ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನ: ಭಟ್ಕಳ ಪತ್ರಕರ್ತ ರಾಧಾಕೃಷ್ಣ ಭಟ್ಟರಿಗೆ ಸನ್ಮಾನ
ಭಟ್ಕಳ, ಜ. 21: ಶ್ರವಣಬೆಳಗೊಳದಲ್ಲಿ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 33ನೇ ರಾಜ್ಯ ಸಮ್ಮೇಳನದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಹಾಗೂ ಭಟ್ಕಳ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಅವರನ್ನು ಕ್ರೀಯಾಶೀಲ ಕಾರ್ಯಗಳಿಗಾಗಿ ಸನ್ಮಾನಿಸಲಾಯಿತು.
ಕಳೆದ 1989ರಿಂದ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು 1993ರಿಂದ ನಿರಂತರವಾಗಿ ರಾಜ್ಯ, ಜಿಲ್ಲಾ ಹಾಗೂ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿ ರಾಷ್ಟ್ರೀಯ ಮಂಡಳಿ, ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ, ಜಿಲ್ಲಾ ಸಂಘದ ಕಾರ್ಯಕಾರಿಣಿ ಸದಸ್ಯರಾಗಿ, ಉಪಾಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಲ್ಲದೇ ಜಿಲ್ಲಾ ಮತ್ತು ರಾಜ್ಯ ಸಂಘದ ಕ್ರೀಯಾಶೀಲ ಸದಸ್ಯರಾಗಿ ಸಭೆ, ಸಮಾರಂಭ ಹಾಗೂ ಹೋರಾಟಗಳಿಗೂ ಸಾಕ್ಷಿಯಾಗಿದ್ದಾರೆ.
ಪ್ರಸ್ತುತ ಭಟ್ಕಳ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿಹಬ್ಬದ ವರ್ಷದಲ್ಲಿ ಅಧ್ಯಕ್ಷರಾಗಿ ಸಂಘದ ಬೆಳ್ಳಿಹಬ್ಬವನ್ನು ಇಡೀ ವರ್ಷಕಾಲ ಆಚರಿಸಿದ್ದು, ಸಂಘದ ಇತರ ಎಲ್ಲಾ ಸದಸ್ಯರನ್ನೊಳಗೊಂಡಂತೆ ನಡೆಸಿದ ಕ್ರೀಯಾಶೀಲ ಚಟುವಟಿಕೆ ಕೂಡಾ ಪ್ರಶಸ್ತಿಯನ್ನು ಪಡೆಯಲು ಸಹಕಾರಿಯಾಗಿದೆ.
ಕ್ರೀಯಾಶೀಲ ಚಟುವಟಿಕೆಯಿಂದ ರಾಜ್ಯ ಪ್ರಶಸ್ತಿಗೆ ಭಾಜನರಾದ ರಾಧಾಕೃಷ್ಣ ಭಟ್ಟ ಅವರನ್ನು ಜಿಲ್ಲಾ ಸಂಘದ ಅಧ್ಯಕ್ಷ ಸುಬ್ರಾಯ ಭಟ್ಟ ಬಕ್ಕಳ, ತಾಲೂಕಾ ಸಂಘದ ಸದಸ್ಯರು ಅಭಿನಂದಿಸಿದ್ದಾರೆ.