ವಜ್ರದೇಹಿ ಸ್ವಾಮೀಜಿಗೆ ಸಮನ್ಸ್
Update: 2018-01-18 16:53 GMT
ಮಂಗಳೂರು, ಜ. 18: ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ಉಳಾಯಿಬೆಟ್ಟು ಗಲಭೆಗೆ ಸಂಬಂಧಿಸಿ ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಗೆ ಮಂಗಳೂರಿನ ಜೆಎಂಎಫ್ಸಿ ನ್ಯಾಯಾಲಯದಿಂದ ಸಮನ್ಸ್ ಜಾರಿಯಾಗಿದೆ.
2014ರ ಡಿ. 5ರಂದು ರಾತ್ರಿ ಪೆರ್ಮಂಕಿಯ ಶಿವರಾತ್ರಿಬೆಟ್ಟು ಎಂಬಲ್ಲಿ ದತ್ತಮಾಲಾಧಾರಿಗಳ ಮೇಲೆ ಹಲ್ಲೆ ನಡೆದಿತ್ತು ಎಂದು ಆರೋಪಿಸಲಾಗಿತ್ತು.
ಘಟನೆಯನ್ನು ಖಂಡಿಸಿ ಡಿ.8ರಂದು ವಜ್ರದೇಹಿ ಸ್ವಾಮೀಜಿಗಳ ನೇತೃತ್ವದಲ್ಲಿ ಉಳಾಯಿಬೆಟ್ಟು ಸಮೀಪ ಪ್ರತಿಭಟನೆ ನಡೆದಿತ್ತು. ಈ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಅಂದು ನಡೆದಿದ್ದ ಗಲಭೆಗೆ ಸಂಬಂಧಿಸಿ ನ್ಯಾಯಾಲಯವು ಈ ಸಮನ್ಸ್ ಜಾರಿಗೊಳಿಸಿದೆ.