ನನ್ನ ಬದುಕಿನ ಏರಿಳಿತಗಳನ್ನು ಆತ್ಮಕಥೆಯಲ್ಲಿ ಹೇಳಿದ್ದೇನೆ: ಜನಾರ್ದನ ಪೂಜಾರಿ
ಮಂಗಳೂರು, ಜ. 26: ನನ್ನ ಚರಿತ್ರೆ ಭೂಗತವಾಗಿ ಹೋಗಬಾರದು ಎಲ್ಲರಿಗೂ ತಿಳಿಯಬೇಕು, ನನ್ನ ಬದುಕಿನ ಏರಿಳಿತಗಳನ್ನು ಆತ್ಮಕಥೆಯಲ್ಲಿ ದಾಖಲಿಸಿದ್ದೇನೆ. ಪುಸ್ತಕವೇ ನನ್ನ ಬಗ್ಗೆ ಜನತೆಗೆ ತಿಳಿಸಲಿದೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ತಿಳಿಸಿದ್ದಾರೆ.
ಕುದ್ರೋಳಿ ಶ್ರೀ ಗೋಕರ್ಣನಾಥನ ದೇವಸ್ಥಾನದಲ್ಲಿ ತೀರ್ಥ ಪ್ರೋಕ್ಷಣೆಯೊಂದಿಗೆ ಮಂಗಳವಾದ್ಯಗಳ ಸಹಿತ ಪುಸ್ತಕವನ್ನು ತಲೆಯ ಮೇಲೆ ಹೊತ್ತು ದೇವಸ್ಥಾನಕ್ಕೆ ಪ್ರದಕ್ಷಿಣೆ ಮಾಡಿ ಬಳಿಕ ಸಭಾಂಗಣದ ವೇದಿಕೆಯಲ್ಲಿ ಪುಸ್ತಕವನ್ನು ಅವರು ಇಂದು ಬಿಡುಗಡೆಗೊಳಿಸಿ ಮಾತನಾಡುತಿದ್ದರು.
ಪುಸ್ತಕ ಗೋಡೌನ್ ಸೇರಬಾರದು ಆದರೆ ಎಲ್ಲರೂ ಕೊಂಡು ಓದಬೇಕು, ಪುಸ್ತಕದ ಬೆಲೆಯನ್ನು ಮುಖಬೆಲೆಗಿಂತ ಕಡಿಮೆಯಲ್ಲಿ ವಿತರಿಸುವುದಾಗಿ ತಿಳಿಸಿ ಬಿಡುಗಡೆಯ ದಿನ 300 ರೂ. ಮುಖ ಬೆಲೆಯ ಪುಸ್ತವನ್ನು 50 ರೂ.ಗೆ ಕೊಡುವುದಾಗಿ ತಿಳಿಸಿದರು.
ಸಾಲ ಮೇಳದ ಸಂಗ್ರಾಮದಲ್ಲಿ:- ಪುಸ್ತಕದಲ್ಲಿ ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆ ಜನಾರ್ದನ ಪೂಜಾರಿಯವರ ಮಾತುಗಳನ್ನು ದಾಖಲಿಸಿದ್ದಾರೆ. ಸಂತೋಷ್ ಕುಮಾರ್ ಮತ್ತು ದೀಪಕ್ ಪುಜಾರಿ ಈ ಪುಸ್ತಕದ ಪ್ರಕಾಶಕರಾಗಿದ್ದಾರೆ. ಪುಸ್ತಕ 214 ಪುಟಗಳನ್ನು ಒಳಗೊಂಡು 8 ಅಧ್ಯಾಯಗಳನ್ನೊಳ ಗೊಂಡಿದೆ. ಆರಂಭದ ಎರಡು ಪುಟಗಳಲ್ಲಿ ಪುಜಾರಿ ಅವರ ನನ್ನ ಮಾತು ಎಂಬ ಹೆಸರಿನಲ್ಲಿ ಮುನ್ನುಡಿ ಹಾಗೂ ಪುಸ್ತಕದ ಕೊನೆಯಲ್ಲಿ 18 ಪುಟಗಳ ಚಿತ್ರ ಸಂಪುಟ, ನಾಲ್ಕು ಪುಟಗಳ ಸ್ವವಿವರ ಈ ಆತ್ಮ ಕಥೆಯಲ್ಲಿ ಒಳಗೊಂಡಿದೆ.
