6 ವರ್ಷದ ಬಾಲಕಿಯನ್ನು ಅತ್ಯಾಚಾರಗೈದು, ಕೊಲೆಗೈದ ದುಷ್ಕರ್ಮಿಗಳು

Update: 2017-12-10 14:15 GMT

ಚಂಡೀಗಡ, ಡಿ.10: ಹಿಸ್ಸಾರ್ ಜಿಲ್ಲೆಯ ಉಕ್ಲಾನಾ ಗ್ರಾಮದಲ್ಲಿ ಶನಿವಾರ ಅತ್ಯಾಚಾರಕ್ಕೊಳಗಾಗಿ ಕ್ರೂರ ರೀತಿಯಲ್ಲಿ ಕೊಲೆಯಾಗಿದ್ದ 6 ವರ್ಷದ ಬಾಲಕಿಯ ಶವದ ಅಂತ್ಯ ಸಂಸ್ಕಾರ ರವಿವಾರ ನಡೆಯಿತು.

48 ಗಂಟೆಗಳೊಳಗೆ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಬಂಧಿಸುವುದಾಗಿ ಪೊಲೀಸರು ಭರವಸೆ ನೀಡಿದ ಬಳಿಕ, ಸ್ಥಳೀಯರು ಮಾತುಕತೆ ನಡೆಸಿ, ಅಂತ್ಯಸಂಸ್ಕಾರ ನಡೆಸುವಂತೆ ಸಂತ್ರಸ್ತ ಬಾಲಕಿಯ ಪೋಷಕರ ಮನ ಒಲಿಸಲು ಸಫಲರಾದರು.

ಉಕ್ಲಾನದ ಕೊಳೆಗೇರಿ ಪ್ರದೇಶದಿಂದ ಈ ದಲಿತ ಸಮುದಾಯದ ಬಾಲಕಿಯನ್ನು ಶನಿವಾರ ಬೆಳಗ್ಗೆ ಅಪಹರಿಸಲಾಗಿತ್ತು ಎನ್ನಲಾಗಿದೆ. ಈಕೆಯ ಪೋಷಕರು ರಸ್ತೆ ಬದಿ ಟೆಂಟ್ ನಿರ್ಮಿಸಿ ವಾಸಿಸುತ್ತಿದ್ದಾರೆ. ಕೆಲ ಹೊತ್ತಿನ ಬಳಿಕ ಈಕೆಯ ಮೃತದೇಹ ಸಮೀಪದ ಪ್ರದೇಶವೊಂದರಲ್ಲಿ ಪತ್ತೆಯಾಗಿತ್ತು. ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಬಳಿಕ ಆಕೆಯ ಗುಪ್ತಾಂಗಕ್ಕೆ ಮರದ ತುಂಡೊಂದನ್ನು ತುರುಕಿಸಲಾಗಿದ್ದು , ದೇಹದ ಅಂಗಾಂಗಳಿಗೆ ಭಾರೀ ಹಾನಿಯಾಗಿರುವುದು ಹಿಸಾರ್‌ನ ಸರಕಾರಿ ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯಿಂದ ಬೆಳಕಿಗೆ ಬಂದಿತ್ತು. ಅಲ್ಲದೆ ದೇಹವಿಡೀ ರಕ್ತದಿಂದ ತೋಯ್ದುಹೋಗಿತ್ತು.

ಸಂತ್ರಸ್ತ ಬಾಲಕಿಯ ಕುಟುಂಬದ ನೆರವಿಗೆ ಬಂದಿದ್ದ ಸ್ಥಳೀಯರು, ಕುಟುಂಬಕ್ಕೆ ಸೂಕ್ತ ವಸತಿ ಸೌಕರ್ಯ ಹಾಗೂ ಬಾಲಕಿಯ ತಂದೆಗೆ ಉದ್ಯೋಗ ಒದಗಿಸಿಕೊಡುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಕಾನೂನು ಮತ್ತು ವ್ಯವಸ್ಥೆ ಕುಸಿದಿದ್ದು ಈ ಬಗ್ಗೆ ತಕ್ಷಣ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಹರ್ಯಾಣದ ಹಿರಿಯ ಕಾಂಗ್ರೆಸ್ ಮುಖಂಡ ರಣದೀಪ್ ಸಿಂಗ್ ಸುರ್ಜೆವಾಲಾ ಅವರೂ ಸರಕಾರವನ್ನು ದೂಷಿಸಿದ್ದು, ದುಷ್ಕರ್ಮಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News