ಮಣ್ಣಪಳ್ಳ ಅಭಿವೃದ್ಧಿಗೆ 1.74 ಕೋಟಿ ರೂ. ವೆಚ್ಚ: ಸಚಿವ ಪ್ರಮೋದ್

Update: 2017-12-16 13:32 GMT

ಉಡುಪಿ, ಡಿ.16: ಮಣಿಪಾಲದಲ್ಲಿರುವ ಮಣ್ಣಪಳ್ಳ ಕೆರೆ ಪರಿಸರದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿ ಕೈಗೊಳ್ಳಲು ಇದುವರೆಗೆ 1.74 ಕೋಟಿ ರೂ. ಗಳನ್ನು ವ್ಯಯಿಸಲಾಗಿದೆ ಎಂದು ರಾಜ್ಯ ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮದ್ವರಾಜ್ ಹೇಳಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಡಿ.29ರಿಂದ 31ರವರೆಗೆ ನಡೆಯಲಿರುವ ಉಡುಪಿ ಪರ್ಬದ ಪ್ರಯುಕ್ತ, ಜಿಲ್ಲಾ ಆಡಳಿತ, ಪ್ರವಾಸೋದ್ಯಮ ಇಲಾಖೆ, ಮಣ್ಣಪಳ್ಳ ಅಭಿವೃದ್ದಿ ಸಮಿತಿ ಮತ್ತು ಉಡುಪಿ ನಿರ್ಮಿತಿ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಮಣ್ಣಪಳ್ಳದ ರೋಟರಿ ಸಬಾಭವನದಲ್ಲಿ ಒಂದು ವಾರ ಕಾಲ ಆಯೋಜಿಸಿರುವ ರಾಷ್ಟ್ರಮಟ್ಟದ ಶಿಲ್ಪಕಲಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಉಡುಪಿ ಪರ್ಬದ ಪ್ರಯುಕ್ತ ನಡೆದಿರುವ ಪ್ರಥಮ ಕಾರ್ಯಕ್ರಮ ಇದಾಗಿದ್ದು, ಈ ಶಿಲ್ಪಕಲಾ ಶಿಬಿರದಲ್ಲಿ ದೇಶದ ವಿವಿಧ ರಾಜ್ಯಗಳ ಹೆಸರಾಂತ ಶಿಲ್ಪಿಗಳು ಬಾಗವಹಿಸುತ್ತಿದ್ದು, ತಮ್ಮ ಕಲಾ ಪ್ರೌಢಿಮೆ ಮೂಲಕ, ಇಲ್ಲಿ ಆಕರ್ಷಕ ಶಿಲ್ಪಗಳನ್ನು ನಿರ್ಮಿಸಲಿದ್ದಾರೆ. ಇವರೆಲ್ಲರೂ ತಾವು ರಚಿಸುವ ಶಿಲ್ಪಗಳನ್ನು ಇಲ್ಲಿಯೇ ಉಳಿಸುವುದರಿಂದ ಈ ಆಕರ್ಷಕ ಶಿಲ್ಪಗಳಿಂದ ಮಣ್ಣಪಳ್ಳದ ಸೌಂದರ್ಯ ಇನ್ನಷ್ಟು ಹೆಚ್ಚಾಗಲಿದೆ. ಇದು ಸಹ ಪ್ರವಾಸಿಗರಿಗೆ ಆಕರ್ಷಣೀಯ ಕೇಂದ್ರವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಪಂ ಅಧ್ಯಕ್ಷ ದಿನಕರಬಾಬು ಮಾತನಾಡಿ, ಈ ಶಿಲ್ಪಕಲಾ ಶಿಬಿರದಲ್ಲಿ ಹೆಸರಾಂತ ಶಿಲ್ಪಿಗಳ ಜೊತೆಗೆ ಸ್ಥಳೀಯ ಪ್ರತಿಭೆಗಳಿಗೂ ಸಹ ಭಾಗವಹಿಸಲು ಅವಕಾಶ ನೀಡಿ, ಅವರನ್ನು ಪ್ರೋತ್ಸಾಹಿಸುವಂತೆ ಸಲಹೆ ನೀಡಿದರು.

 ಕಾರ್ಯಕ್ರಮದಲ್ಲಿ, ಉಡುಪಿ ತಾಪಂ ಅಧ್ಯಕ್ಷೆ ನಳನಿ ಪ್ರದೀಪ್ ರಾವ್, ಶಿಲ್ಪ ಕಲಾ ಶಿಬಿರದ ಸಂಯೋಜಕ ಪುರುಷೋತ್ತಮ ಆಡ್ವೆ, ಕಲಾವಿದ ಹಾಗೂ ಸಂಪನ್ಮೂಲ ವ್ಯಕ್ತಿ ಬೆಂಗಳೂರಿನ ರವಿಕುಮಾರ್ ಕಾಶಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಮತ್ತಿತರರು ಉಪಸ್ಥಿತರಿದ್ದರು.

ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ಜನಾರ್ಧನ್ ಸ್ವಾಗತಿಸಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಮೈಸೂರು, ಚೆನ್ನೈ, ಕೇರಳ. ಬರೋಡ, ಬೆಂಗಳೂರುಗಳಂಥ ದೂರದ ಊರುಗಳಿಂದ ಆಗಮಿಸಿರುವ ಹತ್ತಕ್ಕೂ ಅಧಿಕ ಶಿಲ್ಪಕಲಾವಿದರು 8 ದಿನಗಳ ಈ ಶಿಬಿರದಲ್ಲಿ ಭಾಗವಹಿಸುತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News