ಡಿ.15ರಂದು ‘ಕಲ್ಲಚ್ಚು ಪ್ರಶಸ್ತಿ’ ಪ್ರದಾನ ಸಮಾರಂಭ
Update: 2017-12-13 12:19 GMT
ಮಂಗಳೂರು, ಡಿ.13: ನಗರದ ಕಲ್ಲಚ್ಚು ಪ್ರಕಾಶನ ನೀಡುವ 8ನೇ ಸಾಲಿನ ವಾರ್ಷಿಕ ‘ಕಲ್ಲಚ್ಚು ಪ್ರಶಸ್ತಿ -2017’ಕ್ಕೆ ಕರ್ನಾಟಕ ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್. ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಡಿ.15ರಂದು ನಡೆಯಲಿದೆ.
ನಗರದ ಸ್ಟೇಟ್ ಬ್ಯಾಂಕ್ - ನೆಲ್ಲಿಕಾಯಿ ರಸ್ತೆಯ ಅಲ್ ರಹಬಾ ಪ್ಲಾಝಾದ 2ನೇ ಮಹಡಿಯಲ್ಲಿರುವ ದಿ ಕ್ಯಾಂಪಸ್ ಕೆರಿಯರ್ ಅಕಾಡಮಿಯಲ್ಲಿ 15ರಂದು ಸಂಜೆ 4ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಭದ್ರಾವತಿಯ ಸಂಜೀವಿನಿ ಹಿರಿಯ ನಾಗರಿಕರ ಆರೈಕಾ ಕೇಂದ್ರದ ಸ್ಥಾಪಕಿ ಸವಿತಾ ಸಂಪತ್ ಹಾಗೂ ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯ ಬಿ.ಎ.ಮುಹಮ್ಮದ್ ಅಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕಲ್ಲಚ್ಚು ಪ್ರಕಾಶನದ ಮುಖ್ಯಸ್ಥ ಮಹೇಶ್ ಆರ್. ನಾಯಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.