ರಾಜ್ಯ ಸರಕಾರದಿಂದ 'ಹತ್ಯಾ ಭಾಗ್ಯ': ಸಂಸದ ನಳಿನ್ ಕುಮಾರ್
ಬಂಟ್ವಾಳ, ಜ. 14: ಸಿದ್ದರಾಮಯ್ಯ ಸರಕಾರದ ದುರಾಡಳಿತದಿಂದ ರಾಜ್ಯದ ಜನರು ಬೇಸತ್ತಿದ್ದಾರೆ. ಅಹಿಂದ ಹೆಸರಿನಲ್ಲಿ ಹಿಂದೂ, ಮುಸ್ಲಿಮರ ನಡುವೆ ವಿಷಬೀಜ ಬಿತ್ತುವ ಮೂಲಕ ಒಡೆದು ಆಳುತ್ತಿದ್ದಾರೆ. ಅಲ್ಲದೆ ನಿರಂತರವಾಗಿ ಹತ್ಯಾ ಭಾಗ್ಯ ನೀಡುವ ಮೂಲಕ ಹಿಂದೂ ವಿರೋಧಿ ನೀತಿಯನ್ನು ಅನು ಸರಿಸುತ್ತಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ನೇತೃತ್ವದಲ್ಲಿ ರಾಜೇಶ್ ನಾಯ್ಕಾ ಉಳಿಪ್ಪಾಡಿ ಇವರ ಮುಂದಾಳತ್ವದಲ್ಲಿ ಇಂದಿನಿಂದ ಆರಂಭವಾದ 13 ದಿನಗಳ 'ಬಂಟ್ವಾಳದ ಪರಿವರ್ತನೆಗೆ ಗ್ರಾಮದೆಡೆಗೆ ಬಿಜೆಪಿ ನಡಿಗೆ' ಯನ್ನು ಉದ್ಘಾಟಿಸಿ ಅವರು ಮಾತನಾಡಿ, ಟಿಪ್ಪು ಜಯಂತಿ ಆಚರಣೆ ಮೂಲಕ ಮುಸ್ಲಿಮರ ಸಂಸ್ಕೃತಿಯನ್ನು ನಾಶಮಾಡಿದ್ದಾರೆ. ಜನರ ಮನಸ್ಸುಗಳನ್ನು ಒಡೆದು ಆಳುವ ನೀತಿಯ ಮೂಲಕ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ ಎಂದವರು ಆರೋಪಿಸಿದರು.
ಪಾಕ್ ದುಷ್ಕೃತ್ಯಗಳು ನಡೆದಾಗ ಕಾಂಗ್ರೆಸ್ ಮೌನವಾಗಿ ಬೆಂಬಲಿಸಿದೆ. ಮೋದಿ ಅಧಿಕಾರ ವಹಿಸಿಕೊಂಡ ಬಳಿಕ ಯಾವುದೇ ಉಗ್ರ ಚಟುವಟಿಕೆ ದೇಶದೊಳಗೆ ನಡೆದಿಲ್ಲ ಎಂದರು.
ನಮ್ಮ ಮಗುವಿಗೆ ನೀವು ತಂದೆಯಾಗುವುದು ಹೇಗೆ?
ಬಂಟ್ವಾಳದಲ್ಲಿ ನಡೆದಿರುವಂತಹ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಮಂಜೂರು ಮಾಡಿದ್ದು ಬಿಜೆಪಿ. ಬಸ್ ನಿಲ್ದಾಣ, ಕೆಪಿಟಿ, ಅಗ್ನಿ ಶಾಮಕ, ಡಿಗ್ರಿ ಕಾಲೇಜಿಗೆ ನಾವೇ ಮಂಜೂರು ಮಾಡಿದ್ದು. ಆದರೆ ಇದರ ಅಭಿವೃದ್ಧಿ ಹೆಸರಿನಲ್ಲಿ ಮುಖ್ಯಮಂತ್ರಿ ಅವರು ಇತ್ತೀಚೆಗೆ ಉದ್ಘಾಟಿಸಿದ್ದಾರೆ. ನಾವು ಹುಟ್ಟಿಸಿದ ಮಗುವಿಗೆ ನೀವು ತಂದೆಯಾಗಲು ಹೇಗೆ ಸಾಧ್ಯ? ಎಂದು ವ್ಯಂಗ್ಯವಾಡಿದರು.
ಅರಣ್ಯ ಸಚಿವರನ್ನು ಕಾಡಿಗೆ ಕಳುಹಿಸುವೆವು
ರಾಜೇಶ್ ನಾಯ್ಕರನ್ನು ಗೆಲ್ಲಿಸುವ ಮೂಲಕ ಬಂಟ್ವಾಳದಲ್ಲಿ ಶಾಂತಿಯುತ ವಾತಾವರಣ ನಿರ್ಮಾಣ ಬಿಜೆಪಿಯ ಗುರಿ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ರೈ ಯವರನ್ನು ಕಾಡಿಗೆ ಕಳುಹಿಸಲು ಬಂಟ್ವಾಳದ ಜನತೆ ನಿರ್ಧಾರಿಸಿದ್ದಾರೆ ಎಂದು ನಳಿನ್ ಹೇಳಿದರು.
ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್, ಮಾಜಿ ಶಾಸಕ ರುಕ್ಮಯ ಪೂಜಾರಿ, ಮಾಜಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಉಳಿಪಾಡಿಗುತ್ತು ರಾಜೇಶ್ ನಾಯ್ಕ ಮಾತನಾಡಿದರು.
ವೇದಿಕೆಯಲ್ಲಿ ಪ್ರಮುಖರಾದ ಸುಲೋಚನಾ ಜಿ.ಕೆ.ಭಟ್, ಪದ್ಮನಾಭ ಕೊಟ್ಟಾರಿ, ಉಮಾನಾಥ ಕೋಟ್ಯಾನ್, ಬಿ.ದೇವದಾಸ ಶೆಟ್ಟಿ, ಪದ್ಮನಾಭ ಕೊಟ್ಟಾರಿ, ಜಿ.ಆನಂದ, ಚೆನ್ನಪ್ಪ ಕೋಟ್ಯಾನ್, ಮೋನಪ್ಪ ದೇವಸ್ಯ, ಜಿತೇಂದ್ರ ಕೊಟ್ಟಾರಿ, ಜಿ.ಪಂ.ಸದಸ್ಯರಾದ ರವೀಂದ್ರ ಕಂಬಳಿ, ಕಮಲಾಕ್ಷಿ ಪೂಜಾರಿ, ತುಂಗಪ್ಪ ಬಂಗೇರ, ಜಿ.ಆನಂದ, ಉಮಾನಾಥ ಕೋಟ್ಯಾನ್, ಬೃಜೇಶ್ ಚೌಟ, ರತ್ನಕುಮಾರ್ ಚೌಟ, ನಾಗೇಶ್, ಬಿ.ದಿನೇಶ ಭಂಡಾರಿ,ಸುಗುಣಾ ಕಿಣಿ, ತಂಗಮ್ಮ, ರಾಮದಾಸ ಬಂಟ್ವಾಳ ಮೊದಲಾದವರು ವೇದಿಕೆಯಲ್ಲಿದ್ದರು.
ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ ಸ್ವಾಗತಿಸಿದರು. ಡೊಂಬಯ್ಯ ಪೂಜಾರಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.