ಭಯ, ಆತಂಕದ ವಾತಾವರಣ ನಿರ್ಮಿಸುತ್ತಿರುವ ಬಿಜೆಪಿ: ದಿನೇಶ್ ಗುಂಡೂರಾವ್
ಕಾಪು, ಡಿ. 26: ಜನ ಮರುಳು ಮಾಡಿ, ಭಾವನಾತ್ಮಕ ವಿಚಾರ ತಂದಿಟ್ಟು ಭಯ, ಆತಂಕದ ಕೆಟ್ಟ ವಾತಾವರಣ ನಿರ್ಮಾಣ ಮಾಡಿದ ಬಿಜೆಪಿ ಭಾರತಕ್ಕೆ ವಿಶ್ವದಲ್ಲಿರುವ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಕಾಪು ಶ್ರೀ ಜನಾರ್ದನ ದೇವಸ್ಥಾನದ ಎದುರು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಆಯೋಜಿಸಿದ ಜಿಲ್ಲಾ ಮಟ್ಟದ ಕಾಂಗ್ರೆಸ್ ಯುವ ಚೈತನ್ಯ ಸಮಾವೇಶದಲ್ಲಿ ಮಾತನಾಡಿದರು.
ಕಳೆದ ನಾಲ್ಕೂವರೆ ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಮಾಡಿರುವ ಸಾಧನೆ ಮತ್ತು ಕೇಂದ್ರ ಸರ್ಕಾರದ ಸುಳ್ಳುಗಳನ್ನು ಜನರಿಗೆ ತಿಳಿಸಲು ಬಹಿರಂಗ ಚರ್ಚೆಗೆ ಬರುವಂ ತೆ ಬಿಜೆಪಿಗೆ ಅವರು ಸವಾಲೆಸೆದ ಅವರು, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಮೋದಿ ಸಕಾರಕ್ಕೆ ಸುಳ್ಳೇ ಬಂಡವಾಳವಾಗಿದೆ ಎಂದರು.
ಸಮಾವೇಶವನ್ನು ಉದ್ಘಾಟಿಸಿದ ಎಐಸಿಸಿ ಕಾರ್ಯದರ್ಶಿ ಆಸ್ಕರ್ ಫೆರ್ನಾಂಡಿಸ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಮತ್ತವರ ನೇತೃತ್ವದ ಬಿಜೆಪಿಗರ ಸುಳ್ಳು ಆಶ್ವಾಸನೆಗಳಿಂದ ಜನಸಾಮಾನ್ಯರು ವಂಚನೆಗೊಳಗಾಗುತಿದ್ದಾರೆ. ಜನಸಾಮಾನ್ಯರನ್ನು ಈ ವಂಚನೆಯಿಂದ ಪಾರು ಮಾಡುವ ಮಹತ್ವದ ಜಾಬ್ದಾರಿ ಯುವಕಾಂಗ್ರೆಸ್ನದ್ದಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ರಿಝ್ವಾನ್ ಆರ್ಶದ್ ಮಾತನಾಡಿ, ಸುಳ್ಳಿನ ಸರದಾರ ದೇಶದ ಪ್ರಧಾನಿ ಅವರು ಸ್ವಾರ್ಥಕ್ಕಾಗಿ ಕೀಳು ಮಟ್ಟದ ರಾಜಕಾರಣವನ್ನು ರಾಜ್ಯದಲ್ಲಿ ಮಾಡ ಹೊರಟಿದ್ದಾರೆ. ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಅವರಿಂದ ಬೆಂಕಿ ಹಚ್ಚುವ ಕೆಲಸ ಆಗುತ್ತಿದೆ. ಅವರು ಮಾತನಾಡುವ ಭಾಷೆ ಕಾಂಗ್ರೆಸ್ಗೆ ಗೊತ್ತಿಲ್ಲ ಎಂದು ರಿಝ್ವಾನ್ ಆರ್ಶದ್ ಹೇಳಿದರು. ಸಂಸದೆ ಶೋಭ ಒಂದೊಂದು ಊರಿಗೆ ಹೋಗಿ ಬೆಂಕಿ ಹಚ್ಚುವ ಕೆಲಸದಲ್ಲಿ ನಿರತರಾಗಿದ್ದು, ಸಮಾಜದ ಶಾಂತಿಯನ್ನು ಕದಡುತ್ತಿದ್ದಾರೆ. ಕರಾವಳಿಯ ಭಾಗವು ಅಭಿವೃದ್ಧಿಯತ್ತ ಮುಖ ಮಾಡುತ್ತಿದ್ದು, ಇಲ್ಲಿನ ವಾತಾವರಣವನ್ನು ಕಲುಷಿತಗೊಳಿಸಲು ಅವಕಾಶ ನೀಡದಂತೆ ಕರೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಕಾಂಗ್ರೆಸ್ ನಾಯಕರ ಮೇಲೆ ಹಗರಣಗಳ ಆರೋಪ ಹೊರಿಸಿದ್ದ ಬಿಜೆಪಿಗೆ ಜೈಲಿಗೆ ಹಾಕುವ ತಾಕತ್ತು ಏಕೆ ಬಂದಿಲ್ಲ ಎಂದು ಪ್ರಶ್ನಿಸಿದ್ದು, ರಾಹುಲ್ ಗಾಂಧಿ ಅವರ ಪ್ರಾಮಾಣಿಕತೆಗೆ ಉತ್ತರಿಸುವಲ್ಲಿ ವಿಫಲರಾಗಿದ್ದಾರೆ ಎಂದರು.ವಿಶ್ವವೇ ಒಂದು ಕುಟುಂಬ ಎಂಬ ಭದ್ರ ಬುನಾದಿಯಲ್ಲಿ ಹಿಂದೂ ಧರ್ಮ ನಿಂತಿದೆ. ಅದನ್ನು ಶೇ.100 ಅನುಷ್ಠಾನಗೊಳಿಸುವ ಪಕ್ಷ ಕಾಂಗ್ರೆಸ್ ಎಂದು ಹೇಳಿದರು.
ಕಾಪು ಶಾಸಕ ವಿನಯ ಕುಮಾರ್ ಸೊರಕೆ ಅಧ್ಯಕ್ಷತೆ ವಹಿಸಿದ್ದರು. ಸಚಿವರಾದ ಪ್ರಮೋದ್ ಮಧ್ವರಾಜ್, ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ರಿಝ್ವಾನ್ ಆರ್ಷದ್, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಸವನ ಗೌಡ ಬಾದರ್ಲಿ, ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ, ಮುಖಂಡರಾದ ಶಾಫಿ ಪಾರಂಬಲ್, ಶ್ರೀನಿವಾಸ್, ಜಭೀ ಮಾಥುರ್, ಸುಹೈಲ್ ಕಂದಲ್, ಉಮೇಶ್ ಬೋರೇಗೌಡ, ಜನಾರ್ಧನ ತೋನ್ಸೆ, ಎಂ.ಎ. ಗಫೂರ್, ಜಿ.ಎ. ಬಾವಾ, ಹಬೀಬ್ ಅಲಿ, ಎಂ.ಎಸ್. ಮಹಮ್ಮದ್, ರಾಕೇಶ್ ಮಲ್ಲಿ, ಮಿಥುನ್ ರೈ, ನವೀನ್ಚಂದ್ರ ಜೆ. ಶೆಟ್ಟಿ, ಸುಧೀರ್ ಹೆಗ್ಡೆ, ಶಿವರಾಮ ಶೆಟ್ಟಿ, ಸುಧಾಕರ ಕೋಟ್ಯಾನ್, ನಿತ್ಯಾನಂದ ಶೆಟ್ಟಿ, ಶ್ಯಾಮಲಾ ಭಂಡಾರಿ, ಮುರಳಿ ಶೆಟ್ಟಿ, ರಾಜು ಪೂಜಾರಿ, ಅಶೋಕ್ ಕುಮಾರ್ ಕೊಡವೂರು, ಶಂಕರ ಕುಂದರ್, ಗೀತಾ ವಾಗ್ಲೆ, ಸೌಮ್ಯ ಎಸ್., ರವಿಶಂಕರ್ ಶೇರಿಗಾರ್ ಸೇರಿದಂತೆ ವಿವಿಧ ನಾಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್ ಸ್ವಾಗತಿಸಿ, ಪ್ರಸ್ತಾವನೆಗೈದರು. ರಾಜ್ಯ ಕಾರ್ಯದರ್ಶಿ ಅಬ್ದುಲ್ ಅಜೀಜ್ ವಂದಿಸಿದರು. ಯುವ ಕಾಂಗ್ರೆಸ್ ಉಸ್ತುವಾರಿ ಪಿ. ಅಮೃತ್ ಶೆಣೈ ಕಾರ್ಯಕ್ರಮ ನಿರೂಪಿಸಿದರು.
