ಜ. 26-29: ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ
ಮಂಗಳೂರು, ಜ.24: ತೋಟಗಾರಿಕೆ ಇಲಾಖೆ, ದ.ಕ. ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ ಹಾಗೂ ಸಿರಿ ತೋಟಗಾರಿಕಾ ಸಂಘದ ಆಶ್ರಯದಲ್ಲಿ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ ಜ. 26ರಿಂದ 29ರವರೆಗೆ ನಡೆಯಲಿದೆ.
ಈ ಬಗ್ಗೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್. ರವಿ ಸುದಿ್ದಗೋಷ್ಠಿಯಲ್ಲಿಂದು ಮಾಹಿತಿ ನೀಡಿದರು.
ಈ ವರ್ಷದ ಫಲಪುಷ್ಪ ಪ್ರದರ್ಶನವನ್ನು ಜ. 26ರಂದು ಬೆಳಗ್ಗೆ 11.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸುವರು. ಈ ವರ್ಷದ ಪ್ರದರ್ಶನದಲ್ಲಿ ಮಂಗಳೂರು ಕ್ಲಾಕ್ ಟವರ್ ಹೂ ವಿನ್ಯಾಸ ಮಾದರಿ ನಿರ್ಮಿಸಲಾಗುತ್ತಿದ್ದು, ಅದರ ಉದ್ಘಾಟನೆಯನ್ನು ಸಚಿವ ಯು.ಟಿ.ಖಾದರ್ ನೆರವೇರಿಸಲಿದ್ದಾರೆ ಎಂದು ಅವರು ಹೇಳಿದರು.
ಪ್ರದರ್ಶನದ ವಿಶೇಷತೆಗಳು
ಪ್ರದರ್ಶನದಲ್ಲಿ ಜೇನು ಬೇಸಾಯ ಬಗ್ಗೆ ಮಾಹಿತಿ ಹಾಗೂ ಜೇನಿನ ವೌಲ್ಯವರ್ಧಿತ ಉತ್ಪನ್ನಗಳ ಮಾರಾಟ, ಕೈತೋಟ ಮತ್ತು ತಾರಸಿ ತೋಟದ ಪ್ರಾತ್ಯಕ್ಷಿಕೆ, ಔಷಧಿ ಗಿಡಗಳ ಪ್ರದರ್ಶನ, ವಿವಿಧ ಅಭಿವೃದ್ಧಿ ಇಲಾಖೆಗಳ ಪ್ರದರ್ಶನ ಮಳಿಗೆಗಳು, ತೋಟಗಾರಿಕಾ ಇಲಾಖೆಯಿಂದ ಬೆಳೆಸಲಾಗಿರುವ ವಿವಿಧ ಜಾತಿಯ ಆಕರ್ಷಣೀಯ ಹೂ, ತರಕಾರಿಗಳ ಪ್ರದರ್ಶನ, ಬೊನ್ಸಾಯಿ, ಅಂಥೂರಿಯಂ, ಆರ್ಕಿಡ್ ಗಿಡಗಳು ಹಾಗೂ ಇತರ ಆಕರ್ಷಕ ಗಿಡಗಳ ಪ್ರದರ್ಶನ ನಡೆಯಲಿದೆ. ಇದಲ್ಲದೆ ಸುಮಾರು 70 ಮಳಿಗೆಗಳಲ್ಲಿ ವಿವಿಧ ಕೃಷಿಗೆ ಉಪಯೋಗಿಸುವ ಉಪಕರಣಗಳು, ಸ್ವಸಹಾಯ ಗುಂಪುಗಳ ವಿವಿಧ ವಸ್ತುಗಳು, ಸ್ಥಳೀಯ ಖಾದ್ಯಗಳ ಮಳಿಗೆಗಳೂ ಪ್ರದರ್ಶನದಲ್ಲಿ ಇರಲಿವೆ. ಪ್ರದರ್ಶನದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯನ್ನು ಉದ್ಯಾನವನದ ಹೊರಗಡೆ ಸಜ್ಜುಗೊಳಿಸಲಾಗುವುದು. ಈ ಹಿನ್ನೆಲೆಯಲ್ಲಿ ಉದ್ಯಾನವನ ಹಾಗೂ ಸಂಗೀತ ಕಾರಂಜಿ ನಡುವಿನ ರಸ್ತೆಯಲ್ಲಿ ಪ್ರದರ್ಶನದ ಅವಧಿಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗುವುದು. ಈ ಬಗ್ಗೆ ನಗರ ಸಂಚಾರಿ ಪೊಲೀಸರಿಂದ ಒಪ್ಪಿಗೆಯನ್ನು ಪಡೆಯಲಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಆಯ್ದ ಪ್ರಗತಿಪರ 5 ಮಂದಿ ಮಹಿಳೆಯರು, ಸಣ್ಣ, ಅತೀ ಸಣ್ಣ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ತೋಟಗಾರಿಕಾ ರೈತರನ್ನು ಗುರುತಿಸಿ ಸನ್ಮಾನಿಸಲಾಗುವುದು.
