×
Ad

ಆಫ್ರಿಕದಲ್ಲಿ ಅಪಹರಣಕ್ಕೀಡಾದ ಹಡಗಿನಲ್ಲಿ ಕಾಸರಗೋಡಿನ ಯುವಕ

Update: 2018-02-03 19:56 IST

ಕಾಸರಗೋಡು, ಫೆ.3: ಆಫ್ರಿಕಾ ಕರಾವಳಿಯಲ್ಲಿ ಕಡಲ್ಗಳ್ಳರು ತೈಲ ಸಾಗಾಟದ ಹಡಗೊಂದನ್ನು ಅಪಹರಿಸಿದ್ದು, ಅದರಲ್ಲಿ ಕಾಸರಗೋಡು ನಿವಾಸಿ ಯೋರ್ವರು ಇದ್ದಾರೆಂಬ ಮಾಹಿತಿ ಲಭಿಸಿದೆ. 

ಉದುಮ ಪೇರಳೆ ಹಿತ್ತಿಲಿನ ಶ್ರೀಉಣ್ಣಿ (25) ಈ ಹಡಗಿನಲ್ಲಿದ್ದು, ಹಡಗು ಅಪಹರಣದ ಕುರಿತು ಮನೆಯವರಿಗೆ ಮಾಹಿತಿ ಲಭಿಸಿದೆ. ಮುಂಬೈ ಕೇಂದ್ರವಾಗಿ ಕಾರ್ಯಾಚರಿಸುತ್ತಿರುವ ಪನಾಮಾ ನೋಂದಣಿಯ ಮರೈನ್ ಎಕ್ಸ್‌ಪ್ರೆಸ್ ಎಂಬ ಹಡಗನ್ನು ಜ.31ರಂದು ಕಡಲ್ಗಳ್ಳರು ಅಪಹರಿಸಿದ್ದಾರೆ. ಈ ಹಡಗಿನಲ್ಲಿ ಶ್ರೀಉಣ್ಣಿ ಸೇರಿದಂತೆ 20 ಮಂದಿಯಿದ್ದರು ಎಂದು ತಿಳಿದುಬಂದಿದೆ. ಹಡಗಿನೊಂದಿಗಿನ ಸಂಪರ್ಕ ಕಡಿತಗೊಂಡಿರುವುದಾಗಿ ಕಂಪೆನಿ ಅಧಿಕಾರಿಗಳು ಮನೆ ಯವರಿಗೆ ತಿಳಿಸಿದ್ದಾರೆ.

ಶ್ರೀಉಣ್ಣಿ (25) ನಾಲ್ಕು ವರ್ಷಗಳಿಂದ ಈ ಹಡಗಿನಲ್ಲಿ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ರಜೆಯಲ್ಲಿ ಊರಿಗೆ ಬಂದಿದ್ದ ಅವರು ಒಂದು ತಿಂಗಳ ಹಿಂದೆಯಷ್ಟೇ ಮತ್ತೆ ಕೆಲಸಕ್ಕೆ ಸೇರ್ಪಡೆಗೊಂಡಿದ್ದರು. ಜ.31ರಂದು ಅಪರಾಹ್ನ 3 ಗಂಟೆಗೆ ಅವರು ಮನೆಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದರು. ಅದೇ ದಿನ ರಾತ್ರಿಯಿಂದ ಹಡಗು ಮತ್ತು ಮುಂಬೈಯಲ್ಲಿರುವ ಹಡಗು ಕಂಪೆನಿಯ ಕೇಂದ್ರದ ನಡುವಿನ ಸಂಪರ್ಕ ಕಡಿದಿರುವುದಾಗಿ ಕಂಪೆನಿ ಮೂಲಗಳು ತಿಳಿಸಿವೆ. 

ಹಡಗು ಅಪಹರಣ ಸುದ್ದಿ ತಿಳಿದು ಮನೆಯಲ್ಲಿ ಆತಂಕ ಮನೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News