ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನ

Update: 2018-01-21 16:57 GMT

ಮಂಗಳೂರು, ಜ. 21: ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ 12ನೆ ವಾರದ ಸ್ವಚ್ಛತಾ ಕಾರ್ಯಕ್ರಮವನ್ನು ರವಿವಾರ ನಗರದ ಪಾಂಡೇಶ್ವರದ ನೆಹರೂ ವೃತ್ತದ ಸುತ್ತಮುತ್ತ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ಬೆಂಗಳೂರು ರಾಮಕೃಷ್ಣ ಮಠದ ಸ್ವಾಮಿ ರಘುರಾಮಾನಂದಜಿ ಹಾಗೂ ಕಾರ್ಪೊರೇಶನ್ ಬ್ಯಾಂಕ್ ಎಂ.ಡಿ ಜಯಕುಮಾರ್ ಗರ್ಗ್ ಅವರು ಐಜಿಪಿ ಕಚೇರಿ ಎದುರಿಗೆ ಜಂಟಿಯಾಗಿ ಸ್ವಚ್ಛತಾಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಸ್ವಾಮಿ ಧರ್ಮವ್ರತಾನಂದಜಿ, ಕಾರ್ಪೋರೇಶನ್ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲ್ ಮುರಳಿ ಭಗತ್ ಹಾಗೂ ಸ್ವದೇಶಿ ಸೇವಾ ತಂಡದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶ್ರಮದಾನ: ಸ್ವಚ್ಛ ಮಂಗಳೂರು ಸ್ವಯಂ ಸೇವಕರು ಹಾಗೂ ಕಾರ್ಪೊರೇಶನ್ ಬ್ಯಾಂಕ್ ಮುಖ್ಯ ಕಚೇರಿಯ ಸುಮಾರು 300 ಸದಸ್ಯರು 10 ತಂಡಗಳನ್ನಾಗಿ ವಿಂಗಡಿಸಿ ಶ್ರಮದಾನ ಮಾಡಿದರು. ಕಾರ್ಪೊರೇಶನ್ ಬ್ಯಾಂಕಿನ ಮಹಾಪ್ರಬಂಧಕ ಗುರು ಹರಿನಾಥ್ ರಾವ್, ಎಸ್.ಕುಮಾರ್ ಹಾಗೂ ಎಂ.ಎನ್.ಕೆ.ವಿಶ್ವನಾಥ್ ನೇತೃತ್ವದಲ್ಲಿ ರೋಸಾರಿಯೋ ರಸ್ತೆ, ಪ್ರಧಾನ ಅಂಚೆ ಕಚೇರಿಯತ್ತ ಸಾಗುವ ಮಾರ್ಗ, ಎ.ಬಿ.ಶೆಟ್ಟಿ ವೃತ್ತ, ಪಾಂಡೇಶ್ವರ ಕಟ್ಟೆ ಕಡೆ ಸಾಗುವ ದಾರಿ ಹೀಗೆ ತಲಾ ಎರಡೆರಡು ಬದಿಗಳಲ್ಲಿ ಒಂದೊಂದು ತಂಡ ತೆರಳಿ ಸ್ವಚ್ಛತೆಯ ಕಾರ್ಯ ಕೈಗೊಂಡರು.

ಹಲವರು ತೋಡುಗಳಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯವನ್ನು ಹೊರ ತೆಗೆದು ಒಂದಿಷ್ಟು ಜನ ಕಾರ್ಯಕರ್ತರು ಮಾರ್ಗಭಾಜಕಗಳನ್ನು ಸ್ವಚ್ಛ ಗೊಳಿಸಿದರು.

ವಿಶೇಷ ಕಾರ್ಯ: ಫಿಝಾ ಮಾಲ್ ಎದುರಿನ ರಸ್ತೆಯಲ್ಲಿ ಹಲವು ವರ್ಷಗಳಿಂದ ಬೃಹತ್ ಮರದ ದಿಮ್ಮಿಯೊಂದು ಮಾರ್ಗದಲ್ಲಿ ಬಿದ್ದುಕೊಂಡು ರಸ್ತೆಯ ಉಪಯುಕ್ತ ಜಾಗವನ್ನು ಆವರಿಸಿಕೊಂಡಿತ್ತು. ಇಂದು ಸ್ವಚ್ಛ ಮಂಗಳೂರಿನ ಕಾರ್ಯಕರ್ತರಾದ ಮೆಹಬೂಬ್, ದಿನೇಶ್ ಕರ್ಕೇರಾ ಮತ್ತಿತರರು ಸೇರಿ ಜೆಸಿಬಿ ಸಹಾಯದಿಂದ ಅದನ್ನು ಎತ್ತಿ ಟಿಪ್ಪರ್‌ಗೆ ಹಾಕಿ, ಸಾಗಿಸಿದರು. ತದನಂತರ ಆ ಜಾಗವನ್ನು ಶುಭ್ರಗೊಳಿಸಿದರು.