ಸಾರ್ವಜನಿಕರಿಗೆ ಹೂ ಜೋಡಣೆ ಸ್ಪರ್ಧೆ: ಸ್ಥಳದಲ್ಲೇ ನೋಂದಣಿಗೆ ಅವಕಾಶ
ಜ.26ರಂದು ಸಾರ್ವಜನಿಕರಿಗೆ ಹೂ ಜೋಡಣೆ, ಪುಷ್ಪರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಅಂದು ಸ್ಥಳದಲ್ಲೇ ನೋಂದಣಿಗೆ ಅವಕಾಶವಿದೆ ಎಂದು ಅವರು ಹೇಳಿದರು.
ಶಾಲಾ ಶಿಕ್ಷಕರೊಂದಿಗೆ ಬರುವ ಶಾಲಾ ಮಕ್ಕಳಿಗೆ, ವಿಕಲಚೇತನರಿಗೆ ಮತ್ತು ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಉಚಿತ ಪ್ರವೇಶವಿರುತ್ತದೆ. ಉಳಿದಂತೆ ಹಿರಿಯರಿಗೆ 20 ರೂ. ಹಾಗೂ ಮಕ್ಕಳಿಗೆ 10 ರೂ. ಪ್ರವೇಶ ದರವನ್ನು ನಿಗದಿಪಡಿಸಲಾಗಿದೆ. ಪ್ರದರ್ಶನ ಈ ನಾಲ್ಕು ದಿನಗಳ ಅವಧಿಯಲ್ಲಿ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9.30ರವರೆಗೆ ತೆರೆದಿರುತ್ತದೆ ಎಂದು ಡಾ. ಎಂ.ಆರ್. ರವಿ ಹೇಳಿದರು.
ಗೋಷ್ಠಿಯಲ್ಲಿ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಎಚ್.ಆರ್. ನಾಯ್ಕಿ, ಸಿರಿ ತೋಟಗಾರಿಕಾ ಸಂಘದ ಉಪಾಧ್ಯಕ್ಷ ಡಾ. ಭಾರತೀ ನಿರ್ಮಲ್, ಕೋಶಾಧಿಕಾರಿ ಪಿ. ಸುರೇಶ್ ಶೆಣೈ, ಜತೆ ಕಾರ್ಯದರ್ಶಿ ಅನಂತರಾಮ ಹೇರಳೆ, ಆಡಳಿತ ಮಂಡಳಿ ಸದಸ್ಯರಾದ ಲಕ್ಷ್ಮೀ ರಾವ್ ಆರೂರು, ಎನ್.ವಿ.ಕೆ. ಭಟ್ರಕೋಡಿ, ಶಾರದಾ ಆಚಾರ್, ಶಶಿ ವಿ. ಶೆಟ್ಟಿ, ವಿಜಯಲಕ್ಷ್ಮೀ ಆರ್.ರಾವ್, ಸುಭಾಶ್ಚಂದ್ರ ರೈ ಮೊದಲಾದವರು ಉಪಸ್ಥಿತರಿದ್ದರು.
ತರಕಾರಿ ತೋಟದಲ್ಲಿ ನಳ ನಳಿಸುತ್ತಿದೆ ಹಸಿರು ಸಾವಯವ ತರಕಾರಿ !
ಇದು ಪಾಂಡುರಂಗರ 3 ತಿಂಗಳ ಶ್ರಮದ ಫಲ!
ಫಲ ಪುಷ್ಪ ಪ್ರದರ್ಶನಕ್ಕಾಗಿ ಸಿದ್ಧಪಡಿಸಲಾಗಿರುವ ತರಕಾರಿ ತೋಟದಲ್ಲಿ ಅಲಸಂಡೆ, ಬದನೆ, ಹೀರೆಕಾಯಿ, ಪಡವಲಕಾಯಿ, ಹಸಿರು ಬಸಳೆ, ಕೆಂಪು ಬಸಳೆ, ಮೆಣಸು, ಕೊತ್ತಂಬರಿಸೊಪ್ಪು, ಬೂದು ಕುಂಬಳ, ಸಿಹಿ ಕುಂಬಳ, ಹಾಗಲಕಾಯಿ, ಮೂಲಂಗಿ ಮೊದಲಾದ ಹಸಿರು ಸಾವಯವ ತರಕಾರಿಗಳು ನಳ ನಳಿಸುತ್ತಿವೆ.
