×
Ad

ರಾಷ್ಟ್ರೀಯ ಭಾವೈಕ್ಯತೆಗೆ ರೋವರ್ಸ್- ರೇಂಜರ್ಸ್ ಪಾತ್ರ ಹಿರಿದು: ಸಚಿವ ರೈ

Update: 2017-12-28 22:08 IST

ಮಂಗಳೂರು, ಡಿ. 28: ರಾಷ್ಟ್ರೀಯ ಭಾವೈಕ್ಯತೆಯನ್ನು ಜನಮಾನಸದಲ್ಲಿ ಮೂಡಿಸಿ ಜಾತ್ಯತೀತ ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ರೋವರ್ಸ್- ರೇಂಜರ್ಸ್‌ಗಳ ಪಾತ್ರ ಹಿರಿದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಭಿಪ್ರಾಯಿಸಿದ್ದಾರೆ.

ಅವರು ಇಂದು ನಗರದ ಸಂತ ಅಲೋಶಿಯಸ್ ಪ್ರಾಥಮಿಕ ಶಾಲೆಯಲ್ಲಿ ಇಂದಿನಿಂದ ಜನವರಿ 1ರವರೆಗೆ ನಡೆಯಲಿರುವ ರಾಷ್ಟ್ರ ಮಟ್ಟದ ರೋವರ್ಸ್ ರೇಂಜರ್ಸ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜ ಸೇವೆಗೆ ವೇದಿಕೆಗಳು ಹಲವಿದ್ದರೂ, ಶಿಸ್ತು ಬದ್ಧವಾಗಿ ಗುರುತಿಸಿಕೊಂಡಿರುವ ಕೆಲ ಸಂಘಟನೆಗಳಲ್ಲಿ ರೋವರ್ಸ್ ರೇಂಜರ್ಸ್ ಕೂಡಾ ಪ್ರಮುಖ. ಇಂದು ಸಮಾಜದಲ್ಲಿ ನಡೆಯುತ್ತಿರುವ ಮತೀಯ ಕಲಹಗಳು ರಾಷ್ಟ್ರದ ಭಾವೈಕ್ಯತೆ ಹಾಗೂ ಅಖಂಡತೆಗೆ ತೊಂದರೆ ನೀಡುತ್ತಿವೆ. ಇಂತಹ ಸಂದರ್ಭದಲ್ಲಿ ಶಿಸ್ತುಬದ್ಧವಾದ ಇಂತಹ ಸಂಘಟನೆಗಳಲ್ಲಿರುವ ಯುವ ಸಮುದಾಯದಿಂದ ಮನುಷ್ಯರ ನಡುವೆ ಪ್ರೀತಿ, ವಿಶ್ವಾಸ, ನಂಬಿಕೆಯನ್ನು ಗಟ್ಟಿಗೊಳಿಸಲು ಸಾಧ್ಯವಾಗಲಿದೆ. ಯುವ ಪೀಳಿಗೆ ಇಡುವ ಹೆಜ್ಜೆಯಲ್ಲಿ ಭವಿಷ್ಯದ ಸುಂದರ ಭಾರತದ ಕಲ್ಪನೆ ಅಡಕವಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ನಾಯಕ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಷ್ಟ್ರೀಯ ಆಯುಕ್ತ ಅನಲೇಂದ್ರ ಶರ್ಮಾ ಮಾತನಾಡಿ, ಜನವರಿ 1ರವರೆಗೆ ನಡೆಯಲಿರುವ ಈ ಸಮಾವೇಶದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಭಾಗವಹಿಸುತ್ತಿರುವ ರೋವರ್ಸ್ ಮತ್ತು ರೇಜಂರ್ಸ್ ಪ್ರತಿನಿಧಿಗಳು ಸಾಹಸ ಕ್ರೀಡೆಗಳ ಜತೆ, ವೃತ್ತಿಪರ ಮಾರ್ಗದರ್ಶನ, ವಿಪತ್ತು ನಿರ್ವಹಣೆ, ಟ್ರೆಕ್ಕಿಂಗ್ ಮೊದಲಾದ ಚಟುವಟಿಕೆಗಳಲ್ಲಿ ಭಾಗವಹಿಸಲಿದ್ದಾರೆ ಎಂದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಆಯುಕ್ತ ಡಾ.ಎನ್.ಜಿ. ಮೋಹನ್ ಸ್ವಾಗತಿಸುತ್ತಾ, ವಿ.ಪಿ. ದೀನ್‌ದಯಾಲ್ ನಾಯ್ಡು ಅವರ ಶತಮಾನೋತ್ಸವ ಸ್ಮರಣಾರ್ಥ ಸಮಾವೇಶ ನಡೆಯುತ್ತಿರುವುದಾಗಿ ತಿಳಿಸಿದರು.

