ಬಂಟ್ವಾಳದ ‘ಸಾಮರಸ್ಯ ನಡಿಗೆ’ಗೆ ಮುಸ್ಲಿಂ ಒಕ್ಕೂಟ ಬೆಂಬಲ ಇಲ್ಲ: ಕೆ.ಅಶ್ರಫ್
ಮಂಗಳೂರು, ಡಿ. 10: ದ.ಕ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಡಿ. 12ರಂದು ಫರಂಗಿಪೇಟೆಯಿಂದ ಮಾಣಿವರೆಗೆ ನಡೆಯುವ ‘ಸಾಮರಸ್ಯ ನಡೆ’ ಕಾರ್ಯಕ್ರಮದಲ್ಲಿ ಮುಸ್ಲಿಂ ಸಂಘಟನೆಗಳ ಒಕ್ಕೂಟ ಭಾಗವಹಿಸುವುದಿಲ್ಲ ಮತ್ತು ಬೆಂಬಲಿಸುವುದಿಲ್ಲ ಎಂದು ಒಕ್ಕೂಟದ ಕೆ.ಅಶ್ರಫ್ ತಿಳಿಸಿದ್ದಾರೆ.
ದ.ಕ. ಜಿಲ್ಲೆಯಾದ್ಯಂತ ಅಲ್ಪಸಂಖ್ಯಾತರ ವಿರುದ್ಧ ನಿರಂತರ ದೌರ್ಜನ್ಯಗಳು ನಡೆಯುತ್ತಿದ್ದರೂ ಜಿಲ್ಲಾಡಳಿತವಾಗಲಿ, ಸರಕಾರವಾಗಲಿ, ಜಿಲ್ಲೆಯ ಇಬ್ಬರು ಪ್ರಭಾವಿ ಮಂತ್ರಿಗಳಾಗಲಿ ಕ್ರಮ ಜರಗಿಸಲು ವಿಫಲವಾಗಿದ್ದಾರೆ. ಬಂಟ್ವಾಳದ ಪಾಣೆಮಂಗಳೂರು ಮನೆಯೊಂದರಲ್ಲಿ ಇತ್ತೀಚೆಗೆ ಪೊಲೀಸರು ತನಿಖೆಯ ನೆಪದಲ್ಲಿ ಮನೆಗೆ ದಾಳಿ ನಡೆಸಿ ಪವಿತ್ರ ಕುರ್ಆನ್ನ್ನು ಅವಮಾನಗೊಳಿಸಿದ ಕೃತ್ಯಕ್ಕೆ ಸಂಬಂಧಿಸಿ ಒಕ್ಕೂಟ ಮತ್ತು ಇತರ ಸಂಘಟನೆಗಳು ಹೋರಾಟ ನಡೆಸಿದ್ದರೂ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿರುವುದನ್ನು ಪ್ರತಿಭಟಿಸಿ ‘ಸಾಮರಸ್ಯ ನಡಿಗೆ’ ಕಾರ್ಯಕ್ರಮಕ್ಕೆ ಒಕ್ಕೂಟದಿಂದ ಬೆಂಬಲ ಇರುವುದಿಲ್ಲ ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.