×
Ad

ಜಾನಪದ ಕಲೆಗಳನ್ನು ಯುವ ಜನತೆ ಉಳಿಸಬೇಕು:ದಿನಕರ ಬಾಬು

Update: 2017-12-09 21:54 IST

ಉಡುಪಿ, ಡಿ.9: ಗ್ರಾಮೀಣ ಜಾನಪದ ಕಲೆಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಯುವಜನ ಮೇಳಗಳು ಸಹಕಾರಿಯಾಗಿದ್ದು, ಯುವಜನತೆ ಜಾನಪದ ಕಲೆಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು ಎಂದು ಉಡುಪಿ ಜಿಪಂನ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕುತ್ಪಾಡಿ ಕಟ್ಟೆಗುಡ್ಡೆ ನವಚೇತನ ಯುವಕ/ಯುವತಿ ಮಂಡಲಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಸಂಜೆ ನಡೆದ ಜಿಲ್ಲಾ ಮಟ್ಟದ ಯುವಜನ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮುಖ್ಯ ಅತಿಥಿಯಾಗಿದ್ದ ಉಡುಪಿ ತಾಪಂ ಅಧ್ಯಕ್ಷೆ ನಳನಿ ಪ್ರದೀಪ್ ರಾವ್ ಮಾತನಾಡಿ, ಯುವ ಜನತೆ ತಮ್ಮಲ್ಲಿನ ಪ್ರತಿಭೆ ಪ್ರದರ್ಶಿಸಲು ಯುವಜನ ಮೇಳಗಳು ಸಹಕಾರಿ ಎಂದರು.

ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಮಟ್ಟದ ಯುವ ಪ್ರಶಸ್ತಿಯನ್ನು ನವಚೇತನ ಯುವಕ ಮಂಡಲದ ಅಧ್ಯಕ್ಷ ಗಿರೀಶ್ ಕುಮಾರ್ ಅವರಿಗೆ ಹಾಗೂ ಜಿಲ್ಲಾ ಯುವ ಸಾಂಘಿಕ ಪ್ರಶಸ್ತಿಯನ್ನು ಕುತ್ಯಾರು ಯುವಕ ಮಂಡಲಕ್ಕೆ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕಡೆಕಾರು ಗ್ರಾಪಂ ಅಧ್ಯಕ್ಷ ರಘುನಾಥ್ ಕೋಟ್ಯಾನ್, ಉಪಾಧ್ಯಕ್ಷೆ ಮಾಲತಿ ಶೆಟ್ಟಿ, ತಾಪಂ ಸದಸ್ಯೆ ಶಿಲ್ಪಾರವೀಂದ್ರ ಕೋಟ್ಯಾನ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ದೈಹಿಕ ಶಿಕ್ಷಣ ಉಪನಿರ್ದೇಶಕ ಮಧುಕರ್, ಕಾರ್ಕಳ ತಾಲೂಕು ಕ್ರೀಡಾಧಿಕಾರಿ ಪೆಡ್ರಿಕ್, ಕುಂದಾಪುರ ತಾಲೂಕು ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ, ನವಚೇತನ ಯುವಕ ಮಂಡಲದ ಅಧ್ಯಕ್ಷ ಗಿರೀಶ್ ಕುಮಾರ್, ಯುವತಿ ಮಂಡಲದ ಅಧ್ಯಕ್ಷೆ ಶಾರದಾ ಉಮೇಶ್ ಮುಂತಾದವರು ಉಪಸ್ಥಿತರಿದ್ದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News