ರೈಲಿನಲ್ಲಿ ಮರೆತ ಬ್ಯಾಗ್: ವಾರಸುದಾರರಿಗೆ ಒಪ್ಪಿಸಿದ ಅಧಿಕಾರಿಗಳು
ಉಡುಪಿ, ಜ.20: ಮುಂಬೈ-ಮಂಗಳೂರು ರೈಲಿನಲ್ಲಿ ಪ್ರಯಾಣಿಕರೊಬ್ಬರು ಮರೆತು ಹೋಗಿದ್ದ ಬ್ಯಾಗ್ನ್ನು ಉಡುಪಿ ರೈಲ್ವೆ ಅಧಿಕಾರಿಗಳು ಸುರಕ್ಷಿತವಾಗಿ ಮರಳಿಸಿದ ಘಟನೆ ಇಂದು ನಡೆದಿದೆ.
ಮುಂಬೈಯಿಂದ ಉಡುಪಿಗೆ ಮುಂಬೈ-ಮಂಗಳೂರು ರೈಲಿನಲ್ಲಿ ಹೊರಟಿದ್ದ ಕಾರ್ಕಳದ ಸುಧಾಕರ್ ಪೂಜಾರಿ, ತಾನು ತಂದಿದ್ದ ಬ್ಯಾಗ್ನ್ನು ರೈಲಿ ನಲ್ಲಿಯೇ ಮರೆತು ಇಂದು ಬೆಳಗ್ಗೆ ಉಡುಪಿ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಇಳಿದು ಮನೆಗೆ ತೆರಳಿದ್ದರು. ಆ ಬ್ಯಾಗ್ನಲ್ಲಿ 50,000ರೂ. ನಗದು ಮತ್ತು 10ಸಾವಿರ ಮೌಲ್ಯದ ಮೊಬೈಲ್ ಮತ್ತು ಬೆಳ್ಳಿ ಹಾರ, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ಗಳಿದ್ದವು.
ರೈಲು ಹೊರಟ ಬಳಿಕ ತಾನು ಬ್ಯಾಗ್ನ್ನು ರೈಲಿನಲ್ಲಿಯೇ ಮರೆತು ಬಿಟ್ಟಿ ರುವುದಾಗಿ ತಿಳಿದ ಸುಧಾಕರ ಪೂಜಾರಿ ಕೂಡಲೇ ಉಡುಪಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ದೂರು ನೀಡಿದರು. ಆ ವೇಳೆ ರೈಲ್ವೆ ಅಧಿಕಾರಿಗಳು ಸುಧಾಕರ ಪೂಜಾರಿ ಬಂದ ರೈಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಉಡುಪಿಯ ರೈಲ್ವೆ ಟಿಟಿ ಹರೀಶ್ ಪೂಜಾರಿಗೆ ಮಾಹಿತಿ ನೀಡಿದರು.
ಕೂಡಲೇ ಅಲರ್ಟ್ ಆದ ಹರೀಶ್ ಪೂಜಾರಿ ರೈಲಿನಲ್ಲಿ ಹುಡುಕಾಡಿ ಸುಧಾಕರ ಪೂಜಾರಿಯ ಬ್ಯಾಗ್ನ್ನು ಪತ್ತೆ ಹಚ್ಚಿದರು. ನಂತರ ಬ್ಯಾಗ್ನ್ನು ಉಡುಪಿ ರೈಲ್ವೆ ನಿಲ್ದಾಣಕ್ಕೆ ತಂದು ವಾರಸುದಾರರಿಗೆ ಹಸ್ತಾಂತರಿಸಿದರು. ಈ ಸಂದರ್ಭ ದಲ್ಲಿ ರೈಲ್ವೆ ಪೊಲೀಸರು ಹಾಗೂ ಅಧಿಕಾರಿಗಳು ಹಾಜರಿದ್ದರು.