ಹೆಜಮಾಡಿ ತಾಲ್ಲೂಕು ಕ್ರೀಡಾಂಗಣ ಅಭಿವೃದ್ಧಿಗೆ ಚಾಲನೆ

Update: 2018-02-02 17:46 GMT

ಪಡುಬಿದ್ರೆ, ಫೆ. 2: ಹೆಜಮಾಡಿ ಮೀನುಗಾರಿಕಾ ಬಂದರಿಗೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಅನುದಾನ ಮಂಜೂರು ಮಾಡಿದ್ದು, ಕೇಂದ್ರ ಸರ್ಕಾರದ ಶೇ. 50 ರಷ್ಟು ಅನುದಾನ ಬಿಡುಗಡೆ ಮಾಡಿದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಹೆಜಮಾಡಿಯಲ್ಲಿ ರೂ. 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುವ ತಾಲ್ಲೂಕು ಕ್ರೀಡಾಂಗಣ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿದ ಅವರು ಮಾತನಾಡಿದರು.

ಈ ಹಿಂದೆ ಕೇಂದ್ರ ಸರ್ಕಾರವು ಬಂದರು ನಿರ್ಮಾಣಕ್ಕೆ ಶೇ. 25ರಷ್ಟು ಅನುದಾನ ನೀಡುವುದಾಗಿ ತಿಳಿಸಿತ್ತು. ಆದರೆ ಇತ್ತೀಚೆಗೆ ಮೀನುಗಾರರ ನಿಯೋಗಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ನೀಡಿದ ಭರವಸೆಯಂತೆ ರಾಜ್ಯ ಸರ್ಕಾರ ಬಂದರು ನಿರ್ಮಾಣಕ್ಕೆ ಶೇ. 50 ಅನುದಾನ ನೀಡುವ ಬಗ್ಗೆ ಒಪ್ಪಿಗೆ ಸೂಚಿಸಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಕ್ರೀಡಾಂಗಣ ಅಭಿವೃದ್ಧಿ: ಹೆಜಮಾಡಿಯ ಪುರಾತನ ಪುಟ್ಬಾಲ್ ಮೈದಾನವನ್ನು ಉಳಿಸಿಕೊಂಡು ಕ್ರೀಡಾಂಗಣ ಅಭಿವೃದ್ಧಿಗೆ ರೂಪುರೇಷೆ ಸಿದ್ದಪಡಿಸಲಾಗಿದೆ. ಕ್ರೀಡಾಂಗಣ ಅಭಿವೃದ್ಧಿಗೆ ರೂ. 3 ಕೋಟಿ ಅನುದಾನ ನೀಡಲು ಸರಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಇದೀಗ 2 ಕೋಟಿ ಮಂಜೂರಾಗಿದ್ದು, ಅದರಲ್ಲಿ ಒಂದು ಕೋಟಿ ಮೊತ್ತವನ್ನು ನಿರ್ಮಿತಿ ಕೇಂದ್ರಕ್ಕೆ ಬಿಡುಗಡೆ ಮಾಡಲಾಗಿದೆ.

ಹೆಜಮಾಡಿ ಗ್ರಾಪಂ ಕಟ್ಟಡ ನಿರ್ಮಾಣಕ್ಕೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ರೂ. 10ಲಕ್ಷ ಅನುದಾನ ನೀಡಲಾಗುವುದು. ಮಹಾಲಿಂಗೇಶ್ವರ ದೇವಸ್ಥಾನ ದಿಂದ ಬೋರುಗುಡ್ಡೆ ವರೆಗಿನ ರಸ್ತೆಯನ್ನು ರೂ. 10 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಹೆಜಮಾಡಿಯಲ್ಲಿ ರುದ್ರಭೂಮಿ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದು, ಸಮಸ್ಯೆ ಹಿನ್ನಲೆಯಲ್ಲಿ ಮೂಡುಬೆಳ್ಳೆಗೆ ನಿಗಧಿಯಾಗಿರುವ ಅನುದಾನವನ್ನು ಇಲ್ಲಿಗೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಮಾತನಾಡಿ,  2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುವ ಕ್ರೀಡಾಂಗಣ 400 ಮೀ. ಮಡ್ ಟ್ರ್ಯಾಕ್, ಪ್ರೇಕ್ಷಕರ ಗ್ಯಾಲರಿ, ಕಚೇರಿ ಕಟ್ಟಡ ಸಹಿತ 6 ಅಂಗಡಿ ಕೋಣೆಗಳನ್ನು ಒಳಗೊಂಡಿದೆ. ಕಾಮಗಾರಿ ಜೂನ್‌ನಲ್ಲಿ ಪೂರ್ಣಗೊಳ್ಳಲಿದೆ. ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಯುವಚೈತನ್ಯ ಯೋಜನೆಯಡಿ ಪ್ರತಿ ಗ್ರಾಮದ 18ರಿಂದ 35 ವರ್ಷದೊಳಗಿನ ಯುವಕರಿರುವ ಯುವಕ ಮಂಡಲಗಳಿಗೆ ರೂ. 40 ಸಾವಿರ ಮೌಲದ್ಯ ಕ್ರೀಡಾ ಕಿಟ್ ವಿತರಿಸಲಾಗುವುದು ಎಂದರು.

ಜಿಲ್ಲಾ ಪಂ. ಸದಸ್ಯ ಶಶಿಕಾಂತ ಪಡುಬಿದ್ರಿ, ತಾಲ್ಲೂಕು ಪಂ. ಸದಸ್ಯರಾದ ರೇಣುಕಾ ಪುತ್ರನ್, ಗೀತಾ ವಾಗ್ಲೆ, ಹೆಜಮಾಡಿ ಗ್ರಾಮ ಪಂ. ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಸದಸ್ಯೆ ಸುಧಾ ಸೀತಾರಾಮ್, ಅಬ್ದುಲ್ ರಹ್ಮಾನ್, ರವೀಂದ್ರ ಹೆಜಮಾಡಿ, ಪಿಡಿಒ ಮಮತಾ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ನವೀನಚಂದ್ರ ಜೆ ಶೆಟ್ಟಿ, ಸುಧೀರ್ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.

ಶೀಘ್ರದಲ್ಲಿ ತಾಲೂಕಿಗೆ ಚಾಲನೆ: ಕಾಪು ತಾಲೂಕು ರಚನೆ ಸಂಬಂಧ ಅಂತಿಮ ನೋಟಿಫಿಕೇಶನ್ ಆಗಿದ್ದು, ಕಂದಾಯ ಸಚಿವರು ಫೆಬ್ರವರಿ ತಿಂಗಳಲ್ಲಿ ಕಾಪುವಿಗೆ ಆಗಮಿಸಿ ತಾಲೂಕು ಕಾರ್ಯಾರಂಭಕ್ಕೆ ಚಾಲನೆ ನೀಡುವುದಾಗಿ ಶಾಸಕ ವಿನಯಕುಮಾರ್ ಸೊರಕೆ ಹೇಳಿದರು.

ಮೂಡುಬೆಳ್ಳೆ ಸೇರ್ಪಡೆಗೆ ಮಾತ್ರ ಏಕೈಕ ಆಕ್ಷೇಪವಿದೆ. ಕಾಪು ಕ್ಷೇತ್ರದ ಭಾಗಗಳು ಉಡುಪಿ, ಬ್ರಹ್ಮಾವರ ಹಾಗೂ ಹೆಬ್ರಿ ಭಾಗಕ್ಕೆ ಸೇರಿಕೊಂಡಿದ್ದು, ಅ ಪ್ರದೇಶಗಳನ್ನು ಕಾಪು ಮತ್ತು ಉಡುಪಿ ತಾಲೂಕಿಗೆ ಸೀಮಿತಗೊಳಿಸಿ ಆಡಳಿತಾತ್ಮಕವಾಗಿ ವಿಂಗಡನೆ ಮಾಡಲಾಗುವುದು. ಕಾಪು ತಾಲೂಕಾಗುವ ಸಂದರ್ಭದಲ್ಲಿ ಶಿರ್ವ ಹಾಗೂ ಪಡುಬಿದ್ರಿಯಲ್ಲಿ ನಾಡ ಕಚೇರಿ ಬರಲಿವೆ. ಮೂಡುಬೆಳ್ಳೆಯನ್ನು ಶಿರ್ವ ನಾಡ ಕಚೇರಿ ವ್ಯಾಪ್ತಿಗೆ ಸೇರ್ಪಡೆ ಮಾಡಿ ಕಂದಾಯಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯಗಳು ಅಲ್ಲಿಯೇ ನಡೆಯುವ ಹಾಗೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News