ಮಂಗಳೂರು: ಅಗಲಿದ ಕಮ್ಯೂನಿಸ್ಟ್ ಚೇತನಗಳಿಗೆ ಸಾರ್ವಜನಿಕ ನುಡಿ-ನಮನ

Update: 2018-01-21 17:00 GMT

ಮಂಗಳೂರು, ಜ.21: ಕಮ್ಯೂನಿಸ್ಟ್ ಪಕ್ಷದ ರಿಯ ಚೇತನಗಳಾದ ಕಾಮ್ರೇಡ್ ಬಿ.ವಿಶ್ವನಾಥ ನಾಯಕ್ ಮತ್ತು ಕಾಮ್ರೇಡ್ ಪಿ.ಸಂಜೀವ ಅವರುಗಳ ಅಕಾಲಿಕ ನಿಧನದ ಬಗ್ಗೆ ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ)ದ.ಕ. ಮತ್ತು ಉಡುಪಿ ಜಿಲ್ಲಾ ಸಮಿತಿ ಹಾಗೂ ಸಾರ್ವಜನಿಕರ ಪರವಾಗಿ ಶ್ರದ್ಧಾಂಜಲಿ ಸಭೆಯು ರವಿವಾರ ಬೆಳಗ್ಗೆ ಬಿ.ಸಿ.ರೋಡು ಹೊಟೇಲ್‌ವೊಂದರ ಶುಭಾಂಗಣದಲ್ಲಿ ಜರಗಿತು.

ಸಭೆಯಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಮುಖಂಡರೂ, ಎಐಟಿಯುಸಿ ರಾಜ್ಯಾಾಧ್ಯಕ್ಷರೂ ಆದ ಎಚ್. ಅನಂತ ಸುಬ್ಬರಾವ್ ಮಾತನಾಡಿ, ದ.ಕ. ಜಿಲ್ಲೆಯ ರೈತ ಕಾರ್ಮಿಕ ಚಳುವಳಿಗಳ ರೂವಾರಿಗಳಾದ ಇವರಿಬ್ಬರೂ ತನ್ನ ವೈಯಕ್ತಿಕ ಬದುಕಿಗಿಂತ ಸಾರ್ವಜನಿಕರ ಬದುಕಿಗೆ ಪ್ರಾಮುಖ್ಯತೆ ಕೊಟ್ಟವರು. ಭೂಸುಧಾರಣಾ ಚಳವಳಿಯಲ್ಲಿ ‘ಉಳುವವನೇ ಹೊಲದೊಡೆಯ’ ಕಾನೂನು ಜಾರಿಗಾಗಿ ಹೋರಾಡಿ ಗೇಣಿದಾರರಿಗೆ ಭೂಮಿ ತೆಗೆಸಿಕೊಟ್ಟವರು. ರೈತಾಪಿ ಕೃಷಿಕೂಲಿ ಬೀಡಿ ಕಾರ್ಮಿಕರ ಬದುಕನ್ನು ಹಸನಾಗಿಸಲು ಇವರೀರ್ವರ ಹೋರಾಟ ಅವಿಸ್ಮರಣೀಯ. ಆದರೆ ಇಂದು ಪ್ಯಾಸಿಸ್ಟ್ ಮನೋಭಾವದಿಂದ ಜನಪರ ಹೋರಾಟಗಳು ನಗಣ್ಯವಾಗುತ್ತಿರುವುದು ನೋವು ತರುತ್ತಿದೆ ಎಂದರು.

ಈ ಇಬ್ಬರು ಹೋರಾಟಗಾರರ ಆದರ್ಶಗಳನ್ನು ಪಾಲಿಸುವುದೇ ಇವರಿಗೆ ನೀಡುವ ನಿಜವಾದ ನುಡಿನಮನ ಎಂದವರು ಹೇಳಿದರು.ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಮಾತನಾಡಿ, ದೀನ ದಲಿತರ, ಬಡವರ್ಗಗಳ ಅಭ್ಯುದಯಕ್ಕಾಗಿ ಶೋಷಣೆ ಮುಕ್ತ ಸಮಾಜಕ್ಕಾಗಿ ಈ ಎರಡು ಚೇತನಗಳು ದುಡಿದಿವೆ. ಭೂ ಮಸೂದೆ ಕಾನೂನು ಜಾರಿಯಾದಾಗ ಗೇಣಿದಾರರ ಪರವಾಗಿದ್ದವರು ಈ ಕಮ್ಯೂನಿಸ್ಟ್ ನಾಯಕರು. ನಾನು ಮತ್ತು ಬಿ.ವಿಶ್ವನಾಥ ನಾಯಕ್ ಭೂ ಅಭಿವೃದ್ಧಿ ಬ್ಯಾಂಕಿನ ನಿರ್ದೇಶಕರಾಗಿದ್ದಾಗ ವಿಧಾನ ಸಭಾ ಚುನಾವಣೆಯಲ್ಲಿ ನಾಬ್ಬರು ಸ್ಪರ್ಧಿಸುತ್ತಿದ್ದಾಗ ನಮ್ಮ ಸಂಬಂಧ, ಪ್ರೀತಿ ಗಟ್ಟಿಯಾಯಿತು. ಇವರು ಅಭಿಮಾನ ಮತ್ತು ಪ್ರೀತಿಯ ಸಂಕೇತವಾಗಿದ್ದರು. ಸರಳ, ಸಜ್ಜನಿಕೆಯ ವ್ಯಕ್ತಿಗಳಾಗಿದ್ದರು. ಇವರ ಆದರ್ಶ ಆಲೋಚನೆ ಯೋಜನೆ ಜೀವಂತವಾಗಿರಲಿ ಎಂದು ಅಗಲಿದ ಸಂಗಾತಿಗಳಿಗೆ ನುಡಿನಮನ ಸಲ್ಲಿಸಿದರು.

ಸಭೆಯಲ್ಲಿ ಸಿಪಿಐ(ಎಂ) ಮುಂದಾಳು ಯಾದವ ಶೆಟ್ಟಿ, ವಾಸುಗಟ್ಟಿ, ಸಿಪಿಐ ಕಾಸರಗೋಡು ಜಿಲ್ಲಾ ಸಹಕಾರ್ಯದರ್ಶಿ ಬಿ.ವಿ.ರಾಜನ್, ಬೂಡಾದ ಅಧ್ಯಕ್ಷ ಸದಾಶಿವ ಬಂಗೇರ, ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ವಕೀಲ ಅಶ್ವನಿ ಕುಮಾರ್ ರೈ, ಬಿ.ವಿ.ನಾಯಕ್‌ರ ಸಂಬಂಧಿ ಜಯಾ ನಾಯಕ್, ಪಿ.ಸಂಜೀವರ ಪುತ್ರ ಯೋಗೀಶ್ ಕುಮಾರ್ ಮುಂತಾದವರು ನುಡಿ-ನಮನ ಸಲ್ಲಿಸಿದರು.

ವೇದಿಕೆಯಲ್ಲಿ ತಾಲೂಕು ಪಂಚಾಯತ್ ಸದಸ್ಯ ಅಬ್ಬಾಸ್ ಅಲಿ ಉಪಸ್ಥಿತರಿದ್ದರು.ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಬಿ.ಶೇಖರ್ ಅಧ್ಯಕ್ಷತೆ ವಸಿದ್ದರು. ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ವಿ.ಎಸ್.ಬೇರಿಂಜ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಪಕ್ಷದ ಜಿಲ್ಲಾ ಮುಖಂಡ ಸುರೇಶ್ ಕುಮಾರ್‌ವಂದಿಸಿರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News