ಮತ್ತೊಂಡೆಡೆ ಸೌರಜ್ ಮಂಗಳೂರು, ಕಾವ್ಯಾ ಕೋಡಿಕಲ್ ಹಾಗೂ ಹಿಂದೂ ವಾರಿಯರ್ಸ್ ಸದಸ್ಯರು ಸರ್ವೀಸ್ ಬಸ್ ನಿಲ್ದಾಣದ ಬಳಿಯ ಆವರಣ ಗೋಡೆಗೆ ಅಂಟಿಸಿದ್ದ ಪೋಸ್ಟರ್ ಕಿತ್ತು ಹಾಕಿದರು. ನಂತರ ನೀರಿನ ಟ್ಯಾಂಕರ್ ತರಿಸಿಕೊಂಡು ದುರ್ವಾಸನೆಯಿಂದ ಕೂಡಿದ ಅಲ್ಲಿನ ಸ್ಥಳವನ್ನು ನೀರಿನಿಂದ ತೊಳೆದು, ಬಸ್ ಚಾಲಕ ನಿರ್ವಾಹಕರಿಗೆ ಸ್ವಚ್ಛತೆಯ ಕುರಿತು ತಿಳಿಹೇಳಿ ಶೌಚಾಲಯವನ್ನೇ ಬಳಸುವಂತೆ ಮನವಿ ಮಾಡಿದರು.

ಕರಪತ್ರ ವಿತರಣೆ: ಶ್ರಮದಾನದ ಜೊತೆಗೆ ಇಂದು ಪಾಂಡೇಶ್ವರ ಹಾಗೂ ಓಲ್ಡ್ ಕೆಂಟ್ ರಸ್ತೆಯ ನೂರಾರು ಮನೆಗಳಿಗೆ ತೆರಳಿ ಕರಪತ್ರ ಹಂಚಿ, ಪರಿಸರದ ಸ್ವಚ್ಛತೆಯನ್ನು ಕಾಪಾಡುವಂತೆ ಮನವಿ ಮಾಡಲಾಯಿತು. ಸತ್ಯನಾರಾಯಣ ಕೆ., ಕಾರ್ಪೊರೇಶನ್ ಬ್ಯಾಂಕಿನ ಸಿಬ್ಬಂದಿ ಹಾಗೂ ಎಂ.ಎಸ್. ಕುಶೆ ಶಾಲಾ ವಿದ್ಯಾರ್ಥಿಗಳು ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಈ ಹಿಂದೆ ಸ್ವಚ್ಛತೆ ಕೈಗೊಂಡು ಶುಚಿಗೊಳಿಸಲಾಗಿದ್ದ ತಾಲೂಕು ಪಂಚಾಯತ್ ಮುಂಭಾಗದ ಆವರಣ ಗೋಡೆಗೆ ಸುಣ್ಣ ಬಣ್ಣಗಳನ್ನು ಹಚ್ಚಿ ಅಂದಗೊಳಿಸ ಲಾಯಿತು. 

ಸ್ವಚ್ಛ ಗ್ರಾಮ: ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ಸ್ವಚ್ಛ ಗ್ರಾಮ ಅಭಿಯಾನ ಇಂದು ಸುಮಾರು 30 ಗ್ರಾಮಗಳಲ್ಲಿ ಜರಗಿದವು. ಇಲ್ಲಿಯ ತನಕ ಬಂಟ್ವಾಳ ಹಾಗೂ ಮಂಗಳೂರು ತಾಲೂಕಿನಲ್ಲಿ 170 ಕಾರ್ಯಕ್ರಮಗಳು ನಡೆದಿವೆ. ದ.ಕ. ಜಿಲ್ಲಾ ಪಂಚಾಯತ್ ಸಹಯೋಗ ದಲ್ಲಿ ಈ ಸಚ್ಛತಾ ಕಾರ್ಯ ನಡೆಯುತ್ತಿದೆ. ಕಾರ್ಪೊರೇಶನ್ ಬ್ಯಾಂಕಿನ್ ಡಿಜಿಎಂ ಎಸ್ .ಸಾತು, ಎಜಿಎಂ ಎ.ಎನ್. ರವಿಶಂಕರ್ ಅಭಿಯಾನವನ್ನು ಸಂಯೋಜನೆ ಮಾಡಿದರು.

ಡಾ. ಸತೀಶ್ ರಾವ್, ಡಾ. ಶಶಿಕಿರಣ, ಬಾಲಕೃಷ್ಣ ಭಟ್ ಸೇರಿದಂತೆ ಹಲವು ಜಪಾನಿ ನಾಗರಿಕರು ಅಭಿಯಾನದಲ್ಲಿ ಭಾಗವಹಿಸಿ ಗಮನ ಸೆಳೆದರು. ಕಾರ್ಪೊರೇಶನ್ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಶ್ರಮದಾನದ ಬಳಿಕ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಈ ಅಭಿಯಾನಗಳಿಗೆ ಎಂಆರ್‌ಪಿಎಲ್ ಪ್ರಾಯೋಜಕತ್ವ ನೀಡುತ್ತಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News