ಉಡುಪಿ: ಕೋಮವಾದಿ ಶಕ್ತಿಗಳ ವಿರುದ್ಧ ಕ್ರಮಕ್ಕೆ ಎಸ್ಪಿಗೆ ವೆಲ್ಫೇರ್ ಪಾರ್ಟಿ ಮನವಿ
ಉಡುಪಿ, ಫೆ.7: ಜನರ ಮನಸ್ಸುಗಳನ್ನು ಕೆಡಿಸಿ ಕೋಮು ಧ್ರುವೀಕರಣ ಮಾಡಲು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿರುವ ಕೋಮುವಾದಿ ಶಕ್ತಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರಗಿಸುವ ಮೂಲಕ ಜಿಲ್ಲೆಯ ಜನರಿಗೆ ನೆಮ್ಮದಿ ಒದಗಿಸಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲೆ ಆಗ್ರಹಿಸಿದೆ.
ಈ ಬಗ್ಗೆ ಪಕ್ಷದ ನಿಯೋಗ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ ಅವರನ್ನು ಭೇಟಿ ನೀಡಿ ಮನವಿ ಸಲ್ಲಿಸಿತು. ಜಿಲ್ಲೆಯಲ್ಲಿ ಸಾಮಾಜಿಕ ಕೆಡುಕುಗಳಾದ ಮಾದಕದ್ರವ್ಯಗಳ ವ್ಯಸನ, ಮದ್ಯಪಾನ, ಜುಗಾರಿ, ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿರುವ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿವೆ. ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿಯೋಗ ಒತ್ತಾಯಿಸಿದೆ.
ಕರಾವಳಿ ಪ್ರದೇಶವೂ ಕೋಮು ವೈಷಮ್ಯವನ್ನು ಉಂಟು ಮಾಡಿ ಜನರ ಮದ್ಯೆ ಗೋಡೆ ಕಟ್ಟುವ ಕೋಮುವಾದಿಶಕ್ತಿಗಳು ಸಾಮಾಜಿಕ ಜಾಲತಾಣಗಳನ್ನು ಜನರ ಮನಸ್ಸುಗಳನ್ನು ಕೆಡಿಸುತ್ತಿದೆ. ಮುಂದಿನ ಕೆಲವೆ ತಿಂಗಳಗಳಲ್ಲಿ ವಿಧಾನ ಸಭಾ ಚುನಾವಣೆಗಳು ನಡೆಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಈ ಪ್ರಕ್ರಿಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ನಿಯೋಗ ತಿಳಿಸಿದೆ.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಅನ್ವರ್ ಅಲಿ ಕಾಪು, ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಉದ್ಯಾವರ, ಕಾರ್ಯದರ್ಶಿ ರಿಯಾಝ್ ಅಹಮದ್, ಸದಸ್ಯರಾದ ಅಬ್ದುಲ್ ಅಝೀಜ್ ಆದಿಉಡುಪಿ, ಮುಹಮ್ಮದ್ ಇಕ್ಬಾಲ್ ಕಾಪು, ಡಾ.ಶಹಜಹಾನ್ ತೋನ್ಸೆ, ಜಿಯಾ ಮನ್ನ ಉಪಸ್ಥಿತರಿದ್ದರು.