ಪುತ್ತೂರು: ಕೋಟಿ ಚೆನ್ನಯ ಕೆಸರುಗದ್ದೆ ಕ್ರಿಡಾಕೂಟ
ಪುತ್ತೂರು,ಡಿ.25: ತುಳುನಾಡಿನ ಆಚಾರ,ವಿಚಾರ, ಸಂಸ್ಕೃತಿಗಳು ನಾಶವಾಗುತ್ತಿರುವ ಇಂದಿನ ದಿನಗಳಲ್ಲಿ ಅದನ್ನು ಉಳಿಸಿಬೆಳೆಸಿಕೊಳ್ಳುವ ಜವಾಬ್ದಾರಿ ಯುವ ಜನತೆಯ ಮೇಲಿದೆ. ಕೆಸರುಗದ್ದೆ ಕ್ರೀಡಾಕೂಟದಿಂದ ಹಿಂದಿನ ಹಿರಿಯರು ಅನುಭವಿಸಿ ಬಂದಂತಹ ಬೇಸಾಯ ಸಂಸ್ಕೃತಿಯನ್ನು ಇಂದಿನ ಪೀಳಿಗೆಗೆ ನೆನಪಿಸುವಂತಹ ಮತ್ತು ಅರಿವು ಮೂಡಿಸುವಂತಹ ಕಾರ್ಯವಾಗಿದೆ ಎಂದು ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷರಾದ ಜಯಂತ ನಡುಬೈಲು ಹೇಳಿದರು.
ಅವರು ಆನಡ್ಕ ಕಂಬಳಗದ್ದೆ ಮರಕ್ಕೂರು ಜನನ ಎಂಬಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ಹಾಗೂ ಯುವವಾಹಿನಿ ಪುತ್ತೂರು ಘಟಕದ ಆತಿಥ್ಯದಲ್ಲಿ ಭಾನುವಾರ ನಡೆದ ಕೋಟಿ ಚೆನ್ನಯ ಕೆಸರುಗದ್ದೆ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯ 26 ಯುವವಾಹಿನಿ ಘಟಕಗಳನ್ನು ಒಂದೇ ಕಡೆ ಸೇರಿಸಿ ಒಂದೇ ಕುಟುಂಬವೆಂಬಂತೆ ಭಾಸವಾಗುತ್ತಿರುವ ಈ ಕ್ರೀಡಾಕೂಟದಲ್ಲಿ ಪ್ರತಿಯೊಬ್ಬ ಸಮಾಜ ಬಾಂಧವರು ನಮ್ಮ ಕ್ರೀಡಾಕೂಟ ಎಂಬಂತೆ ಕ್ರೀಡಾಕೂಟದಲ್ಲಿ ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕು ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ವಿಜಯ ಕುಮಾರ್ ಸೊರಕೆ ಮಾತನಾಡಿ, ಮರಕ್ಕೂರು ಜನನದ ಪುಣ್ಯದ ನೆಲದ ಬೇಸಾಯ ಗದ್ದೆಯಲ್ಲಿ ಕ್ರೀಡಾಕೂಟ ಮೈನವಿರೇಳಿಸುವಂತಿದೆ. ಬಹುತೇಕ ಗದ್ದೆಗಳು ಇಂದು ತೋಟವಾಗಿ ನಿರ್ಮಾಣವಾಗಿದ್ದರೂ ಇಲ್ಲಿನ ಗದ್ದೆಯು ಇಂದಿಗೂ ಬೇಸಾಯ ಕೃಷಿಯನ್ನು ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಜಿಲ್ಲೆಯಲ್ಲಿನ ಯುವ ಸಮೂಹ ಇಲ್ಲಿ ಒಟ್ಟು ಸೇರಿದ್ದರಿಂದ ಯುವಸಮೂಹಕ್ಕೆ ಪರಸ್ಪರ ಸಂಪರ್ಕವನ್ನು ಸಾಧಿಸಲು ಅಪೂರ್ವ ಅವಕಾಶವಾಗಿದೆ. ಸಂಘಟನೆಯಿಂದ ಬಲಯುತರಾಗಿರಿ ಎಂಬ ನಾರಾಯಣಗುರುಗಳ ಸಂದೇಶದಂತೆ ಬಿಲ್ಲವ ಸಮಾಜ ಮುಂದುವರೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಉದಯ ಕುಮಾರ್ ಕೋಲಾಡಿ ಮಾತನಾಡಿ, ಯುವವಾಹಿನಿ ಇತಿಹಾಸದಲ್ಲಿ ಸಮಾಜ ಬಾಂಧವರಿಗೆ ಪ್ರಥಮ ಬಾರಿಗೆ ಕೋಟಿ ಚೆನ್ನಯ ಕೆಸರುಗದ್ದೆ ಕ್ರೀಡೋತ್ಸವವನ್ನು ಹಮ್ಮಿಕೊಂಡಿದೆ. ಯುವವಾಹಿನಿ ಘಟಕದ ಅಧ್ಯಕ್ಷರಾದವರಿಗೆ ಆ ವರ್ಷ ಏನಾದರೂ ಅದ್ಭುತ ಕಾರ್ಯಕ್ರಮ ಮಾಡಬೇಕೆನ್ನುವ ಚ್ಯಾಲೆಂಜಿಂಗ್ ಇರುತ್ತದೆ. ಸಮಾಜ ಬಾಂಧವರು ಪ್ರತಿಯೊಂದು ವಿಭಾಗಗಳಲ್ಲೂ ಉತ್ಸುಕತೆಯಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದರು.
ಉದ್ಯಮಿ ಉಮೇಶ್ ನಾಡಾಜೆ ಮಂಗಳೂರು, ಶ್ರೀ ಕ್ಷೇತ್ರ ನಂದನ ಬಿತ್ತಿಲು ಇದರ ಯಜಮಾನರಾದ ಶ್ರೀಧರ ಪೂಜಾರಿ, ಮರಕ್ಕೂರು ಜನನದ ಯಜಮಾನರಾದ ಮಾಯಿಲಪ್ಪ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಕ್ರೀಡಾ ನಿರ್ದೇಶಕ ಸುಜಿತ್ರಾಜ್ ಐರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯುವವಾಹಿನಿ ಪುತ್ತೂರು ಘಟಕದ ಉಪಾಧ್ಯಕ್ಷ ಹರೀಶ್ ಶಾಂತಿ ಸ್ವಾಗತಿಸಿ, ಕಾರ್ಯದರ್ಶಿ ವಿಶ್ವಜಿತ್ ಅಮ್ಮುಂಜೆ ವಂದಿಸಿದರು. ಕ್ರೀಡಾಕೂಟದ ಸಂಚಾಲಕ ವಸಂತ್ ಪೂಜಾರಿ ಕಲ್ಲರ್ಪೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವವಾಹಿನಿ ಮಾಜಿ ಅಧ್ಯಕ್ಷ ಶಶಿಧರ್ ಕಿನ್ನಿಮಜಲು ಕಾರ್ಯಕ್ರಮ ನಿರೂಪಿಸಿದರು.
ಕಂಬಳ ಗದ್ದೆ ಎಂದೇ ಪ್ರಸಿದ್ಧವಾದ ಮರಕ್ಕೂರು ಜನನದಲ್ಲಿನ ಗದ್ದೆಗೆ ಎರಡು ಜೋಡಿ ಎತ್ತುಗಳನ್ನು ಬಿಡುವ ಮೂಲಕ ಮರಕ್ಕೂರು ಜನನದ ಯಜಮಾನರಾದ ಮಾಯಿಲಪ್ಪ ಪೂಜಾರಿರವರು ಕೆಸರುಗದ್ದೆಯ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.