ಪ್ರಧಾನಿ ಟೀಕಿಸುವುದಕ್ಕಾಗಿ ಗೌರಿ ದಿನ ಬಳಕೆ: ಸುಲೋಚನಾ ಭಟ್ ಆರೋಪ
ಮಂಗಳೂರು, ಫೆ. 1: ಬೆಂಗಳೂರಿನಲ್ಲಿ ಗೌರಿಲಂಕೇಶ್ ಅವರ ಹುಟ್ಟು ಹಬ್ಬ ಸಂದರ್ಭದಲ್ಲಿ ಆಯೋಜಿಸಿದ ಕಾರ್ಯಕ್ರಮವನ್ನು ಪ್ರಧಾನಿ ಅವರನ್ನು ಟೀಕಿಸಲು ಬಳಸಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಜಿ.ಕೆ. ಭಟ್ ಆರೋಪಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌರಿ ಅವರ ನೆನಪಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರ ಬದುಕಿನ ಸಾಧನೆಯ ಬಗ್ಗೆಯಾಗಲೀ, ಹತ್ಯೆ ಮಾಡಿದವರನ್ನು ಬಂಧಿಸದೇ ಇರುವ ಸರ್ಕಾರದ ವೈಫಲ್ಯದ ಬಗ್ಗೆ ಪ್ರತಿಭಟನೆಯಾಗಲೀ ವ್ಯಕ್ತವಾಗಿಲ್ಲ. ದೇಶದ ಪ್ರಧಾನಿಯನ್ನೇ ಟೀಕಿಸುವುದರಲ್ಲಿ ಎಲ್ಲರೂ ಮಗ್ನರಾಗಿದ್ದರು. ಅದಕ್ಕಾಗಿ ಹಿರಿಯರಾದ ಎಚ್. ಎಸ್. ದೊರೆಸ್ವಾಮಿ ಅಂತಹವರನ್ನು ಬಳಸಿಕೊಳ್ಳಲಾಗಿದೆ. ಅಲ್ಲದೆ ಪ್ರಧಾನಿ ಕರ್ನಾಟಕಕ್ಕೆ ಬರಬಾರದು ಎಂಬ ಫರ್ಮಾನು ಹೊರಡಿಸಿದ್ದಾರೆ. ಇದನ್ನು ಬಿಜೆಪಿ ಖಂಡಿಸುತ್ತದೆ ಎಂದು ಅವರು ಹೇಳಿದರು.
ಮಂಗಳೂರಿನಲ್ಲಿಯೂ ಕೋಮು ಸೌಹಾರ್ದತೆಗಾಗಿ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ಮಟ್ಟು ಅವರು ರಾಜಕೀಯ ಟೀಕೆಗಳನ್ನು ಮಾಡುವ ಮೂಲಕ ಸಾಮರಸ್ಯ ಕೆಡಿಸಲು ಬಳಸಿಕೊಂಡಿದ್ದಾರೆ. ಕುದ್ರೋಳಿ ದೇವಸ್ಥಾನವೇನೂ ದಿನೇಶ್ ಅಮೀನ್ ಮಟ್ಟು ಅವರ ವೈಯಕ್ತಿಕ ಆಸ್ತಿಯಲ್ಲ ಎಂದು ಅವರು ಹೇಳಿದರು.
ಜಾತ್ಯತೀತೆಯ ಹೆಸರಿನಲ್ಲಿ, ಜಾತೀಯ ಮತ್ತು ಮತೀಯ ಭಾವನೆ ಕೆದಕಿ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ರಾಜಕೀಯ ಲಾಭ ಮಾಡಿಕೊಳ್ಳಲು ನಡೆಯುತ್ತಿರುವ ಹುನ್ನಾರವನ್ನು ಜನರು ಅರ್ಥ ಮಾಡಿಕೊಳ್ಳಬಲ್ಲರು. ಕನ್ನಡ ಸಂಘಗಳನ್ನು ಬಳಸಿಕೊಂಡು, ಎಚ್.ಎಸ್. ದೊರೆಯಸ್ವಾಮಿಯಂತಹ ಹಿರಿಯರನ್ನು ಬಳಸಿಕೊಂಡು ಮಾಡುವ ರಾಜಕೀಯ, ಪ್ರಧಾನಿಗೆ ತೋರುವ ಅಗೌರವದ ನಡೆಯೂ ಜನರ ಅರಿವಿಗೂ ಬಂದಿದೆ. ಗುಜರಾತ್ನಲ್ಲಿ ಜಿಗ್ನೇಶ್ ಮೇವಾನಿ ಮತ್ತು ಅಲ್ಪೇಶ್ ಠಾಕೂರ್ ಅವರ ಮೂಲಕ ರಾಜಕೀಯ ಮಾಡಿದಂತೆ ಕರ್ನಾಟಕದಲ್ಲಿಯೂ ಕಲಾವಿದ ಪ್ರಕಾಶ್ ರೈ ಅವರನ್ನು ಉಪಯೋಗಿಸಿಕೊಂಡು ರಾಜಕೀಯ ಮಾಡಲು ಹೊರಟಿದ್ದಾರೆ. ಆದರೆ ಜನರೇ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ವಿಕಾಸ್ ಪುತ್ತೂರು, ಸಂಜಯ್ ಪ್ರಭು, ಸತೀಶ್ ಪ್ರಭು, ಜಿತೇಂದ್ರ ಕೊಟ್ಟಾರಿ ಉಪಸ್ಥಿತರಿದ್ದರು.