×
Ad

ಸಾವಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ: ಯು.ಟಿ.ಖಾದರ್

Update: 2018-01-27 20:22 IST

ಉಳ್ಳಾಲ, ಜ. 27: ಯಾವುದೇ ಸಂಘಟನೆ ಅಥವಾ ಪಕ್ಷವಾದರೂ ಸಾವಿನಲ್ಲಿ ರಾಜಕೀಯ ಮಾಡಬಾರದು, ಸಾವಿನ ದುಃಖ ಹೆತ್ತವರು, ಕುಟುಂಬಕ್ಕೆ ಮಾತ್ರ ಗೊತ್ತು. ಒಮ್ಮೆ ಬೊಬ್ಬೆ ಹಾಕಿ ರಾಜಕೀಯ ಮಾಡಿ ಮಾಯವಾಗುವ ಬದಲು ನೊಂದ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ಆಗಬೇಕು ಎಂದು ಆಹಾರ ಸಚಿವ ಯು.ಟಿ.ಖಾದರ್ ಹೇಳಿದರು.

ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ಝೈಬುನ್ನಿಸಾ ಸಾವಿನ ಬಗ್ಗೆ ನಮಗೂ ಬೇಸರವಿದೆ. ಆದರೆ ಈ ಬಗ್ಗೆ ಏನೂ ತಿಳಿದುಕೊಳ್ಳದೆ ರಾಜಕೀಯ ಮಾಡುತ್ತಿರುವುದು ಖಂಡನೀಯ. 20 ದಿನಗಳ ಹಿಂದೆ ವಿದೇಶದಿಂದ ಬಾಲಕಿಯ ಸಂಬಂಧಿಕರು ಕರೆ ಮಾಡಿ ಹಾಸ್ಟೆಲ್‌ನಲ್ಲಿ ಆಗುತ್ತಿರುವ ತೊಂದರೆ ಬಗ್ಗೆ ತಿಳಿಸಿದ್ದರು. ಈ ಬಗ್ಗೆ ತಾನು ಸಂಬಂಧಪಟ್ಟವರಲ್ಲಿ ಮಾತನಾಡಿದ್ದೆ, ಬಳಿಕ ಅವರು ಸಂಪರ್ಕ ಮಾಡಿಲ್ಲ. ಬಾಲಕಿ ಆತ್ಮಹತ್ಯೆ ಮಾಡಿದ ದಿನ ಮೊದಲ ಕರೆಯೇ ತನಗೆ ಬಂದಿದ್ದು, ಈ ಮಧ್ಯೆ ಪ್ರಯಾಣದಲ್ಲಿರುವಾಗಲೇ ಹಲವು ಬಾರಿ ಕರೆ ಬಂದಿದ್ದರಿಂದ ಸ್ಥಳೀಯ ಕಾರ್ಪೊರೇಟರ್ ಸುಹೈಲ್‌ಗೆ ಕರೆ ಮಾಡಿ ಝೈಬುನ್ನಿಸಾ ಹೆತ್ತವರಿಗೆ ಸಂಪರ್ಕಿಸುವಂತೆ ಮಾಡಲಾಗಿದೆ. ಅಗತ್ಯ ವ್ಯವಸ್ಥೆ ಮಾಡಲಾಗಿದ್ದರೂ ಮೃತದೇಹ ಇಟ್ಟು ರಾಜಕೀಯ ಮಾಡಲಾಗಿದ್ದು, ತಾಯಿ ಕರೆ ಮಾಡಿ ಮೃತದೇಹ ಬಿಟ್ಟು ಕೊಡಿ ಎಂದು ಅಲವತ್ತುಕೊಂಡಿದ್ದರು ಎಂದು ತಿಳಿಸಿದರು.

ಅನ್ಯಾಯದ ಸಾವನ್ನು ಎಂದಿಗೂ ಸಹಿಸಲಾಗದು, ಕಿರುಕುಳದ ಆರೋಪ ಹೊತ್ತಿರುವ ವಾರ್ಡನ್ ರವಿ ಅವರನ್ನು ಈಗಾಗಲೇ ಬಂಧಿಸಲಾಗಿದೆ. ಮನೆಯವರು ನೀಡಿದಂತೆ ಕೇಸು ದಾಖಲಿಸಲಾಗಿದ್ದು, ಐಪಿಸಿ ಸೆಕ್ಷನ್ 34 ಮತ್ತು 306 ಪ್ರಕರಣ ದಾಖಲಿಸಲಾಗಿದೆ. ಕಾನೂನು ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ಎಂದಿಗೂ ಹಿಂದೇಟು ಹಾಕುವುದಿಲ್ಲ. ಸಾವಿಗೆ ಪರಿಹಾರ ಎಷ್ಟು ಕೊಟ್ಟರೂ ನಷ್ಟ ಭರಿಸಲಾಗದು. ಸರ್ಕಾರಿ ಮಟ್ಟದಲ್ಲಿ ಅಲ್ಪಸಂಖ್ಯಾತ ನಿಧಿನಿಂದ 2 ಲಕ್ಷ, ಮುಖ್ಯಮಂತ್ರಿ ವಿಶೇಷ ಪರಿಹಾರ ನಿಧಿಯಿಂದ 2ಲಕ್ಷ, ಶಿಕ್ಷಣ ಇಲಾಖೆಯಿಂದ 50 ಸಾವಿರ ಹಾಗೂ ಲೀಗಲ್ ಸರ್ವೀಸ್ ಅಥಾರಿಟಿಯಿಂದ ಮೂರು ಲಕ್ಷ ರೂಪಾಯಿ ಪರಿಹಾರ ನೀಡಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ವಿದೇಶದಲ್ಲಿ ಕುಳಿತು ಏನೂ ಗೊತ್ತಿಲ್ಲದೆ ಆಡುವ ಮಾತಿನಿಂದ ಗೊಂದಲ ಸೃಷ್ಟಿಸುವ ಪ್ರಯತ್ನ ಬೇಡ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News