ಚಿತ್ರ ವೀಕ್ಷಕರು ಸಿನೆಮಾ ಮಂದಿರದ ಆಹಾರ ಯಾಕೆ ಖರೀದಿಸಬೇಕು: ಬಾಂಬೆ ಹೈಕೋರ್ಟ್ ಪ್ರಶ್ನೆ
Update: 2018-01-04 16:23 GMT
ಮುಂಬೈ, ಜ. 4: ರಾಜ್ಯಾದ್ಯಂತ ಚಲನಚಿತ್ರ ಮಂದಿರ ಹಾಗೂ ಮಲ್ಟಿಪ್ಲೆಕ್ಸ್ಗಳಲ್ಲಿ ಹೊರಗಿನ ಆಹಾರ ಕೊಂಡೊಯ್ಯುವುದಕ್ಕೆ ಇರುವ ನಿರ್ಬಂಧ ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ದಾವೆಗೆ ಪ್ರತಿಕ್ರಿಯೆ ನೀಡುವಂತೆ ಬಾಂಬೆ ಉಚ್ಚ ನ್ಯಾಯಾಲಯ ಮಹಾರಾಷ್ಟ್ರ ಸರಕಾರಕ್ಕೆ ನಿರ್ದೇಶಿಸಿದೆ. ಸಿನೆಮಾ ಮಂದಿರ ಪ್ರವೇಶಿಸುವ ಸಾರ್ವಜನಿಕರು ಹಾಗೂ ಅವರ ಬ್ಯಾಗ್ ಅನ್ನು ಭದ್ರತಾ ಸಿಬ್ಬಂದಿ ಪರಿಶೀಲಿಸುವುದು ಯಾಕೆ ? ಅವರು ತಮ್ಮ ಆಹಾರ ಪದಾರ್ಥಗಳನ್ನೇ ಖರೀದಿಸಬೇಕು ಎಂದು ಒತ್ತಾಯಿಸುವುದು ಯಾಕೆ ಎಂದು ನ್ಯಾಯಾಲಯ ಪ್ರಶ್ನಿಸಿದೆ. ಮೂರು ವಾರಗಳ ಒಳಗೆ ಮಾಹಿತಿ ನೀಡುವಂತೆ ಆರ್.ಎಂ. ಬೋರ್ಡೆ ಹಾಗೂ ರಾಜೇಶ್ ಕೆಟ್ಕರ್ ಅವರನ್ನು ಒಳಗೊಂಡ ಪೀಠ ಮಹಾರಾಷ್ಟ್ರ ಸರಕಾರಕ್ಕೆ ನಿರ್ದೇಶಿಸಿದೆ. ನ್ಯಾಯವಾದಿ ಆದಿತ್ಯ ಪ್ರತಾಪ್ ಮೂಲಕ ನಗರದ ನಿವಾಸಿ ಜೈನೇಂದ್ರ ಈ ಸಾರ್ವಜನಿಕ ಹಿತಾಸಕ್ತಿ ದಾವೆ ದಾಖಲಿಸಿದ್ದರು.