ತಾಕತ್ತಿದ್ದರೆ ಸಂವಿಧಾನ ಬದಲಾಯಿಸಲಿ
ಸಮಸ್ತ ಭಾರತೀಯರ ರಕ್ಷಣೆಗೆ ಸಂವಿಧಾನ ಸಾಕು. ಕೇಂದ್ರದಲ್ಲಿ ಬಹುಮತ ಹೊಂದಿರುವ ಸರ್ಕಾರವು ತಾಕತ್ತಿದ್ದರೆ ಸಂವಿಧಾನವನ್ನು ಬದಲಾಯಿಸಿ ತೋರಿಸಲಿ. ಆಗ ಸೆಕ್ಯುಲರ್ ಜನ ಏನೆಂಬುದನ್ನು ಮಾಡಿ ತೋರಿಸುತ್ತೇವೆ ಎಂದು ರಿಝ್ವಾನ್ ಆರ್ಶದ್ ಸವಾಲೊಡ್ಡಿದರು.
ಮನಹದಾಯಿ ವಿಷಯ ಬಿಜೆಪಿಗೆ ತಿರುಗುಬಾಣ: ಗುಂಡೂರಾವ್
ಮಹದಾಯಿ ವಿಚಾರದಲ್ಲಿ ಯಡಿಯೂರಪ್ಪ ಅವರು ಸ್ವಾರ್ಥದ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿ ಮಹದಾಯಿ ವಿಚಾರ ಮುಂದಿಟ್ಟು ರಾಜಕೀಯ ಲಾಭ ಪಡೆಯುವ ಹುನ್ನಾರ ಮಾಡಿದ್ದು, ಇದೀಗ ಮಹದಾಯಿ ಯೋಜನೆ ತಿರುಗು ಬಾಣವಾಗಿದೆ. ನೀರು, ಗಡಿಯ ವಿಚಾರದಲ್ಲಿ ಸಂಘಟಿತರಾಗಬೇಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಕಾಪುವಿನಲ್ಲಿ ಮಂಗಳವಾರ ಉಡುಪಿ ಜಿಲ್ಲಾ ಯುವಸಮಾವೇಶ ಕಾರ್ಯಕ್ರಮದಲ್ಲಿ ದಿನೇಶ್ ಗುಂಡೂರಾವ್ ಅವರು ಯಡಿಯೂರಪ್ಪರ ಆರೋಪದ ಬಗ್ಗೆ ಮಾಧ್ಯಮ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದ ಅವರು, ಪ್ರತಿಭಟನೆ ನಡೆಸುವ ರೈತರು ಕಾಂಗ್ರೆಸ್ ಪಕ್ಷದವರಲ್ಲ. ಪಕ್ಷಕ್ಕೂ ಪ್ರತಿಭಟನಕಾರರಿಗೂ ಯಾವುದೇ ಸಂಬಂಧ ಇಲ್ಲ ಎಂದರು.
ಮಹದಾಯಿ ವಿಚಾರದಲ್ಲಿ ನಾನು ಬೆಳಗ್ಗೆ ರೈತರನ್ನು ಭೇಟಿಯಾಗಿದ್ದೇನೆ. ಕಳೆದ 4 ದಿನಗಳಿಂದ ನಿರಂತರ ಪ್ರತಿಭಟನೆ ನಡೆಯುತ್ತಿದೆ. ಅಲ್ಲಿನ ಮೇಯರ್ರೊಂದಿಗೆ ಹೋಗಿದ್ದೇನೆ. ದೂರದ ಊರುಗಳಿಂದ ಸುಮಾರು 500 ಮಂದಿ ಬಂದಿದ್ದಾರೆ. ಅವರಲ್ಲಿ ಕೆಲವೊಂದು ಜನ ಅಸೌಖ್ಯದಿಂದಿದ್ದಾರೆ. ನಾನೂ ರೈತರಲ್ಲಿ ಹೋರಾಟ ಕೈ ಬಿಡಿ, ಒಗ್ಗಟ್ಟಾಗಿ ಹೋರಾಡೋಣ ಎಂದು ಮನವಿ ಮಾಡಿದ್ದೇನೆ. ಅವರು ಪಟ್ಟು ಸಡಿಲಿಸದೆ ಯಡಿಯೂರಪ್ಪರು ಸ್ಥಳಕ್ಕೆ ಬರುವಂತೆ ಆಗ್ರಹಿಸುತ್ತಿದ್ದಾರೆ. ಬಿ.ಬಿ.ಎಂ.ಪಿ. ವತಿಯಿಂದ ಸಹಾಯ ನೀಡುವಂತೆ ಮಾಡಿದ್ದೇನೆಯೇ ಹೊರತು ಅನ್ಯ ರಾಜಕಾರಣ ಮಾಡಿಲ್ಲ ಎಂದರು.