಟಾಲ್ ಒಂದರಲ್ಲಿ ಜನರಿಗೆ ಮನೆಯ ತ್ಯಾಜ್ಯವನ್ನು ವಿಂಗಡಿಸಿ ಸಂಸ್ಕರಿಸುವ ಬಗ್ಗೆ ಜನರಿಗೆ ಕರಪತ್ರದೊಂದಿಗೆ ಮಾಹಿತಿ ನೀಡಲಾಗುತ್ತಿತ್ತು. ಜೊತೆಗೆ ಪೈಪ್ ಕಂಫೋಸ್ಟ್ ಮೂಲಕ ಜೈವಿಕ ಗೊಬ್ಬರ ತಯಾರಿಯ ಮಾಹಿತಿ ನೀಡಲಾಗುತ್ತಿತ್ತು.

ಕನ್ನಡ ನಾಡು ನುಡಿಯ ಹಬ್ಬದಲ್ಲಿ ತುಳು ಸಿರಿ:- ನುಡಿಸಿರಿಯಲ್ಲಿ ತುಳುನಾಡಿನ ತುಳು ಭಾಷೆಗೂ ಮನ್ನಣೆ ನೀಡುವ ಸಲುವಾಗಿ ತುಳು ಸಿರಿಯನ್ನು ಹಮ್ಮಿಕೊಳ್ಳಲಾಗಿತ್ತು. ತುಳು ಸಾಹಿತ್ಯ ಅಕಾಡಮಿಯ ಹಾಲಿ ಹಾಗೂ ಮಾಜಿ ಅಧ್ಯಕ್ಷರ ಪಾಲ್ಗೊಳ್ಳುವಿಕೆಯೊಂದಿಗೆ ತುಳು ಕಲಾವಿದರು ವಿವಿಧ ಕಾರ್ಯ ಕ್ರಮಗಳೊಂದಿಗೆ ತುಳುಸಿರಿ ನಾಡಹಬ್ಬದಲ್ಲಿ ಪಾತ್ರ ಪಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News