ಬಂಟ್ವಾಳ: ಬಿಜೆಪಿಯ ಶವ ರಾಜಕೀಯ ಆರೋಪ; ಪಿಎಫ್ಐ ಪ್ರತಿಭಟನೆ
ಬಂಟ್ವಾಳ, ಜ. 19: ಕರ್ನಾಟಕದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಅಧಿಕಾರ ವಂಚಿತರಾದ ಬಿಜೆಪಿಯು ಅಧಿಕಾರ ಮರಳಿ ಪಡೆಯುವ ಯೋಜನೆಯ ಭಾಗವಾಗಿ ಹಿಂದೂ- ಮುಸ್ಲಿಮರ ನಡುವೆ ಕೋಮು ವೈಷಮ್ಯವನ್ನು ಬಿತ್ತಿ ಅಮಾಯಕರ ಹೆಣಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ ಎಂದು ಪಿಎಫ್ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಸಿರ್ ಹಸನ್ ಆರೋಪಿಸಿದ್ದಾರೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ಘಟಕದ ವತಿಯಿಂದ 'ಬಿಜೆಪಿ ಅಧಿಕಾರ ದಾಹಕ್ಕೆ ಇನ್ನೆಷ್ಟು ಬಲಿ?' ಎಂಬ ಘೋಷಣೆಯೊಂದಿಗೆ ಬಿಜೆಪಿಯ ಶವ ರಾಜಕೀಯದ ವಿರುದ್ಧ ಕೈಕಂಬದ ಜಂಕ್ಷನ್ ನಲ್ಲಿ ಶುಕ್ರವಾರ ಸಂಜೆ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದ ಯಾವುದೇ ಭಾಗದಲ್ಲಿ ಬೇರೆ ಬೇರೆ ಕಾರಣಗಳಿಂದ ಕೊಲೆಯಾದವರನ್ನು, ಅಪಘಾತದಲ್ಲಿ ಮರಣ ಹೊಂದಿದವರನ್ನು ಸೇರಿಸಿ, ಈ ಕೊಲೆಯನ್ನು ಮುಸ್ಲಿಮರು ಮಾಡಿದ್ದಾರೆ ಎಂದು ಸುಳ್ಳು ಪ್ರಚಾರ ಮಾಡಿ ಹಿಂದೂ ಮತಗಳನ್ನು ಧ್ರುವೀಕರಣ ಮಾಡಲು ಪ್ರಯತ್ನಿಸುತ್ತಿದೆ. ರಾಜ್ಯದಲ್ಲಿ 23 ಹಿಂದೂಗಳ ಹತ್ಯೆಯನ್ನು ಮುಸ್ಲಿಮರು ಮಾಡಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಸಚಿವರಿಗೆ ಸುಳ್ಳು ವರದಿ ನೀಡಿರುವುದು ಬಿಜೆಪಿಯ ದಿವಾಳಿತನದ ಸೂಚನೆಯಾಗಿದೆ. ಸಂಘ ಪರಿವಾರದ ಕಾರ್ಯಕರ್ತರಿಂದಲೇ ಕರಾವಳಿ ಭಾಗದಲ್ಲಿ ಸುಮಾರು 13 ಹಿಂದೂಗಳ ಹತ್ಯೆ ನಡೆದಿದ್ದರೂ ಅದನ್ನು ಪಟ್ಟಿಯಲ್ಲಿ ಸೇರಿಸದೇ ನಕಲಿ ಧರ್ಮ ಪ್ರೇಮವನ್ನು ಸಾಬೀತು ಪಡಿಸಿದೆ ಎಂದು ಆರೋಪಿಸಿದರು.
ದೀಪಕ್ ರಾವ್ ಕೊಲೆಯಲ್ಲಿ ಮುಸ್ಲಿಂ ಸಂಘಟನೆಗಳ ಮೇಲೆ ನೇರ ಆರೋಪ ಮಾಡುವ ಮೂಲಕ ಬಿಜೆಪಿಯು ಹತ್ಯಾ ರಾಜಕೀಯವನ್ನು ಮಾಡುತ್ತಿದೆ. ಅಮಾಯಕರ ಜೀವಗಳನ್ನು ಬಲಿಕೊಟ್ಟು ರಾಜಕೀಯ ಮಾಡುತ್ತಿರುವ ಬಿಜೆಪಿ ನೈಜ ಮುಖವನ್ನು ಬಯಲಿಗೆಳೆಯಲು ಪಿಎಫ್ಐ ವತಿಯಿಂದ "ಬಿಜೆಪಿ ಅಧಿಕಾರ ದಾಹಕ್ಕೆ ಇನ್ನೆಷ್ಟು ಬಲಿ?" ಎಂಬ ಘೋಷಣೆಯೊಂದಿಗೆ ಪ್ರತಿಭಟನಾ ಸಭೆ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿದೆ ಎಂದರು.
ದಲಿತ ಸಂಘರ್ಷ ಸಮಿತಿಯ ಮುಖಂಡ ಬಾನುಚಂದ್ರ ಕೃಷ್ಣಾಪುರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಬಿಜೆಪಿಯ ಹತ್ಯಾ ರಾಜಕೀಯವನ್ನು ಖಂಡಿಸಿದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ಘಟಕ ಅಧ್ಯಕ್ಷ ಇಜಾಝ್ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು.
ಎಸ್ಡಿಟಿಯು ಜಿಲ್ಲಾ ಸಹ ಸಂಚಾಲಕ ಯೂಸುಫ್ ಆಲಡ್ಕ, ಎಸ್ಡಿಪಿಐ ಬಂಟ್ವಾಳ ವಿಧಾನ ಸಭಾ ಕ್ಷೇತ್ರಾಧ್ಯಕ್ಷ ಶಾಹುಲ್ ಎಸ್.ಎಚ್ ಮತ್ತಿತರರು ಉಪಸ್ಥಿತರಿದ್ದರು. ಪಿಎಫ್ಐ ಬಂಟ್ವಾಳ ಘಟಕದ ಪ್ರಧಾನ ಕಾರ್ಯದರ್ಶಿ ಸಲೀಮ್ ಕೆ. ಸ್ವಾಗತಿಸಿದರು. ಸದಸ್ಯ ಶರೀಫ್ ನಿರೂಪಿಸಿದರು.