ಬೈಂದೂರು : ರಸ್ತೆ ಅಪಘಾತಕ್ಕೆ ಚರ್ಚ್‌ನ ಧರ್ಮಗುರು ಬಲಿ

Update: 2018-01-16 15:43 GMT

ಬೈಂದೂರು, ಜ.16: ಬೈಂದೂರು ಹೊಸ ಬಸ್ ನಿಲ್ದಾಣ ಬಳಿ ಜ.15ರಂದು ಮಧ್ಯರಾತ್ರಿ 12ಗಂಟೆ ಸುಮಾರಿಗೆ ಖಾಸಗಿ ಬಸ್ಸೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಧರ್ಮಗುರು ಫಾ.ಅಬ್ರಹಾಂ ಕಳಪಾಟ್(33) ಎಂಬವರು ಗಂಭೀರ ಗಾಯಗೊಂಡು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಬೈಂದೂರು ಸೈಂಟ್ ಥಾಮಸ್ ಆಂಗ್ಲ ಮಾಧ್ಯಮ ಶಾಲೆಯ ಉಪ ಪ್ರಾಂಶು ಪಾಲ ಹಾಗೂ ಹಾಸ್ಟೆಲ್‌ನ ವಾರ್ಡನ್ ಆಗಿದ್ದ ಫಾ.ಅಬ್ರಹಾಂ ಕಳಪಾಟ್ ಬೈಂದೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವ ಹಾಸ್ಟೆಲ್‌ನ ವಿದ್ಯಾರ್ಥಿ ಜಸ್ಟಿನ್ ಎಂಬವರನ್ನು ಆರೈಕೆ ಮಾಡಲು ಹಾಸ್ಟೆಲ್ ನಿಂದ ಇನ್ನೋರ್ವ ವಿದ್ಯಾರ್ಥಿ ಸಂಜೀತ(18) ಎಂಬಾತನ ಜೊತೆ ಬೈಕಿನಲ್ಲಿ ಹೊರಟಿದ್ದರು.

ಈ ವೇಳೆ ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಹೋಗುತ್ತಿದ್ದ ಬಸ್ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬೈಕಿಗೆ ಹಿಂದಿನಿಂದ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಅಬ್ರಹಾಂ ಕಳಪಾಟ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಅಪಘಾತದಲ್ಲಿ ಗಾಯಗೊಂಡಿರುವ ಸಂಜೀತ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಬ್ರಹಾಂ ಕಳಪಾಟ್ ಮುದೂರು ಚರ್ಚ್‌ನ ಪ್ರಧಾನ ಧರ್ಮಗುರು ಆಗಿಯೂ ಸೇವೆ ಸಲ್ಲಿಸುತ್ತಿದ್ದರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News