ಪರ್ಯಾಯ ಮಹೋತ್ಸವ : ಬಿಗಿ ಪೊಲೀಸ್ ಬಂದೋಬಸ್ತ್, ಸಂಚಾರ ಬದಲಾವಣೆ

Update: 2018-01-16 15:33 GMT

ಉಡುಪಿ, ಜ.16: ಉಡುಪಿ ಶ್ರೀಕೃಷ್ಣ ಮಠದಲ್ಲಿ ಜ.17 ಮತ್ತು 18ರಂದು ನಡೆಯಲಿರುವ ಪಲಿಮಾರು ಸ್ವಾಮೀಜಿಯ ಪರ್ಯಾಯ ಮಹೋತ್ಸವಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಹಾಗೂ ಕೇಂದ್ರ ಮಂತ್ರಿಗಳು ಆಗಮಿಸಲಿರುವು ದರಿಂದ ಮುಂಜಾಗೃತ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.

ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಒಟ್ಟು ಒಬ್ಬರು ಎಸ್ಪಿ, ಒಬ್ಬರು ಹೆಚ್ಚುವರಿ ಎಸ್ಪಿ, ಆರು ಡಿವೈಎಸ್ಪಿ, 13 ಪೊಲೀಸ್ ನಿರೀಕ್ಷಕರು, 40 ಪೊಲೀಸ್ ಉಪನಿರೀಕ್ಷಕರು ಹಾಗೂ 1000ಕ್ಕೂ ಅಧಿಕ ಸಿಬ್ಬಂದಿಗಳು ಮತ್ತು ಗೃಹರಕ್ಷಕರನ್ನು ಬಂದೊಬಸ್ತ್ ಕರ್ತವ್ಯಕ್ಕೆ ನೇಮಿಸಲಾಗಿದೆ. ಅಲ್ಲದೇ 4 ಕೆಎಸ್ ಆರ್‌ಪಿ, ಐದು ಡಿಎಆರ್, ಮೂರು ವಿದ್ವಂಸಕ ಕೃತ್ಯ ಪತ್ತೆ ತಂಡವನ್ನು ನಿಯೋಜಿಸಲಾಗಿದೆ, ಹೊರಜಿಲ್ಲೆಗಳಿಂದ ನುರಿತ ಅಪರಾಧ ಪತ್ತೆ ತಂಡಗಳನ್ನು ಕೂಡ ಕರೆಸಲಾಗಿದೆ. ಶ್ರೀಕೃಷ್ಣ ಮಠದ ಸುತ್ತಮುತ್ತ ಕಣ್ಗಾವಲಿಗೆ ಸಿಸಿ ಕ್ಯಾಮರಗಳನ್ನು ಅಳವಡಿಸಲಾಗಿದೆ.

ಸಾರ್ವಜನಿಕರ ಮಾಹಿತಿಗಾಗಿ ಕೃಷ್ಣಮಠದ ವಠಾರ ಮತ್ತು ಸರ್ವಿಸ್ ಬಸ್ ನಿಲ್ದಾಣದ ಬಳಿ ಹೊರಠಾಣೆಗಳನ್ನು ತೆರಯಲಾಗಿದೆ. ಒಟ್ಟು ನಗರದ 6 ಆಯ ಕಟ್ಟಿನ ಸ್ಥಳಗಳಾದ ಅಂಬಾಗಿಲು, ಎಂಜಿಎಂ-ಇಂದ್ರಾಳಿ, ಕುಕ್ಕಿಕಟ್ಟೆ, ಬಲಾಯಿ ಪಾದೆ, ಅಂಬಲಪಾಡಿ, ಬನ್ನಂಜೆಯಲ್ಲಿ ಚೆಕ್ ಪೋಸ್ಟ್‌ಗಳನ್ನು ತೆರೆದು ದಿನದ 24 ಗಂಟೆಯೂ ಸೂಕ್ತ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ.

ಸಂಚಾರ ಬದಲಾವಣೆ: ಪರ್ಯಾಯದ ಪ್ರಯುಕ್ತ ಜ.17ರಂದು ಬೆಳಗ್ಗೆ 9ಗಂಟೆಯಿಂದ ಜ.18ರಂದು ಬೆಳಗ್ಗೆ 9ಗಂಟೆಯವರೆಗೆ ನಗರದ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.

