ಆರ್ಚ್ ಬಿಷಪ್ ಬರ್ನಾರ್ಡ್ ಮೊರಾಸ್‌ರಿಗೆ ಹುಟ್ಟೂರಲ್ಲಿ ಸನ್ಮಾನ

Update: 2017-12-10 14:27 GMT

ಮಂಗಳೂರು, ಡಿ. 10: ಕರ್ನಾಟಕ ಕೆಥೋಲಿಕ್ ಕ್ರೈಸ್ತ ಮಹಾ ಧರ್ಮ ಪ್ರಾಂತದ ಮಹಾ ಧರ್ಮಾಧ್ಯಕ್ಷ ಬೆಂಗಳೂರಿನ ಆರ್ಚ್ ಬಿಷಪ್ ರೆ.ಡಾ.ಬರ್ನಾರ್ಡ್ ಮೊರಾಸ್ ಅವರ ಗುರು ದೀಕ್ಷೆಯ ಸುವರ್ಣ ಮಹೋತ್ಸವ ಮತ್ತು ಹುಟ್ಟೂರ ಸನ್ಮಾನ ಸಮಾರಂಭವು ರವಿವಾರ ಕುಪ್ಪೆಪದವಿನಲ್ಲಿ ವಿವಿಧ ಧರ್ಮಪ್ರಾಂತಗಳ ಧರ್ಮಾಧ್ಯಕ್ಷರ ಮತ್ತು ಧರ್ಮಗುರುಗಳ ಉಪಸ್ಥಿತಿಯಲ್ಲಿ ನಡೆಯಿತು.

ಕುಪ್ಪೆಪದವು ದಿ ಇಮ್ಯಾಕ್ಯುಲೆಟ್ ಹಾರ್ಟ್ ಆಫ್ ಮೇರಿ ಚರ್ಚ್‌ನಲ್ಲಿ ಕೃತಜ್ಞತಾರ್ಪಣೆಯ ಬಲಿ ಪೂಜೆ ನೆರವೇರಿತು.

ಬಳಿಕ ಡಾ.ಬರ್ನಾರ್ಡ್ ಮೊರಾಸ್ ಅವರ ಕುಟುಂಬದ ಮನೆ ಆವರಣದಲ್ಲಿ ಸನ್ಮಾನ ಸಮಾರಂಭ ನಡೆಯಿತು. ಚರ್ಚ್‌ನಲ್ಲಿ ನೆರವೇರಿದ ಬಲಿ ಪೂಜೆಯಲ್ಲಿ ರೆ.ಡಾ.ಬರ್ನಾರ್ಡ್ ಮೊರಾಸ್ ಅವರ ಜತೆಯಲ್ಲಿ ಮಂಗಳೂರು ಬಿಷಪ್ ರೆ.ಡಾ. ಅಲೋಶಿಯಸ್ ಪಾವ್ಲ್  ಡಿಸೋಜಾ, ಉಡುಪಿಯ ರೆ. ಡಾ. ಜೆರಾಲ್ಡ್ ಐಸಾಕ್ ಲೋಬೊ, ಬಳ್ಳಾರಿಯ ಬಿಷಪ್ ರೆ.ಡಾ. ಹೆನ್ರಿ ಡಿಸೋಜಾ, ಪುತ್ತೂರಿನ ಮಾರ್ ದಿವಾನಿಯೋಸ್ ಮಕಾರಿಯೋಸ್ ಹಾಗೂ ಮಂಗಳೂರು ಧರ್ಮ ಪ್ರಾಂತದ ಪ್ರಧಾನ ಗುರು ಮೊ. ಡೆನಿಸ್ ಮೊರಾಸ್ ಪ್ರಭು, ಬೆಂಗಳೂರು ಮಹಾ ಧರ್ಮ ಪ್ರಾಂತದ ಪ್ರಧಾನ ಗುರುಗಳಾದ ಮೊ.ಜಯನಾಥನ್ ಮತ್ತು ಮೊ.ಸಿ. ಫ್ರಾನ್ಸಿಸ್, ಚಾನ್ಸಲರ್ ಫಾ.ಆ್ಯಂಟನಿ ಸ್ವಾಮಿ, ಕುಪ್ಪೆಪದವು ಚರ್ಚ್‌ನ ಧರ್ಮಗುರು ಫಾ. ವಲೇರಿಯನ್ ಡಿಸೋಜಾ, ಇತರ ಧರ್ಮಗುರುಗಳು ಈ ಸಂದರ್ಭ ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಆರ್ಚ್ ಬಿಷಪ್ ಅವರನ್ನು ಕುಪ್ಪೆಪದವು ಪೇಟೆಯಲ್ಲಿ ಸ್ವಾಗತಿಸಿ, ಮೆರವಣಿಗೆಯಲ್ಲಿ ಚರ್ಚ್‌ಗೆ ಕರೆದೊಯ್ಯಲಾಯಿತು. ಚರ್ಚ್‌ನಲ್ಲಿ ನಡೆದ ಬಲಿ ಪೂಜೆಯ ನೇತೃತ್ವವನ್ನು ಆರ್ಚ್ ಬಿಷಪ್ ಬರ್ನಾರ್ಡ್ ಮೊರಾಸ್ ವಹಿಸಿದ್ದರು. ಬಳ್ಳಾರಿಯ ಬಿಷಪ್ ರೆ.ಡಾ. ಹೆನ್ರಿ ಡಿಸೋಜಾ ಅವರು ಪ್ರವಚನ ನೀಡಿದರು.

