ವೈಜ್ಞಾನಿಕ ಮನೋಭಾವ ಬೆಳೆಸಲು ಡಾ. ಶ್ರೀನಿವಾಸ ಕಕ್ಕಿಲ್ಲಾಯ ಕರೆ
ಮಂಗಳೂರು, ಡಿ.8: ಕೇಂದ್ರ ಮತ್ತು ರಾಜ್ಯ ಸರಕಾರವು ಧಾರ್ಮಿಕ ವಿಚಾರಗಳಿಗೆ ಒತ್ತು ಕೊಡುತ್ತಿವೆ. ಜಾತಿ ಮತ ಪಂಗಡಗಳ ಆಧಾರದಲ್ಲಿ ಸಮಾಜವನ್ನು ವಿಭಜಿಸುತ್ತಿದ್ದಾರೆ. ಓಟುಬ್ಯಾಂಕ್ಗಾಗಿ ಜನರ ಜೀವಿಸುವ ಹಕ್ಕುಗಳನ್ನು ಸರಕಾರ ಹರಣ ಮಾಡುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಮೂಲಭೂತ ಸಮಸ್ಯೆಗಳನ್ನು ಮರೆಮಾಚಿ ಧಾರ್ಮಿಕ ಭಾವನೆಗಳನ್ನು ಕೆರಳಿಸಲಾಗುತ್ತಿದೆ. ಈ ಅನಾಚಾರದಿಂದ ಮುಕ್ತಿ ಸಿಕ್ಕಿ ನಿಜವಾದ ದಿಕ್ಕಿನಲ್ಲಿ ದೇಶ ಅಭಿವೃದ್ಧಿಯಾಗಬೇಕಾದರೆ ಜನರು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಡಾ. ಶ್ರೀನಿವಾಸ ಕಕ್ಕಿಲ್ಲಾಯ ಕರೆ ನೀಡಿದರು.
ನಗರದ ಕೆಬಿಇಎ ಸಭಾಂಗಣದ ಕಾ. ಉರ್ವ ನಾಗರಾಜ ಶೆಟ್ಟಿ ವೇದಿಕೆಯಲ್ಲಿ ನಡೆದ ಸಿಪಿಐ ಮಂಗಳೂರು ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನೋಟು ಅಮಾನ್ಯಕರಣದಿಂದ ಜನರು ತನ್ನ ದುಡಿತದ ಹಣವನ್ನು ಬ್ಯಾಂಕ್ಗೆ ಕಟ್ಟಲು ಸರದಿ ಸಾಲಿನಲ್ಲಿ ನಿಂತಾಗ ಅವರನ್ನು ಕಪ್ಪು ಹಣದವರೆಂದು ಬಿಂಬಿಸಲಾಯಿತು. ಜಿಎಸ್ಟಿ ಜಾರಿ ಮಾಡಿದಾಗಲೂ ವ್ಯಾಪಾರಸ್ಥರು, ಉದ್ಯಮಿಗಳನ್ನು ಸಂಶಯದಿಂದ ನೋಡುವಂತಾಯಿತು. ಪೂರ್ವತಯಾರಿ, ದೂರಾಲೋಚನೆ, ಜನಪರ ಕಾಳಜಿ ಹಾಗೂ ವೈಜ್ಞಾನಿಕ ಮನೋಭಾವದ ಕೊರತೆ ಈ ಯೋಜನೆಗಳು ವಿಫಲವಾಗಿರುವುದಕ್ಕೆ ಕಾರಣವಾಗಿದೆ ಎಂದು ಡಾ. ಕಕ್ಕಿಲ್ಲಾಯ ಅಭಿಪ್ರಾಯಪಟ್ಟರು.
ಕೆ.ಭಟ್ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಸಹಾಯಕ ಕಾರ್ಯದರ್ಶಿ ಬಿ. ಶೇಖರ್, ಕೋಶಾಧಿಕಾರಿ ಎ.ಪಿ. ರಾವ್, ಎಂ. ಕರುಣಾಕರ್ ಮಾತನಾಡಿದರು. ಜಿಲ್ಲಾ ನಾಯಕರಾದ ವಸಂತಿ ಆರ್ ಶೆಟ್ಟಿ, ಕಲ್ಯಾಣಿ ಕೊಟ್ಟಾರ ಉಪಸ್ಥಿತರಿದ್ದರು.
ಪ್ರತಿನಿಧಿ ಸಮಾವೇಶದಲ್ಲಿ ಚಟುವಟಿಕಾ ಮತ್ತು ಸಂಘಟನಾ ವರದಿಯನ್ನು ತಾಲೂಕು ಕಾರ್ಯದರ್ಶಿ ವಿ.ಎಸ್. ಬೇರಿಂಜ ಹಾಗೂ ಲೆಕ್ಕಪತ್ರವನ್ನು ಕೋಶಾಧಿಕಾರಿ ಚಿತ್ರಾಕ್ಷಿ ಕುಂಜತ್ತ್ಬೈಲ್ ಮಂಡಿಸಿದರು. ಜನರ ಮೂಲಭೂತ ಸಮಸ್ಯ ಮತ್ತು ಬೇಡಿಕೆಗಳಿಗೆ ಪೂರಕವಾಗಿ ಕೆಲವು ಠರಾವುಗಳನ್ನು ತಿಮ್ಮಪ್ಪಕಾವೂರು ಮಂಡಿಸಿದರು.
ನೂತನ ತಾಲೂಕು ಸಮಿತಿಯ ಕಾರ್ಯದರ್ಶಿಯಾಗಿ ವಿ.ಎಸ್. ಬೇರಿಂಜ, ಜೊತೆ ಕಾರ್ಯದರ್ಶಿಯಾಗಿ ತಿಮ್ಮಪ್ಪಕಾವೂರು, ಎಂ. ಕರುಣಾಕರ್ ಹಾಗೂ ಕೋಶಾಧಿಕಾರಿಯಾಗಿ ಚಿತ್ರಾಕ್ಷಿ ಕುಂಜತ್ತ್ ಬೈಲ್ ಆಯ್ಕೆಯಾದರು. ಸುಧಾಕರ್ ಕಲ್ಲೂರು ವಂದಿಸಿದರು.