ವಿನೋದ್ ರಾಯ್ ಹೆಗಲ ಮೇಲೆ ಬಂದೂಕಿಟ್ಟು ಯುಪಿಎಯನ್ನು ಕೊಲ್ಲಲಾಯಿತು: ಎ. ರಾಜಾ ಕೃತಿಯಲ್ಲಿ ಉಲ್ಲೇಖ

Update: 2018-01-18 16:27 GMT

ಹೊಸದಿಲ್ಲಿ, ಜ.18: ಯುಪಿಎ ಸರಕಾರದ ಪತನಕ್ಕೆ ಕಾರಣವಾಗಿದ್ದ 2 ಜಿ ಹಗರಣದಲ್ಲಿ ನಿರ್ದೋಷಿ ಎಂದು ಸಾಬೀತಾದ ಬಳಿಕ ಮಾಜಿ ಟೆಲಿಕಾಂ ಸಚಿವ ಎ.ರಾಜಾ ಬರೆದಿರುವ ‘2ಜಿ ಸಾಗಾ ಅನ್‌ಫೋಲ್ಡ್ಸ್’ ಎಂಬ ಕೃತಿ ಹಲವು ಕುತೂಹಲಕಾರಿ ವಿಷಯಗಳನ್ನು ಒಳಗೊಂಡಿದೆ. ತಾನೇ ಅನುಮೋದಿಸಿದ ಟೆಲಿಕಾಂ ಕಾರ್ಯನೀತಿಯನ್ನು ಸಮರ್ಥಿಸದೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮೌನವಾಗಿದ್ದೇಕೆ, 2ಜಿ ಹಗರಣವನ್ನು ‘ಬೆಳಕಿಗೆ’ ತರುವಲ್ಲಿ ಅಂದಿನ ನಿಯಂತ್ರಕ ಮತ್ತು ಮಹಾಲೆಕ್ಕಪರಿಶೋಧಕ (ಸಿಎಜಿ) ವಿನೋದ್ ರಾಯ್‌ಗೆ ದುರುದ್ದೇಶ ಏನಾದರೂ ಇತ್ತೇ ಇತ್ಯಾದಿ ಪ್ರಶ್ನೆಗಳನ್ನು ಈ ಕೃತಿಯಲ್ಲಿ ಎತ್ತಲಾಗಿದೆ. 

 2 ಜಿ ಹಗರಣ ಎಂಬುದು ದೇಶದ ಆಡಳಿತವ್ಯವಸ್ಥೆಯ ಪಾವಿತ್ರ್ಯತೆಗೆ ಅಂಟಿಸಲಾದ ನಾಚಿಕೆಗೇಡಿನ ಕಳಂಕವಾಗಿದೆ ಎಂದು ತಿಳಿಸಿರುವ ರಾಜಾ, ಯುಪಿಎ 2 ಸರಕಾರವನ್ನು ಅಂತ್ಯಗೊಳಿಸಲು ರಾಜಕೀಯ ಪ್ರೇರಣೆಯಿತ್ತು. ಮಾಜಿ ಸಿಎಜಿ ವಿನೋದ್ ರಾಯ್ ಅವರ ಹೆಗಲನ್ನು ಬಂದೂಕವಿಡಲು ಬಳಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ತಾನು ಟೆಲಿಕಾಂ ಲಾಬಿಗಳ ವಿರುದ್ಧ ಹೋರಾಡಿ, ನ್ಯಾಯಸಮ್ಮತ ತರಂಗಗುಚ್ಛ ಹರಾಜು ಕಾರ್ಯನೀತಿಯನ್ನು ರೂಪಿಸಿದ್ದೆ ಎಂದಿದ್ದಾರೆ. ಟೆಲಿಕಾಂ ಲಾಬಿಗಳು ಪ್ರಧಾನಮಂತ್ರಿ ಕಾರ್ಯಾಲಯ (ಪಿಎಂಒ)ಕೈಗೊಳ್ಳುವ ನಿರ್ಧಾರದ ಮೇಲೆ ಪ್ರಭಾವ ಬೀರಲು ಶಕ್ತವಾಗಿದ್ದವು ಎಂಬ ಅಪಪ್ರಚಾರ ನಡೆದಿತ್ತು. ಸಾಕಷ್ಟು ತರಂಗಗುಚ್ಛ ಲಭ್ಯವಿರುವ ಕಾರಣ ಹೊಸ ಸಂಸ್ಥೆಗಳಿಗೆ 2 ಜಿ ತರಂಗಗುಚ್ಛ ಹಂಚಿಕೆ ಮಾಡುವ ತನ್ನ ಪ್ರಸ್ತಾವಕ್ಕೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಸಮ್ಮತಿಸಿದ್ದರು. ಆದರೆ ಬಳಿಕ ನನ್ನ ನ್ಯಾಯಸಮ್ಮತ ನಡೆಯ ಕುರಿತು ಯುಪಿಎ ಸರಕಾರ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಯಾವುದೇ ಸಮರ್ಥನೆ ನೀಡದೆ ಸುಮ್ಮನಿದ್ದುದು ರಾಷ್ಟ್ರದ ಸಂಘಟಿತ ಮನಸಾಕ್ಷಿಯ ಧ್ವನಿಯಡಗಿಸಿದ ಕ್ರಮವಾಗಿದೆ ಎಂದು ಕೃತಿಯಲ್ಲಿ ತಿಳಿಸಲಾಗಿದೆ.