ದ.ಕ. ಜಿಲ್ಲೆಯಲ್ಲಿ 1921ರಲ್ಲಿ ಸಂತ ಅಲೋಶಿಯಸ್‌ನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಆರಂಭಗೊಂಡಿತ್ತು. ಪ್ರಸ್ತುತ ದ.ಕ. ಜಿಲ್ಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‌ನಡಿ 45745 ಪ್ರತಿನಿಧಿಗಳಿದ್ದಾರೆ ಎಂದು ಅವರು ಹೇಳಿದರು. ವಿ.ಪಿ. ದೀನ್‌ದಯಾಲ್ ನಾಯ್ಡು ಅವರ ಶತಮಾನೋತ್ಸವ ಸಂಭ್ರಮದ ಸಂಚಾಲಕ ಎಂ.ಎ. ಚೆಳ್ಳಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭ ಭಾರತ್ ಸ್ಕೌಟ್ಸ್‌ನ ರಾಷ್ಟ್ರೀಯ ಆಯುಕ್ತರಾಗಿ ನೇಮಕಗೊಂಡಿರುವ ಎಂ.ಎ. ಖಾಲಿದ್ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಉಪಾಧ್ಯಕ್ಷ ಕೊಂಡಾಜಿ ಬಿ. ಷಣ್ಮುಖಪ್ಪ ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆಯನ್ನು ಶಾಸಕ ಜೆ.ಆರ್. ಲೋಬೋ ವಹಿಸಿದರು. ವೇದಿಕೆಯಲ್ಲಿ ಮಂಗಳೂರು ವಿವಿ ರಿಜಿಸ್ಟ್ರಾರ್ ಯು. ಪ್ರಕಾಶ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಐರಿನ್ ಡಿಕುನ್ನಾ, ರಾಧಾ ವೆಂಕಟೇಶ್, ರಾಮಲತಾ ಮೊದಲಾದವರು ಉಪಸ್ಥಿತರಿದ್ದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಕಾರ್ಯದರ್ಶಿ ಯು. ಗೋಪಾಲಕೃಷ್ಣ ಭಟ್ ವಂದಿಸಿದರು. ಪ್ರೊ. ಡಾ. ಮಾಧ ಭಟ್ ಕಾರ್ಯಕ್ರಮ ನಿರೂಪಿಸಿದರು.

ಮಂಗಳೂರಿನಲ್ಲಿ ರೋವರ್ಸ್- ರೇಂಜರ್ಸ್ ಗಳ ಸಮಾಗಮ: 14 ರಾಜ್ಯಗಳ 739 ಪ್ರತಿನಿಧಿಗಳ ಆಗಮನ

ಕಡಲ ನಗರಿ ಮಂಗಳೂರು ಮತ್ತೊಮ್ಮೆ ರಾಷ್ಟ್ರೀಯ ಸಮಾವೇಶಕ್ಕೆ ಸಾಕ್ಷಿಯಾಗಿದೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನಡಿ ರೇಂಜರ್ಸ್ ಮತ್ತು ರೋವರ್ಸ್‌ಗಳ ರಾಷ್ಟ್ರೀಯ ಸಮಾವೇಶ ಇಂದಿನಿಂದ ಜನವರಿ 1ರವರೆಗೆ ನಗರದ ಸಂತ ಅಲೋಶಿಯಸ್‌ನ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿದ್ದು, ಇದರಲ್ಲಿ ದೇಶದ ವಿವಿಧ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಗುರುವಾರ ಸಂಜೆಯವರೆಗೆ ದೇಶದ 14 ರಾಜ್ಯಗಳ 739 ರೇಂಜರ್ಸ್ ಮತ್ತು ರೋವರ್ಸ್‌ಗಳು ಆಗಮಿಸಿದ್ದಾರೆ. ಬಿಹಾರ, ಮಣಿಪುರ ಹಾಗೂ ಛತ್ತೀಸ್‌ಗಡದ ಪ್ರತಿನಿಧಿಗಳು ರೈಲು ಪ್ರಯಾಣ ವಿಳಂಬಗೊಂಡ ಹಿನ್ನೆಲೆಯಲ್ಲಿ ರಾತ್ರಿ ವೇಳೆಗೆ ಸಮಾವೇಶವನ್ನು ಸೇಿಕೊಳ್ಳಲಿದ್ದಾರೆ.