ಬಳಿಕ ಆರ್ಚ್ ಬಿಷಪ್ ಅವರನ್ನು ಚರ್ಚ್‌ನಿಂದ ಪಕ್ಕದ ಮೊರಾಸ್ ಕುಟುಂಬದ ಹಿರಿಯರ ಮನೆ ಆವರಣಕ್ಕೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರಿನ ಬಿಷಪ್ ರೆ. ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ ವಹಿಸಿದ್ದರು. ಧರ್ಮಾಧ್ಯಕ್ಷರಾದ ರೆ.ಡಾ. ಜೆರಾಲ್ಡ್ ಐಸಾಕ್ ಲೋಬೊ, ರೆ. ಡಾ. ಹೆನ್ರಿ ಡಿಸೋಜಾ, ಮಂಗಳೂರು ಧರ್ಮ ಪ್ರಾಂತದ ಪ್ರಧಾನ ಗುರು ಮೊ. ಡೆನಿಸ್ ಮೊರಾಸ್ ಪ್ರಭು, ಪಾಲನಾ ಪರಿಷತ್ ಕಾರ್ಯದರ್ಶಿ ಎಂ.ಪಿ. ನೊರೋನ್ಹಾ, ಮೊ. ಜಯನಾಥನ್ ಮತ್ತು ಮೊ.ಸಿ. ಫ್ರಾನ್ಸಿಸ್, ಚಾನ್ಸಲರ್ ಫಾ.ಆ್ಯಂಟನಿ ಸ್ವಾಮಿ, ಕುಪ್ಪೆಪದವು ಚರ್ಚ್‌ನ ಫಾ. ವಲೇರಿಯನ್ ಡಿಸೋಜಾ, ಕೊಡಗು ಜಿಲ್ಲಾಧಿಕಾರಿ ಮೊರಾಸ್ ಕುಟುಂಬದ ಡಾ. ರಿಚಾರ್ಡ್ ವಿನ್ಸೆಂಟ್ ಡಿಸೋಜಾ, ಶಾಸಕ ಬಿ.ಎ. ಮೊಯ್ದಿನ್ ಬಾವಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭ ಆರ್ಚ್ ಬಿಷಪ್ ಬರ್ನಾರ್ಡ್ ಮೊರಾಸ್ ಅವರು ಸುವರ್ಣೋತ್ಸವದ ಕೇಕ್ ಕತ್ತರಿಸಿದರು. ಇದೇ ಡಿ. 5 ರಂದು ಗುರು ದೀಕ್ಷೆಯ 50 ವರ್ಷಗಳನ್ನು ಪೂರ್ತಿಗೊಳಿಸಿದ್ದ ಮೊ. ಡೆನಿಸ್ ಮೊರಾಸ್ ಪ್ರಭು ಅವರು ಕೂಡಾ ಕೇಕ್ ಕತ್ತರಿಸಿದರು. ಫಾ.ಫಾವುಸ್ತಿನ್ ಲೋಬೊ ಅವರು ಆರ್ಚ್ ಬಿಷಪ್ ಅವರನ್ನು ಅಭಿನಂದಿಸಿದರು. ಮೊ. ಜಯನಾಥನ್ ಅವರು ಪೋಪ್ ಫ್ರಾನ್ಸಿಸ್ ಅವರು ಕಳುಹಿಸಿದ್ದ ಶುಭಾಶಯ ಸಂದೇಶವನ್ನು ವಾಚಿಸಿದರು.