ಪುಸ್ತಕದಲ್ಲಿ ತಮ್ಮ ಬಾಲ್ಯದಲ್ಲಿ ಸ್ಫೂರ್ತಿ ನೀಡಿದ ಬಾಬು ಮಾಸ್ಟರ್ ರ ಪ್ರಸ್ತಾಪ, ಇಂದಿರಾ ಗಾಂಧಿಯವರು ಕೈಗೊಂಡ ಬ್ಯಾಂಕ್ ರಾಷ್ಟ್ರೀಕರಣದಂತಹ ದಿಟ್ಟ ನಿಲುವುಗಳ ಬಗ್ಗೆ ವಕೀಲರ ಮುಂದೆ ತಾನು ಒಂಟಿ ಧ್ವನಿಯಾಗಿ ಸಮರ್ಥಿಸುತ್ತಿದ್ದ ದಿನಗಳನ್ನು ಪೂಜಾರಿಯವರು ಮೆಲುಕು ಹಾಕಿದ್ದಾರೆ.
ಕರೆ ಬಂತು ದೇಶ ಸೇವೆ, ಕಡು ಬಡತನದ ಬಾಲ್ಯ, ರಾಜಕೀಯದ ಗರಡಿಯಲ್ಲಿ, ಸಾಲ ಮೇಳ ಬದಲಾವಣೆಯ ಕ್ರಾಂತಿ, ನಾಲ್ಕು ಬಾರಿ ಒಲಿದ ಮುಖ್ಯ ಮಂತ್ರಿ ಪದವಿ ತಿರಸ್ಕರಿಸಿದ ಬಗ್ಗೆ ಒಂದು ಅಧ್ಯಾಯದಲ್ಲಿ ಹೇಳುತ್ತಾರೆ. ದೇವಾಲಯದಿಂದ ಪರಿವರ್ತನೆ, ಸಂಸಾರ ಸಾಗರದೊಳಗೆ ಎಂಬ ಅಧ್ಯಾಯಗಳಿವೆ.
ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ಶಾಸಕರಾದ ಜೆ.ಆರ್.ಲೋಬೊ, ಮೊಯ್ದಿನ್ ಬಾವ, ಶಕುಂತಳಾ ಶೆಟ್ಟಿ, ಐವನ್ ಡಿಸೋಜ, ಗಣೇಶ್ ಕಾರ್ನಿಕ್, ಮೇಯರ್ ಕವಿತಾ ಸನಿಲ್, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಕೆ.ಎಸ್. ಮುಹಮ್ಮದ್ ಮಸೂದ್, ವಿಜಯ ಬ್ಯಾಂಕ್ನ ಮಾಜಿ ಅಧ್ಯಕ್ಷ ಸದಾನಂದ ಶೆಟ್ಟಿ, ಯೆನೆಪೋಯ ವಿಶ್ವ ವಿದ್ಯಾನಿಲಯದ ಕುಲಪತಿ ಯೆನೆಪೋಯ ಅಬ್ದುಲ್ಲಾ ಕುಂಞಿ, ಜಿಲ್ಲಾ ವಕ್ಫ್ ಮಂಡಳಿಯ ಅಧ್ಯಕ್ಷ ಕಣಚೂರು ಮೋನು, ರಾಜ್ಯ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ಎ.ಜೆ.ಸಮೂಹ ಸಂಸ್ಥೆಗಳ ಅಧ್ಯಕ್ಷ ಎ.ಜೆ.ಶೆಟ್ಟಿ, ಕಲ್ಲಡ್ಕ ಶ್ರಿರಾಮ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಗೂ ಆರೆಸ್ಸೆಸ್ ಮುಖಂಡ ಪ್ರಭಾಕರ ಭಟ್, ಜಿ.ಶಂಕರ್, ಲಕ್ಷ್ಮಣ್ ಕೊಡಸೆ, ಕುದ್ರೋಳಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಮ್, ಡಾ.ಬಿ.ಜಿ.ಸುವರ್ಣ, ದೇವದಾಸ್, ಹರಿಕೃಷ್ಣ ಬಂಟ್ವಾಳ, ಡಿ.ಡಿ. ಕಟ್ಟೆಮಾರ್, ಅನಸೂಯ, ಶೇಖರ ಪೂಜಾರಿ, ಪದ್ಮ ರಾಜ, ಊರ್ಮಿಳಾ ರಮೇಶ್, ಮಾಧವ ಸುವರ್ಣ, ರಾಧಾಕೃಷ್ಣ, ಬಿ.ಕೆ. ತಾರಾನಾಥ್, ಪುರುಷೋತ್ತಮ ಚಿತ್ರಾಪುರ, ಬಿ.ಟಿ.ಸಾಲ್ಯಾನ್, ದೇವೇಂದ್ರ ಪುಜಾರಿ ಮೊದಲಾದವರು ಉಪಸ್ಥಿತರಿದ್ದರು.