ಉಡುಪಿ: ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟದಿಂದ ಪ್ರತಿಭಟನೆ
ಉಡುಪಿ, ಡಿ.27: ವಿಜಯಪುರದಲ್ಲಿ ದಾನಮ್ಮ ಎಂಬ ದಲಿತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಹಾಗೂ ಸಂವಿಧಾನ ಬದಲಾವಣೆಯ ಕುರಿತು ಮಾತನಾಡಿದ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಹೇಳಿಕೆಯನ್ನು ಖಂಡಿಸಿ ಉಡುಪಿ ಬ್ಲಾಕ್ ಕಾಂಗ್ರೆಸ್ನ ಎಸ್ಸಿ ಘಟಕದ ವತಿಯಿಂದ ಇಂದು ಸಂಜೆ ನಗರದ ಅಜ್ಜರಕಾಡಿನಲ್ಲಿರುವ ಹುತಾತ್ಮರ ಸ್ಮಾರಕದ ಎದುರು ಪ್ರತಿಭಟನೆ ನಡೆಸಲಾಯಿತು.
ತಾವು ಹಿಂದೂ ರಕ್ಷಕರು ಎಂಬಂತೆ ಪೋಸು ನೀಡುತಿದ್ದ ಬಿಜೆಪಿ ಹಾಗೂ ಸಂಘಪರಿವಾರದವರು ಇಂದು ದಾನಮ್ಮ ಅತ್ಯಾಚಾರ- ಹತ್ಯೆ ಪ್ರಕರಣದಲ್ಲಿ ಸಂಪೂರ್ಣವಾಗಿ ಬೆತ್ತಲಾಗಿದ್ದಾರೆ. ದಾನಮ್ಮ ಅತ್ಯಾಚಾರ-ಕೊಲೆಯ ಕುರಿತು ಅವರ್ಯಾರು ಸೊಲ್ಲೆತ್ತದಿರುವುದರಿಂದ ಅವರ ನಕಲಿ ಹಿಂದುತ್ವ ಜಗಜ್ಜಾಹೀರಾಗಿದೆ ಎಂದು ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದವರು ನುಡಿದರು.
ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಬಂಧಿತರಾದವರೆಲ್ಲರೂ ಬಿಜೆಪಿ ಸದಸ್ಯರೆಂಬುದು ಸಾಬೀತಾದ ಹಿನ್ನೆಲೆಯಲ್ಲಿ ಅವರ್ಯಾರು ಮಾತನಾಡುತ್ತಿಲ್ಲ. ಬಿಜೆಪಿ ತನ್ನ ಸ್ವಾರ್ಥಕ್ಕಾಗಿ ನಡೆಸುತ್ತಿರುವ ಶವ ರಾಜಕೀಯವನ್ನು ಪ್ರತಿಯೊಬ್ಬರೂ ಪ್ರಶ್ನಿಸಬೇಕಾಗಿದೆ. ಸಚಿವ ಅನಂತ ಕುಮಾರ್ ಹೆಗಡೆಗೆ ಬುದ್ಧಿಭ್ರಮಣೆಯಾಗಿರ ಬಹುದು ಅಥವಾ ಇದು ಬಿಜೆಪಿಯ ಹಿಡನ್ ಅಜೆಂಡಾವನ್ನು ಎತ್ತಿ ತೋರಿಸುತ್ತಿರ ಬಹುದು ಎಂದು ಅವರು ನುಡಿದರು.
ಪ್ರತಿಭಟನಕಾರರನ್ನುದ್ದೇಶಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಬ್ಲಾಕ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಬ್ಲಾಕ್ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್ ಮುಂತಾದವರು ಮಾತನಾಡಿದರು.
ಪ್ರತಿಭಟನೆಯಲ್ಲಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್ರಾಜ್, ಸದಸ್ಯರಾದ ರಮೇಶ್ ಕಾಂಚನ್, ನಾರಾಯಣ ಕುಂದರ್, ಗಣೇಶ ನೇರ್ಗಿ, ನಾಯಕರಾದ ಚಂದ್ರಿಕಾ ಶೆಟ್ಟಿ,ಕೇಶವ ಎಂ.ಕೋಟ್ಯಾನ್, ಯತೀಶ್ ಕರ್ಕೇರ, ಶೇಖರ ಕೋಟ್ಯಾನ್, ಕೀರ್ತಿ ಶೆಟ್ಟಿ ಧನಂಜಯ್ ಮುಂತಾದವರು ಉಪಸ್ಥಿತರಿದ್ದರು.