×
Ad

ರಾಷ್ಟ್ರೀಯ ಹೆದ್ದಾರಿಗೆ ಕೇಂದ್ರ ಸರಕಾರದಿಂದ ರೂ. 500 ಕೋಟಿ ಅನುದಾನ : ಕಟೀಲ್

Update: 2017-12-06 18:56 IST

ಪುತ್ತೂರು,ಡಿ6:  ಬಿ.ಸಿ. ರೋಡ್-ಸುರತ್ಕಲ್ ರಾಷ್ಟ್ರೀಯ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಿ ಸಂಪೂರ್ಣ ಕಾಂಕ್ರಿಟೀಕರಣಗೊಳಿಸಲು ಕೇಂದ್ರ ಸರಕಾರ ರೂ. 500 ಕೋಟಿ ಅನುದಾನ ಮಂಜೂರು ಮಾಡಿದೆ. ಡಿ.ಪಿ.ಆರ್. ಮೂಲಕ ಟೆಂಡರ್ ಕರೆಯಲಾಗಿದೆ ಎಂದು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು. 

ಪುತ್ತೂರಿನಲ್ಲಿ ಸುದ್ದಿಗಾರಗೊಂದಿಗೆ ಮಾತನಾಡಿದ ಅವರು ಬಿ.ಸಿ.ರೋಡ್-ಅಡ್ಡಹೊಳೆ ನಡುವಣ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಚತುಷ್ಪಥ ಕಾಮಗಾರಿಯನ್ನು ನಡೆಸಲು ಈಗಾಗಲೇ ಗುತ್ತಿಗೆದಾರ ಸಂಸ್ಥೆ ಕಾಮಗಾರಿಗಳನ್ನು ಆರಂಭಿಸಿದೆ. ಜನವರಿ 1ರಿಂದ ಶಿರಾಡಿ ಘಾಟ್ ರಸ್ತೆಯ 3ನೇ ಹಂತದ ಕಾಂಕ್ರೀಟ್ ಕಾಮಗಾರಿ ಆರಂಭವಾಗಲಿದೆ. 13 ಕಿ.ಮೀ. ಉದ್ದ ಘಾಟ್ ರಸ್ತೆಯು ರೂ. 120ಕೋಟಿ ವೆಚ್ಚದಲ್ಲಿ ಸಂಪೂರ್ಣ ಕಾಂಕ್ರಿಟೀಕರಣಗೊಳ್ಳಲಿದೆ ಎಂದರು. 

ಕಾಂಞಗಾಡ್-ಕಲ್ಲಡ್ಕ ಅಂತರಾಜ್ಯ ಲೋಕೋಪಯೋಗಿ ರಸ್ತೆಗೆ ಮತ್ತು ಗುಂಡ್ಯ-ಸುಬ್ರಹ್ಮಣ್ಯ ಲೋಕೋಪಯೋಗಿ ರಸ್ತೆಯ ಅಭಿವೃದ್ಧಿ ಕಾಮಗಾರಿಗಾಗಿ ಕೇಂದ್ರ ಸರಕಾರವು ಅನುದಾನ ಬಿಡುಗಡೆಗೊಳಿಸಿದೆ. ಕುಲಶೇಖರ-ಕಾರ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಲಿ ಇರುವ ರಸ್ತೆಯನ್ನು ಅಭಿವೃದ್ಧಿಪಡಿಸಲು ರೂ. 17 ಕೋಟಿ ಅನುದಾನವನ್ನು ಕೇಂದ್ರ ಸರಕಾರ ಬಿಡುಗಡೆಗೊಳಿಸಿದೆ. ಈ ರಸ್ತೆಯನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಒಪ್ಪಿಗೆ ನೀಡಿದ್ದು, ಭೂಸ್ವಾಧೀನ ಕುರಿತಂತೆ ಮುಂದಿನ ಕ್ರಮಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಕಡತ ದ.ಕ. ಜಿಲ್ಲಾಧಿಕಾರಿಗಳ ಕಚೇರಿಗೆ ಬಂದಿದೆ ಎಂದು ವಿವರಿಸಿದರು. 

ಮಾಣಿ-ಮೈಸೂರು ರಾಜ್ಯ ಹೆದ್ದಾರಿಯು ರಾಷ್ಟ್ರೀಯ ಹೆದ್ದಾರಿಗೆ ಮೇಲ್ದರ್ಜೆಗೇರಿರುವ ಹಿನ್ನಲೆಯಲ್ಲಿ ದ.ಕ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಾಣಿ-ಸಂಪಾಜೆ ನಡುವಣ ಹೆದ್ದಾರಿಯ ರಸ್ತೆಯ ಇಕ್ಕೆಲಗಳಲ್ಲಿನ ಪೊದೆಗಳನ್ನು ತೆರವುಗೊಳಿಸುವ ಮತ್ತು ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜನವರಿ 1ರ ಮೊದಲು ಈ ಕಾಮಗಾರಿಗಳನ್ನು ಪೂರ್ಣಗೊಳಿಸಲು ಗಡುವು ವಿಧಿಸಲಾಗಿದೆ ಎಂದು ಸಂಸದ ನಳಿನ್ ಹೇಳಿದರು. 

ಈ ಸಂದರ್ಭದಲ್ಲಿ ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಪುತ್ತೂರು ಎಪಿಎಂಸಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ತಾಲೂಕು ಪಂಚಾಯತ್ ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ಸಹಕಾರಿ ಮುಂದಾಳು ಕಂಟ್ರಮಜಲು ಭಾಸ್ಕರ ರೈ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News