ಜ. 27ರಂದು 'ವಿದ್ಯಾರತ್ನ ಕೆ. ರಮೇಶ ನಾಯಕ್ ರಾಯಿ ಸಾಧನಾ ಸಂಭ್ರಮ'

Update: 2018-01-23 17:32 GMT

ಬಂಟ್ವಾಳ, ಜ. 23: ಉತ್ತಮ ಶಿಕ್ಷಕ ರಾಷ್ಟ್ರಪ್ರಶಸ್ತಿ ಪುರಸ್ಕೃತ, ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕೆದ್ದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಕೆ.ರಮೇಶ ನಾಯಕ್ ರಾಯಿ ಅವರು ಇತ್ತೀಚೆಗೆ ಸೇವೆಯಿಂದ ನಿವೃತ್ತಿಗೊಂಡಿದ್ದು, ಅವರ ಬಹುಮುಖಿ ಸಾಧನೆಯನ್ನು ಗುರುತಿಸಿ ಗೌರವಿಸುವ ಉದ್ಧೇಶದಿಂದ ಜ. 27ರಂದು ಮಧ್ಯಾಹ್ನ 2ಗಂಟೆಗೆ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ "ವಿದ್ಯಾರತ್ನ ಕೆ.ರಮೇಶ ನಾಯಕ್ ರಾಯಿ ಸಾಧನಾ ಸಂಭ್ರಮ" ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಬಂಟ್ವಾಳ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

ಮಂಗಳವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಟ್ವಾಳ ತಾಲೂಕು ಸರಕಾರಿ ನೌಕರರ ಸಂಘ, ಬಂಟ್ವಾಳ ತಾಲೂಕು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ವಿಟ್ಲ ಅಧ್ಯಾಪಕರ ಸಹಕಾರಿ ಸಂಘ ಹಾಗೂ "ರಮೇಶ ನಾಯಕ್ ಸಾಧನಾ ಸಂಭ್ರಮ ಸಮಿತಿ" ಸಹಭಾಗಿತ್ವದಲ್ಲಿ "ಸಾಧನಾ ಸಂಭ್ರಮ" ಸಮಾರಂಭವನ್ನು ಆಯೋಜಿಸಲಾಗಿದ್ದು ಈ ಮೂಲಕ ನಾಯಕರ ಶೈಕ್ಷಣಿಕ, ಸಹಕಾರಿ ಮತ್ತು ಸಾಮಾಜಿಕ ಬದುಕಿನ ಸಾಧನೆಯನ್ನು ತೆರೆದಿಡಲು ಪ್ರಯತ್ನಿಸಲಾಗುತ್ತಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ನಿವೃತ್ತ ಮುಖ್ಯ ಶಿಕ್ಷಕ ಚಂದ್ರಶೇಖರ ರಾವ್ ಕುಕ್ಕಾಜೆ ಅಧ್ಯಕ್ಷತೆ ವಹಿಸಲಿದ್ದು, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೆರಾ, ಬಂಟ್ವಾಳ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಕೆದ್ದಳಿಕೆ ಶಾಲಾ ಗೌರವಾಧ್ಯಕ್ಷ ಬಿ.ಪದ್ಮಶೇಖರ ಜೈನ್, ತಹಶೀಲ್ದಾರ್ ಪುರಂದರ ಹೆಗ್ಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಅತಿಥಿಗಳಾಗಿ ಭಾಗವಹಿಸುವರು ಎಂದರು.

"ರಮೇಶ ನಾಯಕ್ ಮತ್ತು ಶಿಕ್ಷಣ" ವಿಷಯದಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಶಂಕರ ಭಟ್, "ರಮೇಶ ನಾಯಕ್ ಮತ್ತು ಸಾಮಾಜಿಕ ಜೀವನ" ವಿಷಯದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಎ.ಗೋಪಾಲ ಅಂಚನ್ ವಿಷಯ ಮಂಡಿಸುವರು. ಸಮಾರಂಭದಲ್ಲಿ ರಮೇಶ ನಾಯಕ್ ಅವರಿಗೆ ಸಾರ್ವಜನಿಕ ಸನ್ಮಾನ, ಸಾಕ್ಷ್ಯ ಚಿತ್ರ ಪ್ರದರ್ಶನದ ಮೂಲಕ ಸಾಧನೆಯ ಅವಲೋಕನ ಹಾಗೂ ರಮೇಶ ನಾಯಕ್ ಅವರ ಗುರು ಚಂದ್ರಶೇಖರ ರಾವ್ ಕುಕ್ಕಾಜೆ ಅವರಿಗೆ ಗುರುವಂದನೆ ನಡೆಯಲಿದೆ ಎಂದು ಹೇಳಿದರು.

ಪ್ರಶಸ್ತಿಗಳು: 2001-02ರಲ್ಲಿ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ, 2002-03ರಲ್ಲಿ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, 2004-05ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, 2011-12ರಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, 2013-14ರಲ್ಲಿ ರಾಷ್ಟ್ರೀಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, 2015ರಲ್ಲಿ ವಿದ್ಯಾರತ್ನ ಪ್ರಶಸ್ತಿ, ಅಕ್ಷರ ಗೌರವ ಪುರಸ್ಕಾರ, ವಜ್ರಾಕ್ಷ ಮಲ್ಲಿ ಸ್ಕೃತಿ ಗೌರವ ಪುರಸ್ಕೃತರಾದ ರಮೇಶ ನಾಯಕ್ ಅವರು ರಾಜ್ಯ, ಜಿಲ್ಲಾ ಮಟ್ಟದ ಹಲವಾರು ಸಂಘಟನೆಗಳಿಂದ ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳಿಗೆ ಪಾತ್ರರಾಗಿರುವುದು ಅವರ ಸಾಧನಾಶೀಲತೆಯ ದ್ಯೋತಕವಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು, ವಿಟ್ಲ ಅಧ್ಯಾಪಕರ ಸಹಕಾರಿ ಸಂಘದ ಉಪಾಧ್ಯಕ್ಷ ಕೆ.ಮೋನಪ್ಪ, ಸಾಧನ ಸಂಭ್ರಮದ ಸಮಿತಿ ಅಧ್ಯಕ್ಷ ಟಿ.ಶೇಷಪ್ಪ ಮೂಲ್ಯ, ಪದಾಧಿಕಾರಿಗಳಾದ ಎಚ್ಕೆ.ನಯನಾಡು, ನವೀನ್ ಪಿ.ಎಸ್, ಜನಾರ್ಧನ್ ಜೆ, ಕೃಷ್ಣ ಪ್ರಕಾಶ್, ದಿವಾಕರ ದಾಸ್ ಕಾವಳಕಟ್ಟೆ, ನಾರಾಯಣ ಸಿ.ಪೆರ್ನೆ, ಚಂದ್ರಶೇಖರ ಪ್ರಭು, ಗಣೇಶ ನಾಯಕ್ ವಾಮದಪದವು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News