ಅಲ್ಲದೆ ತರಂಗಗುಚ್ಛ ಹಂಚಿಕೆಯ ವಿಷಯದಲ್ಲಿ ನಡೆದ ಸಿಬಿಐ ದಾಳಿಯ ಕುರಿತು ಪ್ರಧಾನಿಗೆ ಯಾವುದೇ ಸೂಚನೆ ಇರಲಿಲ್ಲ. ಟೆಲಿಕಾಂ ಸಚಿವಾಲಯ ಹಾಗೂ ಕೆಲವು ಟೆಲಿಕಾಂ ಸಂಸ್ಥೆಗಳ ಮೇಲೆ ಸಿಬಿಐ ದಾಳಿ ನಡೆದ ಬಳಿಕ , 2009ರ ಅಕ್ಟೋಬರ್ 22ರಂದು ಪ್ರಧಾನಿಯವರನ್ನು ಸೌತ್‌ಬ್ಲಾಕ್‌ನಲ್ಲಿರುವ ಕಚೇರಿಯಲ್ಲಿ ಭೇಟಿಯಾಗಿದ್ದೆ. ಪಿಎಂಒ ಕಚೇರಿಯ ಅಂದಿನ ಪ್ರಧಾನ ಕಾರ್ಯದರ್ಶಿ ಟಿ.ಕೆ.ಎ.ನಾಯರ್ ಕೂಡಾ ಅಲ್ಲಿದ್ದರು. ನಾನು ಸಿಬಿಐ ದಾಳಿ ನಡೆದಿರುವ ವಿಷಯ ತಿಳಿಸಿದಾಗ ಪ್ರಧಾನಿಯವರು ಆಶ್ಚರ್ಯಚಕಿತರಾದರು ಎಂದು ರಾಜಾ ತಿಳಿಸಿದ್ದಾರೆ. ಟೆಲಿಕಾಂ ಲಾಬಿ ಹೊಸ ಸಂಸ್ಥೆಗಳಿಗೆ ಲೈಸೆನ್ಸ್ ನೀಡುವ ನಿರ್ಧಾರದ ವಿರುದ್ಧ ನಿಂತಿದ್ದವು. ತಾನು ರೂಪಿಸಿದ ಕಾರ್ಯನೀತಿ ಅಂತಿಮ ಹಂತದಲ್ಲಿದ್ದಾಗ ಪ್ರಧಾನಿ ಸಚಿವಾಲಯದಿಂದ  ಪತ್ರವೊಂದು ಬಂದಿತು. ಈ ರೀತಿಯ ಪತ್ರ ಬರೆಯಲು ಪ್ರಧಾನಿಯವರನ್ನು ಪ್ರೇರೇಪಿಸಿದ್ದು ಯಾರಾಗಿರಬಹುದು ಎಂಬುದು ಈಗಲೂ ತನಗೆ ಒಗಟಾಗಿಯೇ ಇದೆ.

ತನ್ನ ಪ್ರಕಾರ ಪ್ರಧಾನಿ ಸಹಿ ಹಾಕಿರುವ ಈ ಪತ್ರ ಖಂಡಿತಾ ಪ್ರಧಾನಿ ಕಳಿಸಿದ್ದಲ್ಲ. ಸಚಿವಾಲಯದ ಕಾರ್ಯದಲ್ಲಿ ಪ್ರಧಾನಿ ಹಸ್ತಕ್ಷೇಪ ಮಾಡುತ್ತಾರೆ ಎಂಬುದನ್ನು ನಂಬಲು ತಾನು ತಯಾರಿರಲಿಲ್ಲ. ಟೆಲಿಕಾಂ ಸಚಿವಾಲಯದಲ್ಲಿ ಭಾರೀ ಅಕ್ರಮ ನಡೆಯುತ್ತಿದೆ ಎಂದು ಯಾರೋ ಪ್ರಧಾನಿಯವರನ್ನು ನಂಬಿಸಿದ್ದರು ಎಂದು ರಾಜಾ ತಮ್ಮ ಕೃತಿಯಲ್ಲಿ ಬರೆದಿದ್ದಾರೆ.