ಇದೊಂದು ವಿಶಿಷ್ಟ ಅನುಭವ

‘‘ನಾವು ಇದೇ ಮೊದಲ ಬಾರಿಗೆ ಕರ್ನಾಟಕ, ಅದರಲ್ಲೂ ಮಂಗಳೂರಿಗೆ ಆಗಮಿಸುತ್ತಿದ್ದೇವೆ. ಇಲ್ಲಿ ನಮಗೆ ದೊರೆತ ಸ್ವಾಗತ, ನಾವು ಈವರೆಗೆ ಭಾಗವಹಿಸಿದ ಶಿಬಿರಗಳಿಗಿಂತಲೂ ಭಿನ್ನ ಹಾಗೂ ವಿಶೇಷವಾಗಿದೆ. ತುಂಬಾ ಖುಷಿಯಾಗಿದೆ. ರೇಂಜರ್ಸ್ ಮತ್ತು ರೋವರ್ಸ್‌ಗಳಿಗಾಗಿ ಆಯೋಜಿಸಲಾದ ಈ ಶಿಬಿರವು ಭವಿಷ್ಯದಲ್ಲಿ ನಮ್ಮ ಜೀವನಕ್ಕೂ ಉಪಯುಕ್ತವಾಗಲಿದೆ’’ ಎಂದು ರಾಜಸ್ತಾನದ ರೇಂಜಸ್ ಮತ್ತು ರೋವರ್ಸ್‌ಗಳು ‘ವಾರ್ತಾಭಾರತಿ’ ಜತೆ ಸಂತಸ ಹಂಚಿಕೊಂಡರು. ರಾಜಸ್ತಾನದಿಂದ 18 ರೋವರ್‌ಗಳು, 10 ರೇಂಜರ್ಸ್‌ಗಳು ಹಾಗೂ ಹಾಗೂ ಇಬ್ಬರು ತಂಡ ನಾಯಕರು ಆಗಮಿಸಿದ್ದಾರೆ.

ಪೊಲೀಸ್ ಸೇವೆಗೆ ಸೇರುವಲ್ಲಿ ನನಗಿದು ಸಹಕಾರಿಯಾಗುವ ನಂಬಿಕೆ

‘‘ಭವಿಷ್ಯದಲ್ಲಿ ನನಗೆ ಪೊಲೀಸ್ ಸೇವೆಗೆ ಸೇರಬೇಕೆಂಬ ಬಯಕೆ ಇದೆ. ಆ ನಿಟ್ಟಿನಲ್ಲಿ ಈ ರೇಂಜರ್ಸ್‌ನಲ್ಲಿನ ಅನುಭವ ಬಹಳಷ್ಟು ಪ್ರಯೋಜನ ಹಾಗೂ ಪೂರಕವಾಗಲಿದೆ ಎಂಬ ವಿಶ್ವಾಸವಿದೆ. ಮಂಗಳೂರಿಗೆ ಪ್ರಥಮ ಬಾರಿಗೆ ಬರುತ್ತಿದ್ದು, ತುಂಬಾ ಖುಷಿಯಾಗುತ್ತಿದೆ. ಮುಂದಿನ ನಾಲ್ಕು ದಿನಗಳ ಶಿಬಿರದ ಚಟುವಟಿಕೆಗಳ ಬಗ್ಗೆ ತೀವ್ರ ಕುತೂಹಲವಿದೆ’’ ಎಂದು ಒರಿಸ್ಸಾದ ಬಿಎ ಪದವಿ ವಿದ್ಯಾರ್ಥಿನಿ ಸುಮಿತ್ರಾ ಅಭಿಪ್ರಾಯಿಸಿದ್ದಾರೆ. ಒರಿಸ್ಸಾದಿಂದ ಆರು ರೋವರ್ಸ್ ಹಾಗೂ 4 ರೇಂಜರ್ಸ್‌ಗಳು ಹಾಗೂ ಇಬ್ಬರು ನಾಯಕರು ಆಗಮಿಸಿದ್ದಾರೆ.

ಬಿಸಿ ಬಿಸಿ ಫಲಾಹಾರ- ಊಟದ ವ್ಯವಸ್ಥೆ

ಕರ್ನಾಟಕದ 583 ಪ್ರತಿನಿಧಿಗಳು (301 ರೋವರ್ಸ್ ಹಾಗೂ 270 ರೇಂಜರ್ಸ್) ಸೇರಿದಂತೆ ಸುಮಾರು 1000ದಷ್ಟು ಮಂದಿಗೆ ಅಗತ್ಯವಾದ ವಸತಿ ಹಾಗೂ ಊಟೋಪಚಾರದ ವ್ಯವಸ್ಥೆಯನ್ನು ದ.ಕ. ಜಿಲ್ಲಾಡಳಿತವು ಮಾಡುತ್ತಿದೆ. ಸಂತ ಅಲೋಶಿಯಸ್ ಪ್ರಾಥಮಿಕ ಶಾಲೆಯ ಆವರಣದಲ್ಲೇ ಸುಮಾರು 10ಕ್ಕೂ ಅಧಿಕ ಮಂದಿ ಬಾಣಸಿಗರು ಬಿಸಿ ಬಿಸಿ ಫಲಾಹಾರ ಹಾಗೂ ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ದೇಶದ ವಿವಿಧ ರಾಜ್ಯಗಳಿಂದ ಪ್ರತಿನಿಧಿಗಳು ಆಗಮಿಸಿರುವುದರಿಂದ ಅವರಿಗೆ ಪೂರಕವಾದ ಚಪಾತಿ ಹಾಗೂ ಪಲ್ಯಳನ್ನೂ ತಯಾರು ಮಾಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News