ಇದಕ್ಕೆ ಪ್ರಮುಖ ಕಾರಣಕರ್ತರು ತೋಟಗಾರಿಕಾ ಇಲಾಖೆಯ ಬೆಳ್ತಂಗಡಿಯ ತೋಟಗಾರರಾದ ಪಾಂಡುರಂಗ. ಅವರು ಕಳೆದ ಮೂರು ತಿಂಗಳಿನಿಂದ ಇಲ್ಲಿ ಕುಂಡಗಳಲ್ಲಿ ಬೀಜ ಬಿತ್ತಿ ಗಿಡ ಬೆಳೆಸಿ, ಫಸಲು ತೆಗೆಯುವಲ್ಲಿ ಶ್ರಮ ವಹಿಸಿದ್ದಾರೆ.
ಕುಂಡಗಳಲ್ಲಿ ಮಣ್ಣು ಮತ್ತು ಮರಳು ಮಿಶ್ರ ಮಾಡಿ ಅದರಲ್ಲಿ ಬೀಜ ಹಾಕಿ ಮೊಳಕೆ ಬರಿಸಿ ಮೊಳಕೆ ಗಿಡವಾಗಿಸಿ, ಬಳ್ಳಿಯಾಗಿಸಿ ಆ ಬಳ್ಳಿ, ಗಿಡಗಳಲ್ಲಿ ತರಕಾರಿ ಗಳು ನಳನಳಿಸುವಂತೆ ಪಾಂಡುರಂಗ ಅವರು ಮಾಡಿದ್ದಾರೆ. ಕಳೆದ ಸುಮಾರು 16 ವರ್ಷಗಳಿಂದ ತೋಟಗಾರರಾಗಿ ಸೇವೆ ಸಲ್ಲಿಸುತ್ತಿರುವ ಪಾಂಡುರಂಗ ಕಳೆದ ಮೂರು ವರ್ಷಗಳಿಂದ ಕದ್ರಿ ಉದ್ಯಾನವನದ ಫಲಪುಷ್ಪ ಪ್ರದರ್ಶನದಲ್ಲಿ ತರಕಾರಿ ತೋಟದ ನಿರ್ವಹಣೆ ಮಾಡುತ್ತಿದ್ದಾರೆ.
‘‘ಆರಂಭದ ವರ್ಷ ತರಕಾರಿ ಗಿಡಗಳಲ್ಲಿ ಅಷ್ಟೊಂದು ಉತ್ತಮವಾಗಿ ಫಲ ನೀಡಿರಲಿಲ್ಲ. ಆದರೆ ಕಳೆದ ವರ್ಷ ಹಾಗೂ ಈ ವರ್ಷ ಉತ್ತಮ ಫಲ ಬಂದಿದೆ. ಅದು ಖುಷಿಯಾಗಿದೆ. ನವೆಂಬರ್ ಆರಂಭದಲ್ಲಿ ಇಲ್ಲಿ ತರಕಾರಿ ಬೆಳೆಸುವ ಪ್ರಕ್ರಿಯೆ ಆರಂಭಿಸಿದ್ದೇನೆ. ಸಾವಯವವಾಗಿಯೇ ಇಲ್ಲಿ ತರಕಾರಿಗಳನ್ನು ಬೆಳೆಸಲಾಗುತ್ತಿದೆ. ಸೆಗಣಿ ಮತ್ತು ನೆಲಕಡಲೆ ಹಿಂಡಿಯನ್ನು ಮಿಶ್ರಣ ಮಾಡಿ ಅದನ್ನು ಕೆಲ ದಿನಗಳ ಕಾಲ ಕೊಳೆಯಿಸಿ ಬ್ಯಾಕ್ಟೀರಿಯಾ ಉತ್ಪತ್ತಿಯಾಗುವ ವೇಳೆ ಅದನ್ನು ಗಿಡಗಳಿಗೆ ಹಾಕಲಾಗುತ್ತದೆ. ವಾರಕ್ಕೊಮ್ಮೆ ಗಿಡಗಳಿಗೆ ಯಾವುದೇ ಕೀಟ ಬಾಧೆಯಾಗದಂತೆ ಬೇವಿನಎಣ್ಣೆಯನ್ನು ಸಿಂಪಡಿಸಲಾಗುತ್ತದೆ’’ ಎಂದು ತರಕಾರಿ ತೋಟದ ಬಗ್ಗೆ ಪಾಂಡುರಂಗ ಅವರು ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದ್ದಾರೆ.