ತನ್ನ ವಿರುದ್ಧ ಸಲ್ಲಿಸಲಾಗಿರುವ ಕ್ರಿಮಿನಲ್ ದಾವೆಯಲ್ಲಿ ರಾಯ್‌ರನ್ನು ಸಾಕ್ಷಿದಾರನಾಗಿ ಕರೆಸಿಕೊಂಡು ಪಾಟೀಸವಾಲಿಗೆ ಗುರಿಪಡಿಸಬೇಕು . ‘ಟ್ರಾಯ್’ , ಕೇಂದ್ರ ಸಚಿವ ಸಂಪುಟ, ಟೆಲಿಕಾಂ ಆಯೋಗದ ಶಿಫಾರಸುಗಳನ್ನು ಒಟ್ಟಾರೆಯಾಗಿ ಕಡೆಗಣಿಸುವಲ್ಲಿ ರಾಯ್‌ಗೆ ಯಾವ ಪ್ರೇರಣೆ ಸ್ಫೂರ್ತಿ ನೀಡಿದೆ ಎಂಬುದನ್ನು ವಿಚಾರಣೆ ನಡೆಸುವುದು ಸಾರ್ವಜನಿಕ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಅತ್ಯವಶ್ಯಕವಾಗಿದೆ ಎಂದು ರಾಜಾ ಅಭಿಪ್ರಾಯಪಟ್ಟಿದ್ದಾರೆ.

ಬೆಕ್ಕು ತನ್ನ ಕಣ್ಣನ್ನು ಮುಚ್ಚಿಕೊಂಡು ಬಳಿಕ ಇಡೀ ವಿಶ್ವವೇ ಕಗ್ಗತ್ತಲಿನಲ್ಲಿ ಮುಳುಗಿದೆ ಎಂಬಂತೆ ಮಾಜಿ ಸಿಎಜಿ ವರ್ತಿಸಿದ್ದಾರೆ. ತನ್ನ ಪ್ರಭಾವವನ್ನು ಬಳಸಿಕೊಂಡು ಅವರು, ಮಾಹಿತಿಯನ್ನು ಉತ್ಪ್ರೇಕ್ಷೆಗೊಳಿಸಿ ತರಂಗಗುಚ್ಛ ಹಂಚಿಕೆಯಲ್ಲಿ ಹಣ ದುರುಪಯೋಗವಾಗಿದೆ ಹಾಗೂ ಕಾನೂನನ್ನು ಉಲ್ಲಂಘಿಸಲಾಗಿದೆ ಎಂಬ ರೀತಿಯಲ್ಲಿ ಬಿಂಬಿಸಲು ಶಕ್ತರಾಗಿದ್ದಾರೆ. 1.76 ಲಕ್ಷ ಕೋಟಿ ರೂ. ನಷ್ಟವಾಗಿದೆ ಎಂಬ ಅವರ ಊಹೆ ಬಳಿಕ ಸುಳ್ಳೆಂದು ಸಾಬೀತಾಗಿದೆ. ಆದರೆ ಇದು ಜನತೆಯ ಮನಸ್ಸಿನಲ್ಲಿ ಅಚ್ಚೊತ್ತಿದ್ದು ತನಗೆ ಕಷ್ಟಗಳ ಪರಂಪರೆ ಎದುರಾಗಲು ಕಾರಣವಾಯಿತು ಎಂದು ರಾಜಾ ತಿಳಿಸಿದ್ದಾರೆ.

 ವಿನೋದ್ ರಾಯ್ ತನ್ನ ಕೃತಿ ‘ನಾಟ್ ಜಸ್ಟ್ ಆ್ಯನ್ ಅಕೌಂಟೆಂಟ್’ ಎಂಬ ಕೃತಿಯಲ್ಲಿ ತಾನು ದೇಶದ ಆತ್ಮಸಾಕ್ಷಿಯ ಕಾವಲುಗಾರ ಎಂಬಂತೆ ತನ್ನನ್ನು ತಾನೇ ಬಿಂಬಿಸಿಕೊಂಡಿದ್ದಾರೆ ಎಂದು ರಾಜಾ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News