ಮಂಗಳೂರು: ಜಗದೀಶ್ ಶೇಣವ ವಿರುದ್ಧ ಪ್ರಕರಣ ದಾಖಲು
ಮಂಗಳೂರು, ಜ. 30: ಅಮಾಯಕ ದೀಪಕ್ ರಾವ್ ಹತ್ಯೆಗೆ ಪ್ರತೀಕಾರವಾಗಿ ಕೊಟ್ಟಾರ ಚೌಕಿಯಲ್ಲಿ ಬಶೀರ್ ಹತ್ಯೆಯನ್ನು ಸಮರ್ಥಿಸಿ ಮಾತನಾಡಿದ್ದ ವಿಶ್ವ ಹಿಂದೂ ಪರಿಷತ್ ದ.ಕ. ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂದರು ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಅನಂತ ಮುರ್ಡೇಶ್ವರ ಅವರು ದೂರು ದಾಖಲಿಸಿಕೊಂಡಿದ್ದಾರೆ. ಭಾರತೀಯ ದಂಡ ಸಂಹಿತೆ 153 (ಎ), 116 ಸೆಕ್ಷನ್ಗಳಡಿಯಲ್ಲಿ ಜಗದೀಶ್ ಶೇಣವ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಜ. 28ರಂದು ನಗರದ ಖಾಸಗಿ ಸಭಾಂಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಗದೀಶ ಶೇಣವ ಅವರು ಅಮಾಯಕರ ಹತ್ಯೆ ಪ್ರಕರಣರಕ್ಕೆ ಸಂಬಂಧಿಸಿ ದ್ವೇಷ ಕಾರಿದ್ದರು. ವಿಹಿಂಪ ನಾಯಕನ ದ್ವೇಷಕಾರುವ ಈ ಭಾಷಣದ ವಿಡಿಯೋ ವೈರಲ್ ಆಗಿದ್ದವು. ‘ದೀಪಕ್ ಹತ್ಯೆಗೆ ಪ್ರತೀಕಾರವಾಗಿ ಬಶೀರ್ ಹತ್ಯೆ ಮಾಡಬಾರದಾ?’ ಎಂದು ಪ್ರಶ್ನಿಸುವ ಮೂಲಕ ಕೊಲೆಗಡುಕರಿಗೆ ಬೆಂಬಲ ಸೂಚಿಸಿದರು. ಅಲ್ಲದೆ ವಿಎಚ್ಪಿ ಜಿಲ್ಲಾಧ್ಯಕ್ಷನಾಗಿ ತಾನು ಬಶೀರ್ ಹತ್ಯೆಯನ್ನು ಸಮರ್ಥಿಸುವುದಾಗಿ ಹೇಳಿದರು. ನನ್ನ ಈ ಹೇಳಿಕೆ ವಿರುದ್ಧ ಪ್ರಕರಣ ದಾಖಲಾದರೂ ನಾನು ಅದನ್ನು ಎದುರಿಸಲು ಸಿದ್ಧ ಎಂದು ಜಗದೀಶ್ ಶೇಣವ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಸವಾಲು ಹಾಕಿದ್ದರು.