ಕಡಲ್ಕೊರೆತ ತಡೆಗೋಡೆಗೆ ಅಕ್ರಮ ಶಿಲೆಕಲ್ಲು ಸಾಗಾಟ: ಲಾರಿ ವಶ
Update: 2018-01-26 18:06 GMT
ಬೈಂದೂರು, ಜ.26: ಕೊಡೇರಿ ಸಮುದ್ರ ತೀರದ ಕಡಲು ಕೊರೆತದ ತಡೆ ಗೋಡೆ ನಿರ್ಮಾಣಕ್ಕೆ ಅಕ್ರಮವಾಗಿ ಶಿಲೆಕಲ್ಲು ಸಾಗಾಟ ಮಾಡುತ್ತಿದ್ದ ಲಾರಿ ಯನ್ನು ಬೈಂದೂರು ಪೊಲೀಸರು ಜ.25ರಂದು ಸಂಜೆ 6.30ರ ಸುಮಾರಿಗೆ ನಾವುಂದದಲ್ಲಿ ಚಾಲಕ ಸಮೇತ ವಶಕ್ಕೆ ತೆಗೆದುಕೊಂಡಿದ್ದಾರೆ.
ಅಸ್ಸಾಂ ರಾಜ್ಯದ ಬಿಲಾಲುದ್ದೀನ್ ಲಸ್ಕರ್ (27) ಬಂಧಿತ ಲಾರಿ ಚಾಲಕ. ಈತ ಆವರ್ಸೆ ಕಡೆಯಿಂದ ಕೊಡೇರಿ ಸಮುದ್ರ ತೀರದ ಕಡಲು ಕೊರೆತದ ತಡೆ ಗೋಡೆ ನಿರ್ಮಾಣಕ್ಕೆ ಕುಂದಾಪುರದ ವಿನೋದ್ ಎಂಬವರ ಲಾರಿಯಲ್ಲಿ ಶಿಲೆಯ ಬಂಡೆಕಲ್ಲುಗಳನ್ನು ಕಳವು ಮಾಡಿ ಅಕ್ರಮವಾಗಿ ಸಾಗಿಸುತ್ತಿದ್ದು, ಈ ಬಗ್ಗೆ ಖಚಿತ ಮಾಹಿತಿಯಂತೆ ಪೊಲೀಸರು ದಾಳಿ ನಡೆಸಿ ಲಾರಿ ಮತ್ತು ಅದರಲ್ಲಿದ್ದ ಶಿಲೆಯ ಬಂಡೆಕಲ್ಲುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.