×
Ad

‘ಹೆಲ್ಮೆಟ್ ರಹಿತ ಅಪಘಾತಕ್ಕೆ ಪರಿಹಾರ ಸಿಗುವುದಿಲ್ಲ’

Update: 2018-01-31 20:15 IST

ಉಡುಪಿ, ಜ.31: ಇನ್ನು ಮುಂದೆ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವ ಸಂದರ್ಭದಲ್ಲಿ ಅಪಘಾತವಾದಲ್ಲಿ ಅವರಿಗೆ ಸಿಗುವ ಇನ್ಸೂರೆನ್ಸ್ ಪರಿಹಾರ ನೀಡಲಾಗುವುದಿಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ ಹೇಳಿದ್ದಾರೆ.

ಉಡುಪಿ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬುಧವಾರ ಸಂಜೆ ನಡೆದ ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸುವ ಬಗ್ಗೆ ಜಾಗೃತಿ ಆಂದೋಲನದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಲತಾ ಅವರು ಮಾತನಾಡುತಿದ್ದರು.

ಇಂದಿನ ದಿನಗಳಲ್ಲಿ ಪ್ರಜ್ಞಾವಂತರೇ ತಮ್ಮ ಜೀವನದ ಬಗ್ಗೆ ಯೋಚಿಸದೆ ಶೋಕಿಗಾಗಿ ಹೆಲ್ಮೆಟ್ ಧರಿಸದೆ ದ್ವಿಚಕ್ರವಾಹನವನ್ನು ಓಡಿಸುತ್ತಾರೆ. ದೇಶದಲ್ಲಿ ವರ್ಷದಲ್ಲಿ ಸುಮಾರು 900 ಮಂದಿ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿ ನಡೆದ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಪೋಲಿಸರ ಭಯಕ್ಕೆ ಹೆಲ್ಮೆಟನ್ನು ಧರಿಸದೆ ತಮ್ಮ ಜೀವದ ರಕ್ಷಣೆಗಾಗಿ ಧರಿಸಬೇಕು. ಒಂದು ವೇಳೆ ಅಪಘಾತವಾದಲ್ಲಿ ಹೆಲ್ಮೆಟ್ ಧರಿಸದೆ ಅವಘಡ ಸಂವಿಸಿದರೆ ಜೀವವಿಮೆಯನ್ನು ಇನ್ನು ನೀಡಲಾಗುವುದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್‌ಚಂದ್ರ, ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ನಂಬಿಯಾರ್, ಉಡುಪಿ ವಕೀಲರ ಸಂಘದ ಅಧ್ಯಕ್ಷ ಎಚ್.ರತ್ನಾಕರ್ ಶೆಟ್ಟಿ, ಮಣಿಪಾಲ ಆಟೋ ಕ್ಲಬ್‌ನ ಅಧ್ಯಕ್ಷ ನಿಶಾಂತ್ ಬಿ.ಭಟ್, ಮಾನವ ಹಕ್ಕುಗಳ ಮತ್ತು ಅಹವಾಲುಗಳ ಅಧ್ಯಕ್ಷ ಸುಲ್ತಾನ್ ಇಕ್ಖಾಲ್, ಸಂಪನ್ಮೂಲ ವ್ಯಕ್ತಿ ಪ್ರಸಿದ್ಧ ನ್ಯೂರೋ ಸಜನ್‌ರ್ ಡಾ.ಎ. ರಾಜಾ ಉಪಸ್ಥಿತರಿದ್ದರು.

ಇದಕ್ಕೆ ಮೊದಲು ನಡೆದ ದ್ವಿಚಕ್ರ ವಾಹನ ಜಾಥಾವನ್ನು ಉಡುಪಿ ನ್ಯಾಯಾಲಯ ಆವರಣದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವೆಂಕಟೇಶ್ ನಾಯ್ಕಾ ಟಿ. ಉದ್ಘಾಟಿಸಿದರು. ಈ ಸಂದಭರ್ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರ್ಗಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News