ವಿಶ್ವ ಮಾನವ ದಿನಾಚರಣೆ: ಭಟ್ಕಳ ಕ.ಸಾ.ಪ.ವತಿಯಿಂದ ವಿವಿಧ ಸ್ಪರ್ಧೆ
ಭಟ್ಕಳ, ಡಿ. 29: ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನವನ್ನು ವಿಶ್ವಮಾನವ ದಿನಾಚರಣೆಯಾಗಿ ಆಚರಿಸುವ ಹಿನ್ನೆಲೆಯಲ್ಲಿ ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸರ್ಕಾರಿ ಪ್ರೌಢಶಾಲೆ ಸೊನಾರಕೇರಿಯ ವಿಧ್ಯಾರ್ಥಿಗಳಿಗೆ ಕುವೆಂಪು ರಚಿತ ಗೀತಗಾಯನ ಹಾಗೂ ವಿಶ್ವಮಾನವದಿನಾಚರಣೆ ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯಾಧ್ಯಾಪಕಿ ಶಂಶಾದ್ ಅವರು ಮಾತನಾಡಿ ಕುವೆಂಪು ಅವರ ಬದುಕು ಹಾಗೂ ಬರವಣಿಗೆ ಎಲ್ಲರಿಗೂ ಮಾದರಿ. ಅವರ ವಿಶ್ವಮಾನವ ಸಂದೇಶವನ್ನು ಅರ್ಥೈಸಿಕೊಂಡು ನಾವು ಬಾಳಬೇಕಿದೆ ಎಂದರಲ್ಲದೇ ಅವರ ಜನ್ಮದಿನದ ಅಂಗವಾಗಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಮಕ್ಕಳಿಗಾಗಿ ಸ್ಪರ್ದೆ ಏರ್ಪಡಿಸಿ ಬಹುಮಾನ ನೀಡಿ ಪ್ರೋತ್ಸಾಹಿಸುತ್ತಿರುವುದ ಶ್ಲಾಘನೀಯ ಎಂದು ನುಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿದ್ದ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ಕುವೆಂಪು ಅವರ ಮನುಷ್ಯ ಪ್ರೀತಿಯನ್ನು, ವಿಶ್ವಮಾನವ ಸಂದೇಶವನ್ನು ಅರ್ಥೈಸಿಕೊಳ್ಳಲು ಅನಿಕೇತನ ಕವನವೊಂದೇ ಸಾಕು. ಅವರ ಸಾಹಿತ್ಯವನ್ನು ಓದುವ ಮೂಲಕ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಮನುಷ್ಯ ಪ್ರೀತಿ ತುಂಬಿಕೊಂಡ ಸಾರ್ಥಕ ಬದುಕನ್ನು ಕಟ್ಟಿಕೊಳ್ಳಬೇಕಿದೆ ಎಂದು ನುಡಿದರು.
ವಿಶ್ವಮಾನವ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ ಭಾವಗೀತೆ ಸ್ಪರ್ಧೆಯಲ್ಲಿ ಕುಸುಮಾ ಆರ್., ವಂದನಾ ಎಂ.ನಾಯ್ಕ, ಮೇಘ ಆರ್, ನಾಯ್ಕ ಅನುಕ್ರಮವಾಗಿ ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆದುಕೊಂಡರೆ ಚೈತ್ರಾ ದೇವಡಿಗ ಸಮಾಧಾನಕರ ಬಹುಮಾನ ಪಡೆದುಕೊಂಡರು. ಭಾಷಣ ಸ್ಪರ್ಧೆಯಲ್ಲಿ ತೇಜೇಶ್ವರಿ ಎಮ್.ನಾಯ್ಕ, ಭಾರತಿ ಮರಾಠಿ, ಭವ್ಯ ಎಮ್.ನಾಯ್ಕ ಅನುಕ್ರಮವಾಗಿ ಪ್ರಥಮ, ದ್ವತೀಯ ಹಾಗೂ ತೃತೀಯ ಸ್ಥಾನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಉಮಾಬಾಯಿ ನಾಯಕ್, ಭಾರತಿ ನಾಯಕ,ಗಣಪತಿ ಶೇರೇಗಾರ,ಮಹೇಶ ನಾಯ್ಕ, ಪುಷ್ಪಾ ನಾಯ್ಕ,ಆರತಿ ಹಲನಕರ, ಬಸವರಾಜ ಹಳೇಜೋಳ ಹಾಗೂ ವಿದ್ಯಾರ್ಥಿ ವೃಂದದವರು ಹಾಜರಿದ್ದರು.