ಮಂಗಳೂರು, ಬಲಾಯಿಪಾದೆ, ಅಂಬಲಪಾಡಿ ಕಡೆಯಿಂದ ಉಡುಪಿ ನಗರಕ್ಕೆ ಬರುವ ಎಲ್ಲಾ ವಾಹನಗಳು ಅಂಬಲಪಾಡಿ ಮೂಲಕ ರಾ.ಹೆ.66ರಲ್ಲಿ ಕರಾವಳಿ ಜಂಕ್ಷನ್ ತಲುಪಿ ಬನ್ನಂಜೆ ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸ ಬೇಕು. ಉಡುಪಿ ನಗರದ ಸರ್ವಿಸ್ ಹಾಗೂ ಸಿಟಿ ಬಸ್ ನಿಲ್ದಾಣದಿಂದ ಹೊರ ಹೋಗುವ ಎಲ್ಲಾ ವಾಹನಗಳು ಬನ್ನಂಜೆ ಮಾರ್ಗವಾಗಿ ಕರಾವಳಿ ಜಂಕ್ಷನ್ ನಿಂದ ಮಂಗಳೂರು, ಮಲ್ಪೆಮತ್ತು ಕುಂದಾಪುರ ಕಡೆಗೆ ಹೋಗಬೇಕು.

ಕಾರ್ಕಳಕ್ಕೆ ಹೋಗಿ ಬರುವಂತಹ ಬಸ್‌ಗಳು ಮಣಿಪಾಲದಲ್ಲಿಯೇ ಪ್ರಯಾಣಿಕರನ್ನು ಹತ್ತಿಸಬೇಕು ಮತ್ತು ಇಳಿಸಬೇಕು. ಯಾವುದೇ ಕಾರಣಕ್ಕೂ ಉಡುಪಿ ನಗರದೊಳಗೆ ಪ್ರವೇಶಿಸಬಾರದು. ಮಲ್ಪೆ, ಸಂತೆಕಟ್ಟೆ, ಬ್ರಹ್ಮಾವರ ಮತ್ತು ಕುಂದಾಪುರ ಕಡೆಯಿಂದ ಉಡುಪಿ ನಗರಕ್ಕೆ ಬರುವ ಸರ್ವಿಸ್ ಹಾಗೂ ಸಿಟಿ ಬಸ್‌ಗಳು ರಾಹೆ66ರಲ್ಲಿ ಕರಾವಳಿ ಜಂಕ್ಷನ್ ತಲುಪಿ ಬನ್ನಂಜೆ ಮಾರ್ಗವಾಗಿ ಉಡುಪಿ ಸಿಟಿ ಮತ್ತು ಸರ್ವಿಸ್ ಬಸ್ ನಿಲ್ದಾಣ ಪ್ರವೇಶಿಸಬೇಕು.

ಮಂಗಳೂರಿನಿಂದ ಮುಂಬೈಗೆ ಹೋಗುವ ಎಲ್ಲಾ ಬಸ್‌ಗಳು ಕರಾವಳಿ ಜಂಕ್ಷನ್‌ನಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ನೇರವಾಗಿ ಸಂತೆಕಟ್ಟೆ ಮಾರ್ಗವಾಗಿ ಮುಂಬೈ ಕಡೆಗೆ ತೆರಳಬೇಕು.

