ಡಿ. 23-24: ದ.ಕ.ಜಿಲ್ಲಾ ಕುಸ್ತಿ ಸ್ಪರ್ಧೆ

Update: 2017-12-18 16:44 GMT

ಮಂಗಳೂರು, ಡಿ.18: ಕೂಳೂರು ನ್ಯಾಶನಲ್ ಜಿಮ್ ವತಿಯಿಂದ ದ.ಕ. ಜಿಲ್ಲಾ ಅಮೆಚೂರ್ ಕುಸ್ತಿ ಸಂಘದ ಸಹಯೋಗದೊಂದಿಗೆ ಬೆಳ್ಳಿಯ ಗದೆಗಾಗಿ ‘ತುಳುನಾಡ ಕೇಸರಿ-ತುಳುನಾಡ ಕುಮಾರ್’ ದ.ಕ.ಜಿಲ್ಲಾ ಕುಸ್ತಿ ಸ್ಪರ್ಧೆಗಳು ಡಿ.23 ಮತ್ತು 24ರಂದು ಕೂಳೂರು ಜಂಕ್ಷನ್‌ನಲ್ಲಿ ನಡೆಯಲಿದೆ ಎಂದು ಸಂಘಟನಾ ಸಮಿತಿ ಅಧ್ಯಕ್ಷ, ಮಾಜಿ ಮೇಯರ್ ಪುರಂದರದಾಸ ಕೂಳೂರು ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದಕ್ಷಿಣ ಭಾರತದ ಶ್ರೇಷ್ಠ ಪೈಲ್ವಾನ್ ದಿ. ಸಂಕಪ್ಪ ಶೆಟ್ಟಿ ಅವರ ಶಿಷ್ಯರು ಹಾಗೂ ಅಭಿಮಾನಿಗಳು ಈ ಸ್ಪರ್ಧೆಯನ್ನು ಸಂಘಟಿಸುತ್ತಿದ್ದು, ಕುಸ್ತಿ ನಡೆಯುವ ಅಖಾಡಕ್ಕೆ ಅವರ ಹೆಸರನ್ನೇ ಇಡಲಾಗಿದೆ. ವಿಜೇತರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿ.ರತ್ನವರ್ಮ ಹೆಗ್ಗಡೆ ಸ್ಮರಣಾರ್ಥ ಬೆಳ್ಳಿಯ ಗದೆಯನ್ನು ನೀಡಿ ಗೌರವಿಸಲಾಗುತ್ತದೆ.

ಡಿ.23ರಂದು ಸಂಜೆ 5:30ಕ್ಕೆ ಕುಸ್ತಿ ಪಂದ್ಯಾಟವನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಲಿದ್ದು, ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಚೇರ್‌ಮೆನ್ ಎ.ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಮೇಯರ್ ಕವಿತಾ ಸನಿಲ್, ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರ್ ಭಾಗವಹಿಸಲಿದ್ದಾರೆ.

ಡಿ.24ರಂದು ಸಂಜೆ 5:30ಕ್ಕೆ ಬಹುಮಾನ ವಿತರಣೆ ನಡೆಯಲಿದ್ದು, ಅತಿಥಿಗಳಾಗಿ ಕರಾವಳಿ ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಎಸ್.ಗಣೇಶ್ ರಾವ್, ಶಾಸಕ ಮೊದಿನ್ ಬಾವಾ, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಿಭಾ ಕುಳಾಯಿ ಭಾಗವಹಿಸಲಿದ್ದಾರೆ ಎಂದರು.

ಸ್ಪರ್ಧೆಯ ವಿವರ

ಡಿ.23ರಂದು ಬೆಳಗ್ಗೆ 8:30ಕ್ಕೆ ಎಲ್ಲಾ ವಿಭಾಗಗಳ ದೇಹತೂಕ ತಪಾಸಣೆ ನಡೆಯಲಿದೆ. ಸ್ಪರ್ಧೆಯಲ್ಲಿ ಪುರುಷರಿಗೆ 42, 46, 50, 57, 65, 86 ಕೆ.ಜಿ, ಹಾಗೂ 86 ಕೆ.ಜಿ.ಮೇಲ್ಪಟ್ಟ ವಿಭಾಗಗಳು, ಮಹಿಳೆಯರಿಗೆ 44, 48, 53, 58, 63, 69 ಕೆ.ಜಿ. ಹಾಗೂ 69 ಕೆ.ಜಿ.ಗಿಂತ ಮೇಲ್ಪಟ್ಟ ವಿಭಾಗ, ಶಾಲಾ ಬಾಲಕರಿಗಾಗಿ 42, 50, 63 ಹಾಗೂ 76 ಕೆ.ಜಿ.ವಿಭಾಗದಲ್ಲಿ ಕುಸ್ತಿ ನಡೆಯಲಿದೆ.

ಸ್ಪರ್ಧೆಯ 35 ಕೆ.ಜಿ. ವಿಭಾಗದಲ್ಲಿ ಮಾಸ್ಟರ್ ಶಿವಾಜಿ, 61 ಕೆ.ಜಿ.ವಿಭಾಗದಲ್ಲಿ ತುಳುನಾಡ ಕೇಸರಿ, 74 ಕೆ.ಜಿ.ವಿಭಾಗದಲ್ಲಿ ತುಳುನಾಡ ಕುಮಾರ್ ಸ್ಪರ್ಧೆಗಳು, 40ರಿಂದ 65 ವರ್ಷ ಒಳಗಿನ ವಯಸ್ಸಿನವರಿಗೆ ಪ್ರತ್ಯೇಕ ಸ್ಪರ್ಧೆ ಇರುತ್ತದೆ. ಸ್ಪರ್ಧೆಯಲ್ಲಿ ದ.ಕ.ಹಾಗೂ ಉಡುಪಿ ಜಿಲ್ಲೆಗಳ 250 ಕುಸ್ತಿಪಟುಗಳು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಅಮೆಚೂರ್ ಕುಸ್ತಿ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ, ದ.ಕ.ಸಂಘದ ಅಧ್ಯಕ್ಷ ಪ್ರಕಾಶ್ ಕರ್ಕೇರ, ಸಂಘಟನಾ ಸಮಿತಿ ಸದಸ್ಯ ಕಮಲಾಕ್ಷ, ನ್ಯಾಷನಲ್ ಜಿಮ್‌ನ ಅಧ್ಯಕ್ಷ ಚೇತನ್ ಕೂಳೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News