ಸೀತಾಲಕ್ಷ್ಮೀ ಕರ್ಕಿಕೋಡಿಗೆ ಎರಡನೆ ಪಿಹೆಚ್ಡಿ ಪದವಿ
ಮಂಗಳೂರು, ಫೆ. 7: ಖ್ಯಾತ ವಿದ್ವಾಂಸ, ಸಂಶೋಧಕ, ಮುಂಬೈ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿ.ಎನ್.ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ಸೀತಾಲಕ್ಷ್ಮೀ ಕರ್ಕಿಕೋಡಿ ಅವರು ನಡೆಸಿದ ಕನ್ನಡ ಪತ್ರಿಕೋದ್ಯಮದಲ್ಲಿ ಸ್ತ್ರೀ ಪರತೆ ಸಂಶೋಧನಾ ಪ್ರೌಢ ಪ್ರಬಂಧಕ್ಕೆ ಮುಂಬೈ ವಿವಿ ಪಿಎಚ್ಡಿ ಪದವಿ ಪ್ರದಾನಿಸಿ ಗೌರವಿಸಿದೆ.
ಇದು ಸೀತಾಲಕ್ಷ್ಮೀ ಅವರಿಗೆ ಸಂದ ಎರಡನೆ ಡಾಕ್ಟರೇಟ್ ಪದವಿಯಾಗಿದೆ. ಈ ಹಿಂದೆ ಮಾಸ್ತಿ ಅವರ ಕಥೆಗಳಲ್ಲಿ ಸ್ತ್ರೀ ಪ್ರತಿನಿಧೀಕರಣದ ಬಗ್ಗೆ ಹೆಸರಾಂತ ಸಂಶೋಧಕ ಡಾ.ಮೋಹನ ಕುಂಟಾರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಹಂಪಿ ವಿಶ್ವ ವಿದ್ಯಾಲಯಕ್ಕೆ ಮಹಾ ಪ್ರಬಂಧ ಸಲ್ಲಿಸಿ ಪಿಎಚ್ಡಿ ಪದವಿ ಪಡೆದಿದ್ದರು.
ರಂಗಕರ್ಮಿ ಸದಾನಂದ ಸುವರ್ಣರ ಸಾಧನೆ ಹಿನ್ನೆಲೆಯಲ್ಲಿ ಡಾ. ಜಿ.ಎನ್.ಉಪಾಧ್ಯರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿ ಮುಂಬೈ ವಿವಿಯಿಂದ ಎಂಫೀಲ್ ಪದವಿ ಗಳಿಸಿದ್ದಾರೆ.
ವೃತ್ತಿಯಲ್ಲಿ ವಿಜಯ ಕರ್ನಾಟಕ ಮಂಗಳೂರು ಆವೃತ್ತಿಯಲ್ಲಿ ಹಿರಿಯ ಉಪ ಸಂಪಾದಕಿಯಾಗಿರುವ ಡಾ. ಸೀತಾಲಕ್ಷ್ಮೀ ಕಕಿರ್ಕೋಡಿ ಹತ್ತಾರು ಕೃತಿಗಳನ್ನು ರಚಿಸಿರುವ ಅವರು ಬನ್ನಂಜೆ ರಾಮಾಚಾರ್ಯ ಪ್ರಶಸ್ತಿ, ಜೆಡಿಎನ ಪ್ರಶಸ್ತಿ ಪಡೆದಿದ್ದಾರೆ. ಪತ್ರಿಕೋದ್ಯಮ ಸ್ನಾತಕೋತ್ತರದಲ್ಲೂ ರ್ಯಾಂಕ್ ಸಂಪಾದಿಸಿದ ಅವರು ಹಿರಿಯ ಸಾಹಿತಿ ವಿ.ಗ.ನಾಯಕ ಹಾಗೂ ಶ್ಯಾಮಲಾ ಕರ್ಕಿಕೋಡಿ ದಂಪತಿಯ ಪುತ್ರಿ.