ಪಾರ್ಕಿಂಗ್ ವ್ಯವಸ್ಥೆ: ಸರ್ವಿಸ್ ಬಸ್ ನಿಲ್ದಾಣದ ಬಳಿ(ಬೋರ್ಡ್ ಹೈಸ್ಕೂಲ್), ಎಂಜಿಎಂ ಕಾಲೇಜು ಮೈದಾನ, ಉಡುಪಿ ಪಿಪಿಸಿ ಕಾಲೇಜು ಆವರಣ, ಕ್ರಿಶ್ಚಿಯನ್ ಹೈಸ್ಕೂಲ್ ಆವರಣ, ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜು ಆವರಣದ ಎಡಭಾಗ, ಅಜ್ಜರಕಾಡು ವಿವೇಕಾನಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಜ್ಜರಕಾಡು ಸೈಂಟ್ ಸಿಸಿಲಿ ಸ್ಕೂಲ್ ಮೈದಾನ, ಯುಬಿಎಂಸಿ ಹಿರಿಯ ಪ್ರಾಥಮಿಕ ಶಾಲೆ ಆವರಣ, ಉಡುಪಿ ಜಿಟಿಎಸ್ ಶಾಲಾ ಮೈದಾನ, ಅಜ್ಜರಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆ ಮೈದಾನ (ಜಿಲ್ಲಾ ನ್ಯಾಯಾಧೀಶರ ಮನೆಯ ಮುಂಭಾಗ), ಬೀಡಿನಗುಡ್ಡೆ ಬಯಲು ರಂಗಮಂದಿರ, ಬೀಡಿನಗುಡ್ಡೆ ಮೈದಾನ, ಕಾರ್ಪೋರೇಷನ್ ಬ್ಯಾಂಕ್ ಬಳಿಯ ನಾರ್ತ್ ಸ್ಕೂಲ್ ಆವರಣ, ಆದಿಉಡುಪಿ ಶಾಲೆ, ಒಳಕಾಡು ಶಾಲೆ ಆವರಣ, ರಾಯಲ್ ಗಾರ್ಡನ್, ಅನಂತೇಶ್ವರ ಆಂಗ್ಲಮಾಧ್ಯಮ ಶಾಲೆ ಆವರಣಗಳಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಸಂಚಾರ, ಪಾರ್ಕಿಂಗ್ ನಿಷೇಧ
ನಗರದ ಕಿನ್ನಿಮೂಲ್ಕಿ, ಜೋಡುಕಟ್ಟೆ, ಲಯನ್ ಸರ್ಕಲ್, ಕೋರ್ಟ್ ರಸ್ತೆ, ಡಯನಾ ಜಂಕ್ಷನ್, ಕೆಎಂ ಮಾರ್ಗ, ಹನುಮಾನ್ ಸರ್ಕಲ್, ಸಂಸ್ಕೃತ ಕಾಲೇಜು ಜಂಕ್ಷನ್, ಕನಕದಾಸ ರಸ್ತೆ, ಬಡಗು ಪೇಟೆ ರಸ್ತೆ, ಚಿತ್ತರಂಜನ್ ಸರ್ಕಲ್, ಮಿತ್ರಾ ಆಸ್ಪತ್ರೆ ರಸ್ತೆ, ತೆಂಕುಪೇಟೆ, ಎಲ್ವಿಟಿ ತೆಂಕಪೇಟೆ ದೇವಸ್ಥಾನದ ರಸ್ತೆ, ಹರಿಶ್ಚಂದ್ರ ಮಾರ್ಗದಿಂದ ವಿದ್ಯೋದಯ ಶಾಲೆಯವರೆಗೆ, ಕಲ್ಸಂಕದಿಂದ ರಾಜಾಂಗಣ ಪಾರ್ಕಿಂಗ್ ಸ್ಥಳದವರೆಗೆ, ಕಟ್ಟೆ ಆಚಾರ್ಯ ಮಾರ್ಗ ಮತ್ತು ರಥಬೀದಿಗಳಲ್ಲಿ ಯಾವುದೇ ವಾಹನ ಪ್ರವೇಶ ಮತ್ತು ನಿಲುಗಡೆಯನ್ನು ನಿಷೇಧಿಸಲಾಗಿದೆ.
ಕಿನ್ನಿಮುಲ್ಕಿ ಸ್ವಾಗತ ಗೋಪುರ, ಅಜ್ಜರಕಾಡು ಗೋವಿಂದ ಕಲ್ಯಾಣ ಮಂಟಪ, ಜೋಡುಕಟ್ಟೆ ಲಯನ್ ಸರ್ಕಲ್, ಡಯಾನ ಸರ್ಕಲ್, ಮಿತ್ರ ಜಂಕ್ಷನ್, ಐಡಿಯಲ್ ಜಂಕ್ಷನ್, ತೆಂಕಪೇಟೆ ರಸ್ತೆಗಳಲ್ಲಿ ವಾಹನ ಸಂಚಾರ ಹಾಗೂ ವಾಹನ ನಿಲುಗಡೆ ನಿಷೇಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News