ಫೆ.11ರಂದು 'ಮಣಿಪಾಲ ಮ್ಯಾರಥಾನ್-2018'

Update: 2018-01-12 16:43 GMT

ಉಡುಪಿ, ಜ.12: ಉಡುಪಿ ಜಿಲ್ಲಾ ಅಮೆಚೂರು ಅಥ್ಲೆಟಿಕ್ ಸಂಸ್ಥೆ, ಮಾಹೆ ಮಣಿಪಾಲ, ಸಿಂಡಿಕೇಟ್ ಬ್ಯಾಂಕ್ ಹಾಗೂ ಅದಾನಿ ಯುಪಿಸಿಎಲ್‌ಗಳ ಸಹಯೋಗದೊಂದಿಗೆ ಮಣಿಪಾಲದಲ್ಲಿ ‘ಮಣಿಪಾಲ ಮ್ಯಾರಥಾನ್-2018’ ನ್ನು ಫೆ.11ರಂದು ಬೆಳಗ್ಗೆ 6:30ಕ್ಕೆ ಆಯೋಜಿಸಲಿದೆ ಎಂದು ಮಣಿಪಾಲ ಮ್ಯಾರಥಾನ್ ಸಮಿತಿಯ ಅಧ್ಯಕ್ಷ ಕೆ.ರಘುಪತಿ ಭಟ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಲು ಈ ಸ್ಪರ್ಧೆಯನ್ನು ಹೆಚ್ಚು ವ್ಯವಸ್ಥಿತವಾಗಿ ನಡೆಸಲಾಗುತ್ತದೆ. ಸುಮಾರು 10,000 ಮಂದಿ ಸ್ಪರ್ಧಿಗಳು ಈ ಬಾರಿ ಭಾಗವಹಿಸುವ ನಿರೀಕ್ಷೆ ಇದ್ದು, ಈಗಾಗಲೇ 2000ಕ್ಕೂ ಅಧಿಕ ಮಂದಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದರು.

ಈ ಬಾರಿ ಮ್ಯಾರಥಾನ್ ಸ್ಪರ್ಧೆಯಲ್ಲಿ ಒಟ್ಟು 8.5 ಲಕ್ಷ ರೂ. ನಗದು ಬಹುಮಾನ ನೀಡಲಾಗುತ್ತಿದೆ. 21ಕಿ.ಮೀ.ನ ಹಾಫ್ ಮ್ಯಾರಥಾನ್‌ನ್ನು ಗೆಲ್ಲುವ ಮೊದಲು ಐವರು ಸ್ಪರ್ಧಿಗಳಿಗೆ ಕ್ರಮವಾಗಿ 75,000ರೂ., 35,000, 20,000, 10,000ರೂ., 7,500ರೂ. ನೀಡಲಾಗುವುದು.

ಅದೇ ರೀತಿ 35ರಿಂದ 55 ವರ್ಷದವರಿಗೆ 35,000ರೂ, 20,000ರೂ., 10,000ರೂ., ಮಣಿಪಾಲ ವಿವಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಕ್ರಮವಾಗಿ 10,000ರೂ., 7,500 ಹಾಗೂ 5000ರೂ., 56 ವರ್ಷ ಮೇಲ್ಪಟ್ಟ ಸ್ಪರ್ಧಿಗಳಿಗೆ ಆಕರ್ಷಕ ಬಹುಮಾನಗಳಿವೆ ಎಂದರು.

10ಕಿ.ಮೀ. ದೂರದ ಮುಕ್ತ ವಿಭಾಗದ ಮೊದಲ ಮೂರು ಸ್ಥಾನಿಗಳಿಗೆ ಕ್ರಮವಾಗಿ 30ಸಾವಿರ, 20ಸಾವಿರ ಹಾಗೂ 10ಸಾವಿರ ರೂ., 35ರಿಂದ 56 ವರ್ಷದವರಿಗೆ, 56 ವರ್ಷ ಮೇಲ್ಪಟ್ಟವರಿಗೆ, ಮಾಹೆ ವಿವಿ ವಿದ್ಯಾರ್ಥಿಗಳಿಗೆ ಸಿಬ್ಬಂದಿಗಳಿಗೆ ಆಕರ್ಷಕ ಬಹುಮಾನ ನೀಡಲಾಗುತ್ತದೆ.

ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಇದರ 75ನೇ ವರ್ಷ ಆಚರಣೆಯ ಸಂಬಂಧ ಅಕಾಡೆಮಿ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳಿದ್ದು, ಕಾಲೇಜು ವಿದ್ಯಾರ್ಥಿಗಳಿಗೆ ಐದು ಕಿ.ಮೀ, ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ 3ಕಿ.ಮೀ, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ 3ಕಿ.ಮೀ. ಸ್ಪರ್ಧೆ ನಡೆಯಲಿದೆ. ಕಾರ್ಪೋರೇಟ್ ವಿಭಾಗದಲ್ಲೂ ಸ್ಪರ್ಧೆ ನಡೆಯಲಿದೆ ಎಂದು ರಘುಪತಿ ಭಟ್ ತಿಳಿಸಿದರು.

ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ತಮ್ಮ ಸಂಸ್ಥೆಯ ಮುಖ್ಯಸ್ಥರಿಂದ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ತರಬೇಕು. ಪ್ರವೇಶ ಪತ್ರ ಸಲ್ಲಿಸಲು ಫೆ.2 ಕೊನೆಯ ದಿನವಾಗಿರುತ್ತದೆ. ಹೆಸರುಗಳನ್ನು ಆನ್‌ಲೈನ್ -www.manipal.marathon.com- ಇಲ್ಲಿ ನೊಂದಾಯಿಸಿಕೊಳ್ಳ ಬಹುದು. ಹೆಚ್ಚಿನ ಮಾಹಿತಿಗಳಿಗಾಗಿ ದೂರವಾಣಿ ಸಂಖ್ಯೆ:9449481776, 9986821071, 9845774289- ಸಂಪರ್ಕಿಸುವಂತೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್, ಯುಪಿಸಿಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಸಿಂಡಿಕೇಟ್ ಬ್ಯಾಂಕಿನ ಉಪಮಹಾಪ್ರಬಂಧಕ ಹಿರೇಮಠ್, ಮ್ಯಾರಥಾನ್ ಸಮಿತಿ ಕಾರ್ಯದರ್ಶಿ ಡಾ.ವಿನೋದ್ ನಾಯಕ್, ಯುಡಿಎಎಎ ಅಧ್ಯಕ್ಷ ಅಶೋಕ್ ಅಡ್ಯಂತಾಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News