ರಾಷ್ಟ್ರದ ಪ್ರಗತಿಯ ಹಿಂದೆ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದುದು : ಸಚಿವ ರೈ

Update: 2018-01-15 18:28 GMT

ಬಂಟ್ವಾಳ, ಜ. 15: ದೇಶ ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಅಭಿವೃದ್ಧಿಯಾಗಬೇಕಾದರೆ ಮೊದಲು ಶೈಕ್ಷಣಿಕವಾಗಿ ಬೆಳವಣಿಗೆಯಾಗಬೇಕು. ರಾಷ್ಟ್ರದ ಪ್ರಗತಿಯ ಹಿಂದೆ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಹೇಳಿದ್ದಾರೆ.

ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮಿ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳ ಸುವರ್ಣ ಮಹೋತ್ಸವದ ಐದನೆ ದಿನವಾದ ಸೋಮವಾರ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಮೌಲ್ಯಾಧಾರಿತ ಶಿಕ್ಷಣ ಇಂದಿನ ಅಗತ್ಯವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯು ಅನೇಕ ಸಾಧಕರನ್ನು ನೀಡಿದ ಜಿಲ್ಲೆಯಾಗಿದೆ ಎಂದರು.

ಆಲ್ ಕಾರ್ಗೋ ಲ್ಯಾಜಿಸ್ಟಿಕ್ ಲಿಮಿಟೆಡ್‍ನ ಅಧ್ಯಕ್ಷ ಶಶಿಕಿರಣ್ ಶೆಟ್ಟಿ ಮಾತನಾಡಿ, ಗ್ರ್ರಾಮೀಣ ಪ್ರದೇಶದಲ್ಲಿರುವ ಈ ಕಾಲೇಜು ಹಲವಾರು ಜನರನ್ನು ವಿದ್ಯಾವಂತರನ್ನಾಗಿಸಿದೆ. ಇಲ್ಲಿನ ನಿರುದ್ಯೋಗಿಗಳಿಗೆ ಸ್ವ್ವಉದ್ಯೋಗದ  ಪ್ರೇರಣೆಯನ್ನು ನೀಡುವ ಮೂಲಕ ಆತ್ಮವಿಶ್ವಾಸ ಮೂಡಿಸಿದೆ ಎಂದು ಹೇಳಿದರು.

ಹಿರಿಯ ಸಾಹಿತಿ, ಕಲಾವಿದ ಡಾ. ಪ್ರಭಾಕರ ಜೋಷಿ ಮಾತನಾಡಿ, ವಿದ್ಯಾಮಂದಿರಗಳು ನೀಡುವ ವಿದ್ಯೆಯು ಜನರ ಬದುಕಿಗೆ ದಾರಿಯಾಗಬೇಕು. ಆಂಗ್ಲ ಶಿಕ್ಷಣದ ಒತ್ತಡದ ಸಂದರ್ಭದಲ್ಲಿ ಇಂದು ಕನ್ನಡದ ಶಿಕ್ಷಣವನ್ನು ಉಳಿಸುವ ಜವಾಬ್ದಾರಿ ನಮ್ಮದಾಗಿದೆ. ಶಿಕ್ಷಣದಲ್ಲಿ ಯಾವುದೋ ಸಂಸ್ಕೃತಿಯ ಅನುಕರಣೆ ಸಲ್ಲದು ಎಂದರು. 

ಈ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿಯಿಂದ ನಿರ್ಮಾಣವಾದ ಬಂಟ್ವಾಳ ಗೌರಿ ರಘುರಾಮ ಪ್ರಭು ಸ್ಮಾರಕ ಸಭಾಭವನವನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ವೆಂಕಟರಮಣ ಸ್ವಾಮಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೂಡಿಗೆ ರಘುನಾಥ ಶೆಣೈ ಲೋಕಾರ್ಪಣೆ ಮಾಡಿದರು. ಉಪಾಧ್ಯಕ್ಷ ಎಂ ಕಾವೇರಿ ಬಾಯಿ, ಸಂಘದ ಸದಸ್ಯರಾದ ಹೇಮಲತಾ ಶೆಣೈ, ಸಂಚಾಲಕ ಕೂಡಿಗೆ ಪ್ರಕಾಶ್ ಶೆಣೈ ಉಪಸ್ಥಿತರಿದ್ದರು. 

ಕಲಾ ಕೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಕಾಲೇಜಿನ ವಿದ್ಯಾರ್ಥಿಗಳಾದ ನವನೀತ್ ಶೆಟ್ಟಿ, ನಿತೇಶ್ ಅವರನ್ನು ಅಭಿನಂದಿಸಲಾಯಿತು.
ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್ ಪ್ರಾಸ್ತಾವಿಸಿ, ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ವಂದಿಸಿದರು. ಕಾಲೇಜಿನ ಉಪಪ್ರಾಂಶುಪಾಲ ಪ್ರೊ. ತುಕಾರಾಂ ಪೂಜಾರಿ, ಮುಖ್ಯ ಗ್ರ್ರಂಥಪಾಲಕ ಡಾ. ಎಚ್. ಆರ್. ಸುಜಾತಾ, ಉಪನ್ಯಾಸಕ ರಮಾನಂದ ಭಟ್ ಅತಿಥಿಗಳನ್ನು ಪರಿಚಯಿಸಿದರು.

ವಿದ್ಯಾರ್ಥಿನಿ ರಕ್ಷಾ ನಿರೂಪಿಸಿದರು. ಸುವರ್ಣ ಮಹೋತ್ಸವದ ಸಮಾರಂಭದ ಕೊನೆಯ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News