ಮಂಗಳೂರಿನ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜಾ ಅವರು ಕರ್ನಾಟಕದ ಧರ್ಮಾಧ್ಯಕ್ಷರ ಮಂಡಳಿಯ ಪರವಾಗಿ ಆರ್ಚ್ ಬಿಷಪ್ ಅವರನ್ನು ಹಾರ ಹಾಕಿ, ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು. ಬಳಿಕ ಆರ್ಚ್ ಬಿಷಪ್ ಅವರು ವೇದಿಕೆಯಲ್ಲಿದ್ದ ಎಲ್ಲಾ ಬಿಷಪ್ ಗಳನ್ನು, ಪ್ರಧಾನ ಗುರುಗಳನ್ನು, ಕುಪ್ಪೆಪದವು ಚರ್ಚ್‌ನ ಗುರುಗಳನ್ನು ಸಮ್ಮಾನಿಸಿದರು.

ಆರ್ಚ್ ಬಿಷಪ್ ಅವರನ್ನು ಮಂಗಳೂರು ಧರ್ಮ ಪ್ರಾಂತದ ಪರವಾಗಿ ಪಾಲನಾ ಪರಿಷತ್ ಕಾರ್ಯದರ್ಶಿ ಎಂ.ಪಿ. ನೊರೋನ್ಹಾ, ಕುಪ್ಪೆಪದವು ವಾರ್ಡ್ ವತಿಯಿಂದ ಗುರಿಕಾರ ಇಗ್ನೇಶಿಯಸ್ ನೇತೃತ್ವದಲ್ಲಿ, ಮುತ್ತೂರು ಗ್ರಾಮ ಪಂಚಾಯತ್ ಪರವಾಗಿ ಅಧ್ಯಕ್ಷರಾದ ನಾಗಮ್ಮ ನೇತೃತ್ವದಲ್ಲಿ ಸಮ್ಮಾನಿಸಲಾಯಿತು.

ಈ ಸಂದರ್ಭ ಮೊರಾಸ್ ಕುಟುಂಬದ ಸಿಸಿಲಿಯಾ ಮೊರಾಸ್, ಅಲಿಸ್ ಮೊರಾಸ್, ಮೇರಿ ಮೊರಾಸ್, ಜಾನ್ ಮೊರಾಸ್, ಮಾರ್ಟಿನ್ ಮೊರಾಸ್, ಮೋನಿಕಾ ಪಿಂಟೊ, ಎಡ್ಮಂಡ್ ಮೊರಾಸ್, ಜಾನ್ ಕ್ರೂಜ್ ಮೊರಾಸ್, ಜೋಸೆಫ್ ಮೊರಾಸ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News