ಅಳೇಕಲದಲ್ಲಿ ಮೀಲಾದ್ ಜಲ್ಸಾ
ಮಂಗಳೂರು, ಡಿ. 19: ಉಳ್ಳಾಲ ಅಳೇಕಲದ ನಜಾತುಸ್ಸಿಬಿಯಾನ್ ಮದ್ರಸ ವತಿಯಿಂದ ಮೀಲಾದ್ ಜಲ್ಸಾ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದ ಪ್ರಯುಕ್ತ ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಜಾತ್ ಸಂಘದಿಂದ ಬುರ್ದಾ ಅಲಾಪನೆ, ದಫ್ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಉಳ್ಳಾಲ ಸರ್ಕಲ್ ಇನ್ಸ್ಪೆಕ್ಟರ್ ಕೆ. ಗೋಪಿ ಕೃಷ್ಣ ಮಾತನಾಡಿ, ಉತ್ತಮ ನಾಗರಿಕರಾಗಿ ಬಾಳುವುದೇ ನಾವು ಸಮಾಜಕ್ಕೆ ನೀಡುವ ದೊಡ್ಡ ಗೌರವವಾಗಿದೆ. ಆತ್ಮವಂಚನೆಯಿಲ್ಲದೇ ಪರರ ಏಳಿಗೆಯನ್ನು ಬದುಕಿನಲ್ಲಿ ಧ್ಯೇಯವಾಗಿಸಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಅವರನ್ನು ಅಳೇಕಲ ಮಸೀದಿ ವತಿಯಿಂದ ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಅಳೇಕಲ ಮಸೀದಿ ಅಧ್ಯಕ್ಷ ಯು.ಎಸ್. ಹಂಝ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಆಹಾರ ಸಚಿವ ಯು.ಟಿ. ಖಾದರ್ ಅವರ ಸಂದೇಶವನ್ನು ವಾಚಿಸಲಾಯಿತು. ಅಳೇಕಲ ಖತೀಬ್ ಅಬೂಝಿಯಾದ್ ಪಟ್ಟಾಂಬಿ ಕಾರ್ಯಕ್ರಮ ಉದ್ಘಾಟಿಸಿದರು. ಸಯ್ಯದ್ ಜಲಾಲುದ್ದೀನ್ ತಂಙಲ್ ದುವಾ ನೆರವೇರಿಸಿದರು. ಶಿಹಾಬುದ್ದೀನ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಳೇಕಲ ಮಸೀದಿ ಜತೆ ಕಾರ್ಯದರ್ಶಿ ಕೆ.ಎಂ. ಅಶ್ರಫ್ ಸುಳ್ಯ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸಂಘಟನೆಗಳಾದ ಬಿ.ಬಾಯ್ಸಾ, ಯು ಆ್ಯಂಡ್ ಯು ಸಂಸ್ಥೆ, ಮೆಹಫಿಲ್ ಗೈಸ್, ಗಡಗಡ ಗೈಸ್, ಎಸ್ವೈಎಸ್ ಹಾಗೂ ಸುನ್ನೀ ಸಂಘಟನೆಗಳು ಕಾರ್ಯಕ್ರಮಕ್ಕೆ ಸಹಕರಿಸಿದ್ದವು.