ತರಕಾರಿ ಕೈತೋಟದಿಂದ ಆರೋಗ್ಯ ಲಾಭ: ಮೀನಾಕ್ಷಿ
ಉಡುಪಿ, ಡಿ.19: ಮನೆಯಂಗಳದಲಿರುವ ಜಾಗದಲ್ಲಿ ಕೈತೋಟ ರಚಿಸಿ ತರಕಾರಿಯನ್ನು ಬೆಳೆಸಿದರೆ ಆರೋಗ್ಯಕ್ಕೆ ಉತ್ತಮ. ಅದೇ ರೀತಿ ಸಾವಯವ ಗೊಬ್ಬರವನ್ನು ಬಳಸಿ ತರಕಾರಿ ಕೃಷಿ ಮಾಡಿದರೆ ಆರೋಗ್ಯವಂತರಾಗಿರಲು ಸಾಧ್ಯವಾಗುತ್ತದೆ ಎಂದು ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಹೇಳಿದ್ದಾರೆ.
ಉಡುಪಿ ಜಿಪಂ ತೋಟಗಾರಿಕೆ ಇಲಾಖೆ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಜಂಟಿ ಆಶ್ರಯದಲ್ಲಿ ಅಂಬಲಪಾಡಿಯ ಪ್ರಗತಿ ಸೌಧದಲ್ಲಿ ಮಂಗಳವಾರ ಆಯೋಜಿಸಲಾದ 2017-18ನೆ ಸಾಲಿನ ಕೈತೋಟ ಹಾಗೂ ತಾರಸಿ ತೋಟ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮನೆಯ ಅಂಗಳದಲ್ಲಿ ಜಾಗ ಇಲ್ಲದಿದ್ದರೆ ಮನೆಯ ತಾರಸಿ ಮೇಲೆ ಕೈ ತೋಟ ರಚಿಸಿಕೊಳ್ಳಬಹುದಾಗಿದೆ. ತೋಟಗಾರಿಕಾ ಇಲಾಖೆ ನಗರ ಪ್ರದೇಶ ದಲ್ಲಿ ತಾರಸಿ ತೋಟ ನಿರ್ಮಿಸಲು ತರಬೇತಿ ನೀಡುತ್ತಿದ್ದು, ಜನರು ಇದರ ಪ್ರಯೋಜನ ಪಡೆಯಬೇಕು ಎಂದು ಅವರು ತಿಳಿಸಿದರು.
ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಪುರುಷೋತ್ತಮ, ಶ್ರೀಕ್ಷೇತ್ರ ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಾಲತಿ ದಿನೇಶ್, ಸಂಪನ್ಮೂಲ ವ್ಯಕ್ತಿ ಬಿ.ಬಿ.ಕುಮಾರ, ಉಡುಪಿ ತೋಟಗಾರಿಕೆ ಉಪನಿರ್ದೇಶಕ ಭುವನೇಶ್ವರಿ ಉಪಸ್ಥಿತರಿದ್ದರು.
ತೋಟಗಾರಿಕೆ ಹಿರಿಯ ಸಹಾಯಕ ಹೇಮಂತ್ ಸ್ವಾಗತಿಸಿದರು. ದೀಪ ವಂದಿಸಿದರು. ಕೊಡಂಕೂರು ದೇವರಾಜ ುೂರ್ತಿ ಕಾರ್ಯಕ್ರಮ ನಿರೂ ಪಿಸಿದರು.