ಡಿ. 12ರಂದು ಬಂಟ್ವಾಳದಲ್ಲಿ ನಡೆಯುವ ಸಾಮರಸ್ಯ ನಡಿಗೆಯಲ್ಲಿ ಚಿತ್ರನಟ ಪ್ರಕಾಶ್ ರೈ
ಬಂಟ್ವಾಳ, ಡಿ. 8: ಸಾಮರಸ್ಯ ನಡಿಗೆಯೂ ಯಾವುದೇ ರಾಜಕೀಯ ಉದ್ದೇಶ ಹೊಂದಿಲ್ಲ. ಎರಡು ಪೂರ್ವ ಸಿದ್ಧತಾ ಸಭೆಗಳಲ್ಲಿ ಭಾಗವಹಿಸಿದ್ದ ಜೆಡಿಎಸ್ ಮುಖಂಡರು ದಿಢೀರನೆ ಹಿಂದೆ ಸರಿದಿರುವುದು ಯಾಕೆ ಎಂಬುವುದು ತನಗೆ ಮಾಹಿತಿಯಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಸಂಜೆ ಪ್ರವಾಸಿ ಮಂದಿರದಲ್ಲಿ ಸಾಮರಸ್ಯ ನಡಿಗೆಯ ಪೂರ್ವ ಸಿದ್ಧತಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೆಳಗ್ಗೆ ಬೆಳ್ತಂಗಡಿಯಲ್ಲಿ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಜೆಡಿಎಸ್ನ ಕೆಲ ಮುಖಂಡರು ಭಾಗವಹಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಯಾವುದೇ ಪಕ್ಷದ ಜಾತ್ಯತೀತ ಸಿದ್ಧಾಂತದ ನಿಲುವು ಹೊಂದಿದವರು ಈ ಸಾಮರಸ್ಯ ನಡಿಗೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶ ಇದೆ. ಒಟ್ಟಾರೆಯಾಗಿ ಜಿಲ್ಲೆಯ ಜನರಲ್ಲಿ ಸಾಮರಸ್ಯದ ಬಗ್ಗೆ ಜಾಗೃತಿ ಮೂಡಿಸುವುದು ಈ ನಡಿಗೆಯ ಉದ್ದೇಶವಾಗಿದೆ ಎಂದರು.
ಡಿ.12ರಂದು ಬೆಳಗ್ಗೆ 9:30ಕ್ಕೆ ಫರಂಗಿಪೇಟೆಯಲ್ಲಿ ಪಾರಿವಾಳವನ್ನು ಹಾರಿಸುವ ಮೂಲಕ ನಡಿಗೆಗೆ ಚಾಲನೆ ನೀಡಲಾಗುವುದು. ಸಂಜೆ ಮಾಣಿಯಲ್ಲಿ ಸಮಾರೋಪನಗೊಳ್ಳಲಿದ್ದು, ಚಿತ್ರನಟ ಪ್ರಕಾಶ್ ರೈ ಸೇರಿದಂತೆ ವಿವಿಧ ಪಕ್ಷ, ಸಂಘಟನೆಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮತೀಯ ಸಂಘರ್ಷ, ಸಮಸ್ಯೆಗಳು ಬಂದಾಗ ನಾವು ಪಕ್ಷ ಮರೆತು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಯತ್ನಿಸುತ್ತೇವೆ. ಅದೇ ಚುನಾವಣೆ ಬಂದಾಗ ನಮ್ಮ, ನಮ್ಮ ಪಕ್ಷಕ್ಕೆ ನಿಷ್ಠರಾಗಿ ಕೆಲಸ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ ಸಚಿವರು ಹಾಗೂ ಇನ್ನಿತರ ಪಕ್ಷದ ಮುಖಂಡರು ಮತೀಯವಾದಿಗಳಿಗೆ ಒಳ್ಳೆಯ ಸಂದೇಶ ರವಾನಿಸಲಿದೆ ಎಂದರು.
ಯಾವುದೇ ಪಕ್ಷದ ಬ್ಯಾನರ್ನಲ್ಲಿ ಈ ನಡಿಗೆ ಸಾಗುತ್ತಿಲ್ಲ. ಹೆದ್ದಾರಿಯಲ್ಲಿ ಯಾವುದೇ ವಾಹನ ಹಾಗೂ ಜನಸಂಚಾರಕ್ಕೆ ತೊಂದರೆಯಾಗದಂತೆ ರಸ್ತೆ ಬದಿಯಿಂದಲೇ ನಡಿಗೆ ಸಾಗಲಿದೆ ಎಂದರು
ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಸಾಮರಸ್ಯ ಬದುಕಿಗೆ ಯಾವುದೇ ರೀತಿಯ ಚ್ಯುತಿಯಾಗದಂತೆ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಈ ನಿಟ್ಟಿನಲ್ಲಿ ಸಮಾನ ಮನಸ್ಕರೆಲ್ಲರೂ ಪಕ್ಷ ಮರೆತು ಒಂದಾಗಿದ್ದೇವೆ ಹೊರತು ಯಾವುದೇ ರೀತಿಯ ರಾಜಕೀಯ ಉದ್ದೇಶ ಇಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್, ಎಂ.ಎಸ್. ಮುಹಮ್ಮದ್, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಗೇರು ನಿಗಮ ಅಧ್ಯಕ್ಷ ಬಿ.ಎಚ್. ಖಾದರ್, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಮಾಜಿ ಜಿ.ಪಂ. ಸದಸ್ಯ ಉಮರ್ ಫಾರೂಕ್, ಬಿ.ಕೆ. ಇದಿನಬ್ಬ ಕಲ್ಲಡ್ಕ, ವಿವಿಧ ಪಕ್ಷದ ಮುಖಂಡರಾದ ಶೇಖರ್, ರಾಮಣ್ಣ ವಿಟ್ಲ, ಸಂಜೀವ ಬಂಗೇರ, ಬಾಬು ಭಂಡಾರಿ, ಬಿ.ನಾರಾಯಣ, ಮಹಿಳಾ ಕಾಂಗ್ರೆಸ್ ಮುಖಂಡರಾದ ಮಲ್ಲಿಕಾ ಶೆಟ್ಟಿ, ಜಯಂತಿ ಪೂಜಾರಿ ಉಪಸ್ಥಿತರಿದ್ದರು.