ಉಳ್ಳಾಲದಲ್ಲಿ ನಿವೃತ ಶಿಕ್ಷಕರಿಗೆ ಸನ್ಮಾನ
ಮಂಗಳೂರು, ಜ.27: ಶಿಕ್ಷಣ ಕ್ಷೇತ್ರವು ಸಾರ್ವಕಾಲಿಕ ಪವಿತ್ರವಾದುದು. ಶಿಕ್ಷಣ ರಂಗದಲ್ಲಿ ಅರ್ಪಣಾಭಾವನೆಯಿಂದ ಕಾರ್ಯನಿರ್ವಹಿಸುವಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ಅಭಿನಂದನಾರ್ಹರು ಎಂದು ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್ ಮತ್ತು ಸೈಯದ್ ಮದನಿ ದರ್ಗಾ ಸಮಿತಿಯ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಹೇಳಿದರು.
ಇತ್ತೀಚೆಗೆ ಉಳ್ಳಾಲ ಕ್ಲಸ್ಟರ್ನಲ್ಲಿ ನಿವೃತ್ತರಾದ ಶಿಕ್ಷಕರನ್ನು ಹಾಗೂ ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕಿಯನ್ನು ಸನ್ಮಾನಿಸಿ ಅವರು ಮಾತಾಡಿದರು. ಹಳೆಕೋಟೆಯ ಸೈಯದ್ ಮದನಿ ಉರ್ದು ಹಿ.ಪ್ರಾ.ಶಾಲೆಯ ನಿವೃತ್ತ ಶಿಕ್ಷಕಿ ಶಶಿಕಲಾ ಶೆಟ್ಟಿ, ಬಿ.ಎಂ. ಶಾಲೆಯ ಶಿಕ್ಷಕಿಯರಾದ ಪ್ರಫುಲ್ಲಾ ಮತ್ತು ಎಸ್ತಾರ್ ದೇವದತ್ತ್, ಒಂಭತ್ತು ಕೆರೆ ಶಾಲೆಯ ಶಿಕ್ಷಕಿ ಶೋಭನಾ ಹಾಗೂ ಜಿಲ್ಲಾ ಪ್ರಶಸ್ತಿ ವಿಜೇತರಾದ ಭಾರತ್ ಪ್ರೌಢಶಾಲೆಯ ಶಿಕ್ಷಕಿ ನಯನಾರನ್ನು ಸನ್ಮಾನಿಸಲಾಯಿುತು.
ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಂ.ಕೆ. ಮಂಜನಾಡಿ, ಒಂಭತ್ತು ಕೆರೆ ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾ, ಮೇಲಂಗಡಿ ಶಾಲೆಯ ಮುಖ್ಯ ಶಿಕ್ಷಕಿ ಮೋನಿಕಾ, ಬಿ.ಎಂ. ಶಾಲೆಯ ಮುಖ್ಯ ಶಿಕ್ಷಕಿ ನೂತನ್ ಜ್ಯೋತಿ, ಮಾದರಿ ಶಾಲೆಯ ಮುಖ್ಯ ಶಿಕ್ಷಕಿ ಪುಷ್ಪಾವತಿ ಉಪಸ್ಥಿತರಿದ್ದರು.
ಉಳ್ಳಾಲ ಕ್ಲಸ್ಟರಿನ ಸಂಪನ್ಮಾಲ ವ್ಯಕ್ತಿ ನಳಿನಿ ಸ್ವಾಗತಿಸಿದರು. ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಂಗಳೂರು ದಕ್ಷಿಣ ವಲಯದ ಅಧ್ಯಕ್ಷ ಎಂ.ಎಚ್ ಮಲಾರ್ ಪ್ರಾಸ್ತಾವ್ತಿಕವಾಗಿ ಮಾತನಾಡಿದರು. ಮೊಗವೀರ ಶಾಲೆಯ ಮುಖ್ಯ ಶಿಕ್ಷಕಿ ವೇದಾವತಿ ವಂದಿಸಿದರು.